ದೇವರ ಎತ್ತುಗಳಿಗೆ ಮೇವು ಸಂಗ್ರಹ ಅಭಿಯಾನ
Team Udayavani, Mar 10, 2021, 7:27 PM IST
ಜಗಳೂರು: ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ವತಿಯಿಂದ “ದೇವರ ಎತ್ತುಗಳಿಗೆ ಮೇವು ಸಂಗ್ರಹ ಅಭಿಯಾನ’ಕ್ಕೆ ಉತ್ತಮ ಸಹಕಾರ ದೊರೆಯುತ್ತಿದೆ ಎಂದು ಮ್ಯಾಸ ನಾಯಕ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ದೊಡ್ಡಮನಿ ಪ್ರಸಾದ್ ಹೇಳಿದರು.
ದೇವರ ಎತ್ತುಗಳಿಗೆ ಮೇವು ಸಂಗ್ರಹ ಅಭಿಯಾನಕ್ಕೆ ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದ ಹನುಮಂತಪ್ಪ, ನಿವೃತ್ತ ಶಿಕ್ಷಕರು ಮತ್ತು ಹನುಮಂತಪ್ಪ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ನೀಡಿದ ಎರಡು ಲೋಡ್ ಮೇವು ಪಡೆದು ನಂತರ ಅವರು ಮಾತನಾಡಿದರು.
ಮೇವು ಸಂಗ್ರಹಣೆ ಮಾಡಿ ಚಳ್ಳಕೆರೆ ತಾಲೂಕು ಮಲ್ಲೂರಹಳ್ಳಿಯ ಶ್ರೀ ರಾಜಲು ದೇವರು ಮತ್ತು ದಾಸರ ಮುತ್ತೇನಹಳ್ಳಿ ಶ್ರೀ ಓಬಳ ದೇವರ ಎತ್ತುಗಳಿಗೆ ಕಳುಹಿಸಿಕೊಡಲಾಗುವುದು. ಬುಡಕಟ್ಟು ಸಂಸ್ಕೃತಿಯ ದೇವರ ಎತ್ತುಗಳ ಉಳಿವಿಗಾಗಿ ಮೇವು ಸಂಗ್ರಹ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಿ ಬುಡಕಟ್ಟು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು. ಮುಖಂಡರಾದ ಬಿ.ಕರಿಯಪ್ಪ, ಸಿದ್ದಯ್ಯನಕೋಟೆ ಗ್ರಾಮದ ಎಸ್. ಜೋತಿಲಿಂಗಪ್ಪ, ದೇವರಾಜ ಪಾಳೇಗಾರ, ಹನುಮಂತಪ್ಪ, ಮುದ್ದೇರ ಹನುಮಂತಪ್ಪ, ಹೊಳಕೆರೆ ನಿಂಗಪ್ಪ, ಕುಣೆಮಾದಿಹಳ್ಳಿ ಹನುಮಂತಪ್ಪ, ಉಜ್ಜಿನಪ್ಪ, ಹೊಳಕೆರೆ ಬಸವರಾಜಪ್ಪ, ಅಂಜಿನಪ್ಪ, ಹೊಳಕೆರೆ ಗೋಣೆಪ್ಪ, ಗಜೇಂದ್ರ, ಕೆ.ಸಿ.ರಮೇಶ, ದಾಸರ ಮುತ್ತೇನಹಳ್ಳಿ ಸಣ್ಣ ಓಬಯ್ಯ, ಗೊಂಚಿಗಾರ ದೊಡ್ಡಯ್ಯ, ಕಾಕಸೂರಯ್ಯ ಇದ್ದರು.