ಕೆರೆ ತುಂಬಿಸುವ ಕಾಮಗಾರಿ ಪೂರ್ಣಗೊಳಿಸಿ: ಸಿದ್ದೇಶ್ವರ
Team Udayavani, Feb 17, 2021, 4:24 PM IST
ಜಗಳೂರು: 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಜೂನ್-ಜುಲೈ ವೇಳೆಗೆ ಮೊದಲ ಹಂತದಲ್ಲಿ 17 ಕೆರೆಗಳಿಗೆ ನೀರು ಹರಿಸಬೇಕು ಎಂದು ಸಂಸದ ಜಿ.ಎಂ ಸಿದ್ದೇಶ್ವರ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹರಿಹರ ತಾಲೂಕಿನ ದೀಟೂರು ಬಳಿ 640 ಕೋಟಿ ರೂ. ವೆಚ್ಚದ ಜಗಳೂರು ತಾಲೂಕಿನ 57 ಕೆರೆ ತುಂಬಿಸುವ ಯೋಜನೆಯ ಜಾಕ್ವೆಲ್ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು. ದೀಟೂರುನಿಂದ ಚಟ್ನಹಳ್ಳಿ ಗುಡ್ಡದವರೆಗೆ 31 ಕಿಮೀ ದೂರದ ಪೈಪ್ಲೈನ್ ಕಾಮಗಾರಿಯಲ್ಲಿ 13.5 ಕಿಮೀ ಕಾಮಗಾರಿ ಬಾಕಿ ಉಳಿದಿದೆ. ಅ ಧಿಕಾರಿಗಳು ಜಮೀನುಗಳಲ್ಲಿನ ಭತ್ತದ ಬೆಳೆ ಬರುವ ತನಕ ಕಾಯದೆ ರೈತರಿಗೆ ಬೆಳೆ ಪರಿಹಾರ ಒದಗಿಸಿ ಕಾಮಗಾರಿ ಪೂರ್ಣಗೊಳಿಸಬೇಕೆಂದರು.
ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ಜಗಳೂರು ತಾಲೂಕಿನ 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಭರದಿಂದ ಸಾಗಿದೆ. ಈಗಾಗಲೆ 120 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಜೂನ್-ಜುಲೈ ಮಾಹೆಯಲ್ಲಿ 17 ಕೆರೆಗಳಿಗೆ ನೀರು ತುಂಬಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಶಾಂತಕುಮಾರಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್, ಮುಖಂಡರಾದ ಚಟ್ನಹಳ್ಳಿ ರಾಜಣ್ಣ, ಪಪಂ ನಾಮನಿರ್ದೇಶಿತ ಸದಸ್ಯ ಬಿ.ಪಿ. ಸುಬಾನ್, ಸೂರ್ಯಕಿರಣ್, ಶಿವಕುಮಾರ್, ಚಂದ್ರ ನಾಯ್ಕ, ಸುರೇಶ್ ಗೌಡ, ಎಇಇ ಶ್ರೀಧರ್ ಮತ್ತಿತರರು ಹಾಜರಿದ್ದರು.