ರಾಜ್ಯ ಸರ್ಕಾರದ ನೆರವಿಲ್ಲದೆ ಕ್ರೀಡಾ ಮೈದಾನ ನಿರ್ಮಾಣ!
Team Udayavani, Jul 27, 2018, 12:57 PM IST
ಹುಬ್ಬಳ್ಳಿ: ಕ್ರಿಕೆಟ್ ಪ್ರತಿಭೆಗಳನ್ನು ಪ್ರೇರೇಪಿಸುವ, ಪ್ರೋತ್ಸಾಹಿಸುವ ಹಾಗೂ ಕ್ರಿಕೆಟ್ ಆಟಕ್ಕೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಇಲ್ಲಿನ ನೃಪತುಂಗ ಬೆಟ್ಟದ ಹತ್ತಿರದ ಸಪ್ತಗಿರಿ ಪಾರ್ಕ್ ಪ್ರದೇಶದಲ್ಲಿ ಖಾಸಗಿ ಬಹುಪಯೋಗಿ ಕ್ರೀಡಾ ಮೈದಾನ ತಲೆ ಎತ್ತಿದ್ದು, ಆಗಸ್ಟ್ನಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಸಪ್ತಗಿರಿ ಪಾರ್ಕ್ ಬಳಿ ಶಿವಪ್ಪ ಶಿರೂರ ಅವರಿಗೆ ಸೇರಿದ 8.5 ಎಕರೆ ವಿಸ್ತೀರ್ಣದಲ್ಲಿ ಏಕಕಾಲಕ್ಕೆ ಎರಡು ಕ್ರಿಕೆಟ್ ಪಂದ್ಯಗಳನ್ನು ನಡೆಸಬಹುದಾದಷ್ಟು ವಿಶಾಲ ಜಾಗದಲ್ಲಿ ‘ಬಿಜಿ ಗ್ರೌಂಡ್’ ಕ್ರೀಡಾ ಸಂಕೀರ್ಣ ನಿರ್ಮಾಣಗೊಳ್ಳುತ್ತಿದೆ. ಕ್ರಿಕೆಟ್ ತರಬೇತುದಾರ ಉಸ್ತುವಾರಿ ಶಿವಾನಂದ ಗುಂಜಾಳ, ನಿಖೀಲ ಭೂಸದ ಅವರು ಬಿಡಿಕೆ ಫೌಂಡೇಶನ್ ಸಹಯೋಗ ಹಾಗೂ ಭರತ ಖೀಮಜಿ ಅವರ ಪ್ರೋತ್ಸಾಹದೊಂದಿಗೆ ಸರ್ಕಾರ ಹಾಗೂ ಕ್ರೀಡಾ ಪ್ರಾಧಿಕಾರದ ಯಾವುದೇ ಆರ್ಥಿಕ ನೆರವು ಇಲ್ಲದೆ ಮೈದಾನ ನಿರ್ಮಾಣ ಮಾಡುತ್ತಿದ್ದಾರೆ. ಮೈದಾನವನ್ನು ಬಾಡಿಗೆಯಾಗಿ ಕ್ರಿಕೆಟ್ ಸೇರಿದಂತೆ ಇತರೆ ಕ್ರೀಡೆಗಳಿಗೆ ನೀಡಲಾಗುತ್ತದೆ.
ಮೈದಾನದಲ್ಲಿ ಮುಖ್ಯ ಪಿಚ್ ಸೇರಿದಂತೆ ಒಟ್ಟು 12 ಟರ್ಫ್ಗಳನ್ನು ಕೆಎಸ್ಸಿಎ ಕ್ಯೂರೆಟ್ ನಿಯಮಾನುಸಾರ ನಿರ್ಮಿಸಲಾಗುತ್ತಿದೆ. ಮುಖ್ಯ ಪಿಚ್ನಲ್ಲಿ 10 ಅಡಿಗೆ ಒಂದರಂತೆ ಒಟ್ಟು ಐದು ಟರ್ಫ್ಗಳನ್ನು ಹಾಗೂ ಅದರ ಉತ್ತರ ದಿಕ್ಕಿಗೆ ನಾಲ್ಕು ಹಾಗೂ ದಕ್ಷಿಣ ದಿಕ್ಕಿಗೆ ಮೂರು ಟರ್ಫ್ಗಳನ್ನು ನಿರ್ಮಿಸಲಾಗುತ್ತಿದೆ. ಅದಕ್ಕಾಗಿ ಪಿಚ್ಗೆ 9 ಇಂಚ್ ಬೆಡ್ ಹಾಕಲಾಗಿದೆ. ಕಲಘಟಗಿ ಬಳಿಯ ಗ್ರಾಮವೊಂದರಿಂದ ವಿಶೇಷ ಮಣ್ಣು ತೆಗೆದುಕೊಂಡು ಬರಲಾಗಿದೆ. ಈ ಮಣ್ಣು ಶೇ.50ರಷ್ಟು ಆವೆಮಣ್ಣಿನ ಅಂಶ ಹೊಂದಿದೆ. ಒಂದು ಕ್ರಿಕೆಟ್ ಪಂದ್ಯ ಆಡಲು 3.5ಯಿಂದ 4 ಎಕರೆ ಜಾಗಬೇಕಾಗುತ್ತದೆ. ಈ ಮೈದಾನದಲ್ಲಿ ಮುಖ್ಯ ಪಿಚ್ನಿಂದ 110 ಯಾರ್ಡ್ನಲ್ಲಿ ಪಂದ್ಯವೊಂದನ್ನು ಆಡಬಹುದಾಗಿದೆ. ಇನ್ನುಳಿದ ಜಾಗದಲ್ಲಿ ಇನ್ನೊಂದು ಪಂದ್ಯವನ್ನು ಏಕಕಾಲದಲ್ಲಿ ನಡೆಸಬಹುದಾಗಿದೆ. ಇಷ್ಟು ವಿಶಾಲವಾದ ಮೈದಾನವನ್ನು ಕೆಎಸ್ಸಿಎ ಮೈದಾನ ಸಹ ಹೊಂದಿಲ್ಲ ಎನ್ನಲಾಗಿದೆ.
ರಣಜಿ ಪಂದ್ಯಕ್ಕೆ ಅನುಕೂಲ ರೀತಿ ಸಿದ್ಧತೆ: 0ನೂತನ ಮೈದಾನದಲ್ಲಿ ಬ್ಯಾಟ್ಸ್ಮನ್ ಹಾಗೂ ಬೌಲರ್ಗಳಿಗೆ ಹೇಳಿ ಮಾಡಿಸಿದಂತೆ ಮಧ್ಯಮ ಹಾಗೂ ಸ್ಪರ್ಧಾತ್ಮಕತೆ ರೀತಿ ಪಂದ್ಯಗಳು ನಡೆಯುವ ಹಾಗೆ ಬರ್ಮೋಡಾ ಹುಲ್ಲು ಬಳಸಿಕೊಂಡು ಪಿಚ್ ಸಿದ್ಧಪಡಿಸಲಾಗುತ್ತಿದೆ. ಈ ಮೈದಾನದಲ್ಲಿ 16 ವರ್ಷದೊಳಗಿನ, 19 ವರ್ಷದೊಳಗಿನ ಹಾಗೂ ರಣಜಿ ಪಂದ್ಯಗಳನ್ನು ನಡೆಸಲು ಅನುಕೂಲವಾಗುವಂತೆ ಸಿದ್ಧತೆ ಮಾಡಲಾಗುತ್ತಿದೆ. ಮೈದಾನ ಸುತ್ತಲು ಪೆವಿಲಿಯನ್ ನಿರ್ಮಿಸಲು ಉದ್ದೇಶಿಸಲಾಗಿದೆ.
ದಾನಿಗಳ ಕೊಡುಗೆ: ಕ್ರಿಕೆಟ್ ಹಾಗೂ ಕ್ರೀಡಾ ಸಮುಚ್ಛಯದ ಕಾಮಗಾರಿಯನ್ನು ನೋಡಿದ ಕ್ರೀಡಾಪ್ರೇಮಿಗಳು ಹಾಗೂ ಪ್ರೋತ್ಸಾಹಕರು ಈಗಾಗಲೇ ಸ್ಪ್ರಿಂಕ್ಲರ್, ಬೋರ್ವೆಲ್ ಹಾಕಿಸಿಕೊಟ್ಟಿದ್ದಾರೆ. ಓರ್ವರು ಪಿಚ್ ರೋಲರ್ ಸಹ ಕೊಡಲು ಮುಂದಾಗಿದ್ದಾರೆ. ಇನ್ನು ಕೆಲ ದಾನಿಗಳು ಅಗತ್ಯವಾದ ಸಾಮಗ್ರಿ ಹಾಗೂ ಪೆವಿಲಿಯನ್ ನಿರ್ಮಿಸಿ ಕೊಡಲು ಮುಂದಾಗಿದ್ದಾರೆ.
ನಿರ್ವಹಣೆಗೆ ಮಾಸಿಕ 75 ಸಾವಿರ ಖರ್ಚು: ಮೈದಾನ ನಿರ್ವಹಣೆಗೆ ಪ್ರತಿ ತಿಂಗಳು ಕನಿಷ್ಟ 75 ಸಾವಿರ ರೂ. ಖರ್ಚು ತಗಲುತ್ತದೆ. ಪ್ರತಿದಿನ ಐದು ಕಾರ್ಮಿಕರು ಬೇಕಾಗುತ್ತಾರೆ. ಪಂದ್ಯಗಳು ನಡೆದಾಗ ಕನಿಷ್ಟ 10 ಕಾರ್ಮಿಕರ ಬೇಕು. ಮೈದಾನದಲ್ಲಿನ ಟರ್ಫ್ ನಿರ್ವಹಣೆಗೆ 250 ಕೆಜಿ, 500 ಕೆಜಿ, 1000 ಕೆಜಿ, 2000 ಕೆಜಿ ಸಾಮರ್ಥ್ಯವುಳ್ಳ ಕನಿಷ್ಟ 4 ರೋಲರ್ಗಳ ಅವಶ್ಯಕತೆಯಿದೆ. ಮೈದಾನ ಸುತ್ತಲೂ 200 ಸಸಿಗಳನ್ನು ನೆಡಲಾಗುತ್ತಿದೆ.
ಸಮುಚ್ಛಯದಲ್ಲಿ ಏನೇನಿದೆ?
ಕ್ರೀಡಾ ಸಮುಚ್ಛಯದಲ್ಲಿ ಬ್ಯಾಡ್ಮಿಂಟನ್, ಸ್ಕೇಟಿಂಗ್ ಮೈದಾನ, ಸ್ವಿಮಿಂಗ್ ಫೂಲ್, ಟೆನ್ನಿಸ್ ಕೋಟ್, ವಾಲಿಬಾಲ್, ಕಬ್ಬಡ್ಡಿ ಮೈದಾನ ಇರಲಿದೆ. ಯಾರಾದರೂ ಕ್ರೀಡಾಪ್ರೇಮಿಗಳು ಹಾಗೂ ಪ್ರೋತ್ಸಾಹಕರು ಇಚ್ಛೆಪಟ್ಟರೆ ಖೋಖೋ, ಅಟ್ಯಾಪಟ್ಯಾ ಮೈದಾನಗಳನ್ನು ನಿರ್ಮಿಸಲು ಉದ್ದೇಶಿಸಿದ್ದಾರೆ. ಹೊಸದಾಗಿ ನಿರ್ಮಾಣವಾಗುತ್ತಿರುವ ಕ್ರಿಕೆಟ್ ಮೈದಾನವನ್ನು ಕೆಎಸ್ಸಿಎ ಹಾಗೂ ಬಿಸಿಸಿಐ ಪ್ರತಿನಿಧಿಗಳು ಸಹ ಬಂದು ವೀಕ್ಷಿಸಿದ್ದಾರೆ. ಒಂದು ವೇಳೆ ಕೆಎಸ್ಸಿಎ ಮೈದಾನದಲ್ಲಿ ರಣಜಿ ಪಂದ್ಯಗಳು ನಡೆಯುತ್ತಿದ್ದ ವೇಳೆ ಒಂದೇ ದಿನ ಎರಡು ಪಂದ್ಯಗಳು ಇದ್ದರೆ ಇನ್ನೊಂದು ಪಂದ್ಯವನ್ನು ಈ ಮೈದಾನದಲ್ಲಿ ನಡೆಸಬಹುದು. ಅಷ್ಟು ಅತ್ಯುತ್ತಮ ಗುಣಮಟ್ಟದಲ್ಲಿ ಮೈದಾನವನ್ನು ನಿರ್ಮಿಸಲಾಗುತ್ತಿದೆ.
ಸ್ಥಳೀಯ ಹಾಗೂ ಉತ್ತರ ಕರ್ನಾಟಕ ಭಾಗದ ಕ್ರೀಡಾ ಪ್ರತಿಭೆಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕೆಂಬ ನಿಟ್ಟಿನಲ್ಲಿ ಅವರಿಗೆ ಅವಕಾಶ ಒದಗಿಸಲು ಅಂದಾಜು 8.5 ಎಕರೆ ಜಾಗದಲ್ಲಿ ಸ್ವಂತ ಖರ್ಚಿನಲ್ಲಿ ಕ್ರಿಕೆಟ್ ಮೈದಾನ ಹಾಗೂ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಲಾಗುತ್ತಿದೆ. ಕ್ರೀಡಾ ಪ್ರೋತ್ಸಾಹದಾಯಕರು ಹಾಗೂ ದಾನಿಗಳು ಮುಂದೆ ಬಂದು ಕೊಡುಗೆ ನೀಡಲು ಇಚ್ಛಿಸಿದರೆ ಅದನ್ನು ಹೃದಯಪೂರ್ವಕವಾಗಿ ಸ್ವೀಕರಿಸಲಾಗುವುದು. ಯಾರಾದರೂ ಸಂಘ-ಸಂಸ್ಥೆಯವರು ಇಲ್ಲಿ ಕ್ರಿಕೆಟ್ ಪಂದ್ಯ ನಡೆಸಲು ಉತ್ಸುಕರಾದರೆ ಅವರಿಗೆ ದಿನಕ್ಕೆ ಅಂದಾಜು 8 ಸಾವಿರ ರೂ. ಬಾಡಿಗೆ ಆಕರಿಸಲಾಗುವುದು.
ಶಿವಾನಂದ ಗುಂಜಾಳ, ಕ್ರಿಕೆಟ್ ತರಬೇತಿದಾರ
. 8.5 ಎಕರೆ ವಿಸ್ತೀರ್ಣ, ಏಕಕಾಲಕ್ಕೆ 2 ಪಂದ್ಯ ನಡೆಸುವ ಸಾಮರ್ಥ್ಯ.
.ಉಕ ಕ್ರೀಡಾಪಟುಗಳಿಗೆ ಸಿಗಲಿದೆ ಅನುಕೂಲ.
.ಮೈದಾನ ನಿರ್ವಹಣೆಗೆ ಪ್ರತಿ ತಿಂಗಳು ಬೇಕು 75 ಸಾವಿರ ರೂ.
.16, 19 ವರ್ಷದೊಳಗಿನ, ರಣಜಿ ಪಂದ್ಯ ಆಡಲು ಅನುಕೂಲ.
.ಪ್ರತಿದಿನ ಬಾಡಿಗೆ 8 ಸಾವಿರ ರೂ., ದಾನಿಗಳ ಸಹಾಯ
ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !