ಮತಕ್ಕಾಗಿ ಮನವೊಲಿಸೋ ತಂತ್ರ!
Team Udayavani, Aug 29, 2017, 12:39 PM IST
ಹುಬ್ಬಳ್ಳಿ: ವಿಧಾನಸಭಾ ಚುನಾವಣಾ ಮುನ್ನಾ ವರ್ಷದ ಈ ಬಾರಿಯ ಗಣೇಶೋತ್ಸವ ವಿಶೇಷ ಮಹತ್ವ ಪಡೆದುಕೊಂಡಿದೆ. 2018ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ರಾಜಕೀಯ ಆಕಾಂಕ್ಷಿಗಳು ವಿನಾಯಕ ಭಕ್ತರ ಮನವೊಲಿಸುವ ದಿಸೆಯಲ್ಲಿ ಹಲವಾರು ತಂತ್ರಗಳನ್ನು ರೂಪಿಸಿದ್ದಾರೆ. ವಿಘ್ನರಾಜ ಗಜಾನನ ಆಶೀರ್ವದಿಸಿದರೆ ತಮ್ಮ ಹೆಬ್ಬಯಕೆ ಈಡೇರುವುದೆಂಬ ವಿಶ್ವಾಸ ಆಕಾಂಕ್ಷಿಗಳದ್ದಾಗಿದೆ.
ಮತದಾರರನ್ನು ತಲುಪಲು ಒಳ್ಳೆ ಸಂದರ್ಭವನ್ನು ಶ್ರೀ ಗಣೇಶ ಒದಗಿಸಿಕೊಡುವುದರಿಂದ ಅವಕಾಶ ಸದುಪಯೋಗಕ್ಕೆ ಮುಂದಾಗಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಸೋತವರು, ಗೆದ್ದವರು, ಟಿಕೇಟ್ಗಾಗಿ ಬಲಾಬಲ ಪ್ರದರ್ಶಿಸಿದವರು ಸಾರ್ವಜನಿಕ ಗಣೇಶೋತ್ಸವವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಉದಾರವಾಗಿ ದೇಣಿಗೆ ನೀಡುತ್ತಿದ್ದಾರೆ.
ಜಿಎಸ್ಟಿ ಆತಂಕ ಪಾರು: ಜಿಎಸ್ಟಿ ಹೊಡೆತದಿಂದ ವ್ಯಾಪಾರಸ್ಥರು ಹಾಗೂ ಉದ್ಯಮಿಗಳು ನಿರೀಕ್ಷಿತ ಮಟ್ಟದ ದೇಣಿಗೆ ಕೊಡದಿದ್ದರಿಂದ ಗಣೇಶೋತ್ಸವ ಸಮಿತಿಯವರು ಚಿಂತೆಗೀಡಾಗಿದ್ದರು. ಆದರೆ ಹುಬ್ಬಳ್ಳಿ ಸೆಂಟ್ರಲ್, ಹುಬ್ಬಳ್ಳಿ ಪೂರ್ವ, ಧಾರವಾಡ ಕ್ಷೇತ್ರಗಳಲ್ಲಿ ಶಾಸಕರಾಗಲು ಬಯಸುವ ಅಭ್ಯರ್ಥಿಗಳು ಧಾರಾಳವಾಗಿ ದೇಣಿಗೆ ನೀಡುವ ಮೂಲಕ ಸಮಿತಿಯ ಮುಖಂಡರನ್ನು ಸಂತಸಗೊಳಿಸಿದ್ದಾರೆ.
ದೇಣಿಗೆ ಹರಿದು ಬಂದಿದ್ದರಿಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರಿಗೆ ದೇಣಿಗೆಗಾಗಿ ಹೆಚ್ಚು ಅಲೆದಾಡುವ ಸ್ಥಿತಿ ಬಂದಿಲ್ಲ. ಕೆಲವೆಡೆ ಅಧಿಕಾರ ಆಕಾಂಕ್ಷಿಗಳು ಗಣೇಶ ಮೂರ್ತಿಗಳನ್ನು ಕೊಡಿಸಿದ್ದರೆ, ಇನ್ನೂ ಕೆಲವೆಡೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.
ನೇರವಾಗಿ ಹಣ ನೀಡಿದರೆ ದುರುಪಯೋಗವಾಗುವ ಸಾಧ್ಯತೆಯಿಂದ ಮೂರ್ತಿಗಳನ್ನು ಕೊಡಿಸುತ್ತಾರೆ ಇಲ್ಲವೇ ಯಾವುದಾದರೂ ಕಾರ್ಯಕ್ರಮ ಸಂಘಟಿಸುತ್ತಾರೆ. ಮಧ್ಯಮ ಹಾಗೂ ಉತ್ಛ ಮಧ್ಯಮ ವರ್ಗದ ಸುಶಿಕ್ಷಿತ ಮತದಾರರ ಗಮನ ಸೆಳೆಯಲು ಇದು ಸುಸಂದರ್ಭವಾಗಿದೆ.
ಮತಗಳ ಲೆಕ್ಕಾಚಾರ-ಪಾಲಿಕೆ ಸದಸ್ಯರ ಸಹಕಾರ: ಮತಗಳ ಲೆಕ್ಕಾಚಾರವನ್ನಾಧರಿಸಿ ದೇಣಿಗೆ ನೀಡಲಾಗುತ್ತದೆ. ಅಲ್ಲಿ ಭಕ್ತಿಗಿಂತ ಯುಕ್ತಿ ಮುಖ್ಯ. ಕೆಲ ಮಹಾನಗರ ಪಾಲಿಕೆ ಸದಸ್ಯರ ಸಹಕಾರ ಪಡೆದು ಸಮಿತಿಗಳ ಪದಾಧಿಕಾರಿಗಳನ್ನು ಭೇಟಿ ಮಾಡಿ ದೇಣಿಗೆ ತಲುಪಿಸಲಾಗುತ್ತದೆ. ಸಾರ್ವಜನಿಕ ಗಣೇಶೋತ್ಸವ ಕೇವಲ ಧಾರ್ಮಿಕ ಕಾರ್ಯಕ್ರಮವಷ್ಟೇ ಅಲ್ಲ, ಅದು ಚುನಾವಣೆಗೆ ಸಿದ್ಧತೆಗೆ ವೇದಿಕೆ. ಗಣೇಶೋತ್ಸವ ಸಮಿತಿಗಳು ಯುವ ಜನರ ಕೇಂದ್ರಗಳು.
ಯುವ ಮತದಾರರ ಮನಗೆದ್ದು, ಮುಂದೆ ಪ್ರಚಾರಕ್ಕೂ ಯುವಕರ ಸೇವೆ ಪಡೆಯಬಹುದೆಂಬ ಆಲೋಚನೆ. ಗಣೇಶೋತ್ಸವವನ್ನು ಜಾತಿ, ಉಪಜಾತಿ, ಪಂಥಗಳನ್ನು ಮೀರಿ ಆಚರಿಸಲಾಗುವುದರಿಂದ ಬಹು ಜನರನ್ನು ತಲುಪುವ ಮಾಧ್ಯಮ ಇದಾಗಿದೆ. ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ಗಣೇಶೋತ್ಸವ ಪ್ರಚಾರಕ್ಕೆ ಚುರುಕು ನೀಡಿರುವುದಂತೂ ಸ್ಪಷ್ಟ.
* ವಿಶ್ವನಾಥ ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್ಚಂದ್ರ ಅವರಿಂದ ಚಿಕಿತ್ಸೆ
Hubballi: ಒಂದೇ ಕುಟುಂಬದ 96 ಸದಸ್ಯರಿಂದ ಮತದಾನ
ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ
Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!
Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು