Loksabha; ಪ್ರತಾಪ ಸಿಂಹ ಟಿಕೆಟ್ ಸುದ್ದಿ ಕೇವಲ ಉಹಾಪೋಹ: ಪ್ರಹ್ಲಾದ ಜೋಶಿ
Team Udayavani, Mar 10, 2024, 2:49 PM IST
ಹುಬ್ಬಳ್ಳಿ: ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರವಾಗಿ ಉಹಾಪೋಹಗಳಿಗೆ ನಾನು ಉತ್ತರ ಕೊಡುವುದಿಲ್ಲ. ಎಂಟು ಸಲ ಗೆದ್ದವರಿಗೂ ಟಿಕೆಟ್ ಕೊಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಸಂಸದ ಪ್ರತಾಪ ಸಿಂಹರ ಟಿಕೆಟ್ ವಿಚಾರವೂ ಉಹಾಪೋಹ ಎಂದರು.
ವಿರೇಂದ್ರ ಕುಮಾರರಿಗೆ ಎಂಟನೇ ಬಾರಿ ಟಿಕೆಟ್ ಸಿಕ್ಕಿಲ್ಲವೇ? ಬಿ.ಸಿ. ಪಾಟೀಲರಿಗೆ ಟಿಕೆಟ್ ಬೇಡಿಕೆ ವಿಚಾರ ಸೇರಿದಂತೆ ಎಲ್ಲವನ್ನೂ ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಎಲ್ಲರೊಂದಿಗೆ ವಿಚಾರಿಸುತ್ತಾರೆ. ಪಕ್ಷದ ರಾಷ್ಟ್ರೀಯ ನಾಯಕರು ಟಿಕೆಟ್ ತೀರ್ಮಾನವಾದ ಮೇಲೆ ಯಾರಾದರೂ ಅಸಮಾಧಾನಿತರಾಗಿದ್ದರೆ ಅವರನ್ನು ಸಂಪರ್ಕಿಸಿ ಸಮಾಧಾನ ಮಾಡುತ್ತಾರೆ. ಮುಂದಿನ ಎರಡು ಮೂರು ದಿನಗಳಲ್ಲಿ ಟಿಕೆಟ್ ಫೈನಲ್ ಆಗಬಹುದು ಎಂದರು.
ಬಿ.ಎಸ್. ಯಡಿಯೂರಪ್ಪ ಮತ್ತು ನಾನು ದೆಹಲಿಗೆ ಹೋಗಬೇಕಿತ್ತು. ಆದರೆ ಚುನಾವಣೆ ಸಮಿತಿ ಸಭೆ ಮುಂದಕ್ಕೆ ಹೋಗಿದೆ ಎಂದರು.