ಅರ್ಥ ಕಳೆದುಕೊಂಡ ಸಾಲು ಸಾಲು ಭರವಸೆ
Team Udayavani, Aug 2, 2017, 12:13 PM IST
ಹುಬ್ಬಳ್ಳಿ: ಇಂದಿರಾ ಗಾಜಿನಮನೆ ಹಾಗೂ ಮಹಾತ್ಮಾಗಾಂಧಿ ಉದ್ಯಾವನ ಅಭಿವೃದ್ಧಿ ಕುರಿತಾಗಿ ಶಾಸಕರು, ಸಂಸದರು, ಸಚಿವರು, ಮಹಾಪೌರ, ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು…ಹೀಗೆ ಅನೇಕರು ಸಾಲು ಸಾಲಾಗಿ ನೀಡಿದ ಭರವಸೆಗಳು ಅರ್ಥ ಕಳೆದುಕೊಂಡಿವೆ. ನಗರದ ಹೃದಯ ಭಾಗದಲ್ಲಿರುವ ಉದ್ಯಾನವನ ದಿನದಿಂದ ದಿನಕ್ಕೆ ಹದಗೆಡುತ್ತಿದೆ.
ಗಾಜಿನ ಮನೆಯ ಮೇಲಿನ ಗಾಜುಗಳು ಪುಡಿಯಾಗಿ ಮಳೆ ಬಂದರೆ ನೀರು ಒಳಗೆ ಸೋರುತ್ತಿದೆ. ಕಳೆದ 10-15 ದಿನಗಳಿಂದ ವಿದ್ಯುತ್ ಸಂಪರ್ಕವೇ ಇಲ್ಲವಾಗಿದ್ದರೂ ಯಾರೊಬ್ಬರೂ ಗಮನಿಸದಾಗಿದ್ದಾರೆ. ಇಂದಿರಾ ಗಾಜಿನ ಮನೆ-ಮಹಾತ್ಮಾ ಗಾಂಧಿ ಉದ್ಯಾನವನ ಸುವಿಹಾರಿಗಳ ಸಂಘ, ಹಾಸ ಪರಿವಾರ, ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಉದ್ಯಾನವನ ಸುಸ್ಥಿತಿಯಲ್ಲಿಡುವಂತೆ ಮಾಡಿದ ಮನವಿಗಳಿಗೆ ಬೆಲೆ ಇಲ್ಲವಾಗಿದೆ.
ಎಪ್ರಿಲ್ ಒಳಗಾಗಿ ಉದ್ಯಾನವನ್ನು ಪಾಲಿಕೆ ಸುಪರ್ದಿಗೆ ಪಡೆದು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಪಡಿಸಲಾಗುವುದೆಂಬ ಪಾಲಿಕೆ ಆಯುಕ್ತರ ಹೇಳಿಕೆ ಕಳೆದ ಮೂರು ತಿಂಗಳಿಂದಲೂ ಹೇಳಿಕೆಯಾಗಿಯೇ ಉಳಿದಿದೆ. ಇಲ್ಲಿನ ಅವ್ಯವಸ್ಥೆ ಖಂಡಿಸಿ ಸ್ವಾತಂತ್ರೊéàತ್ಸವ ದಿನದಂದು ಹೋರಾಟಕ್ಕೆ ವೇದಿಕೆ ಸಜ್ಜುಗೊಂಡಿದೆ.
ಒಡೆದ ಗಾಜುಗಳು: ಗಾಜಿನಮನೆ ಮೇಲ್ಭಾಗದಲ್ಲಿ ಹಾಕಲಾಗಿರುವ ಅನೇಕ ಗಾಜು ಒಡೆದು ಹೋಗಿದ್ದು ಮಳೆ ಬಂದರೆ ನೀರು ಸೋರುತ್ತದೆ. ಕಟ್ಟಡ ಒಳಗೆ ಹಾಕಿರುವ ವಿದ್ಯುತ್ ಬಲ್ಬ್ಗಳು ಹಾಗೂ ವಿದ್ಯುತ್ ವೈರಿಂಗ್ ಸಂಪೂರ್ಣವಾಗಿ ಹಾಳಾಗಿ ಅಸ್ಥಿಪಂಜರದಂತೆ ಜೋತಾಡುತ್ತಿವೆ. ಪ್ರತಿದಿನ ನೂರಾರು ಜನರು ವಾಯುವಿಹಾರ ಮಾಡಲು ಬರುತ್ತಿದ್ದು, ಉತ್ತಮ ವಾತಾವರಣ ಇಲ್ಲವಾಗಿದೆ.
ಸ್ವತ್ಛತೆ ಮರೀಚಿಕೆ ಆಗಿದೆ. ಉದ್ಯಾನಕ್ಕೆ ಬರುವ ಸಾರ್ವಜನಿಕರು ತಾವು ತಂದ ಆಹಾರವನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾರೆ. ಇನ್ನು ಕುಡಿಯುವ ನೀರಿನ ಟ್ಯಾಂಕ್ ಗಳು ಹೇಳುವ ಸ್ಥಿತಿಯಲ್ಲಂತು ಇಲ್ಲ. ಉದ್ಯಾನವನ ಬೀದಿ ನಾಯಿಗಳ ತಾಣವಾಗಿದೆ. ಲಕ್ಷಾಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದ ಕಲಾಕೃತಿ, ಸಂಗೀತ ಕಾರಂಜಿ ಇದ್ದೂ ಇಲ್ಲದಂತಿದೆ. ಉದ್ಯಾನ ಸಂರಕ್ಷಣೆಗೆ ಅಗತ್ಯ ಭದ್ರತಾ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ.
ಕೇವಲ ಟಿಕೆಟ್ ನೀಡುವುದಕ್ಕೆ ಸಿಬ್ಬಂದಿ ಇದ್ದಂತೆ ಭಾಸವಾಗುತ್ತಿದೆ. ಈ ಹಿಂದೆ ರಾಜೇಂದ್ರ ಚೋಳನ್ ಜಿಲ್ಲಾಧಿಕಾರಿಯಾಗಿದ್ದಾಗ ಉದ್ಯಾನವನ ಅಭಿವೃದ್ಧಿಗೆ ಆಸಕ್ತಿ ತೋರಿದ್ದರು. ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದರು. ಬೆಳಗಿನ ವಾಯುವಿಹಾರಕ್ಕೆ ಬರುವವರ ವಾಹನಗಳನ್ನು ಉದ್ಯಾನವನ ಮುಖ್ಯದ್ವಾರ ಆವರಣದಲ್ಲಿ ನಿಲ್ಲಿಸದೆ ಉಚಿತವಾಗಿ ವಾಹನ ನಿಲುಗಡೆ ಜಾಗದಲ್ಲಿ ನಿಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದರು.
ವಾಹನಗಳು ಪಾರ್ಕಿಂಗ್ ಪ್ರದೇಶದಲ್ಲಿ ಸರಿಯಾದ ರೀತಿಯಲ್ಲಿ ನಿಲ್ಲಿಸುವಂತೆ ನೋಡಿಕೊಳ್ಳಬೇಕೆಂದು ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದರು. ಇದು ಕೆಲವೇ ಕೆಲವು ದಿನಗಳವರೆಗೆ ನಡೆಯಿತಲ್ಲದೆ, ಇದೀಗ ಪಾರ್ಕಿಗ್ ಜಾಗ ಇದ್ದರೂ ಜನ ಮಾತ್ರ ಮನಸ್ಸಿಗೆ ಬಂದಂತೆ ಮುಖ್ಯದ್ವಾರ ಎದುರಿನ ಆವರಣದಲ್ಲಿಯೇ ಮನಸೋ ಇಚ್ಛೆ ನಿಲ್ಲಿಸುತ್ತಿದ್ದು, ಹೇಳುವವರು ಕೇಳುವವರು ಇಲ್ಲವಾಗಿದೆ.
ಸಿಸಿ ಕ್ಯಾಮೆರಾ ಹಾಕಿಸುತ್ತೇವೆ, ಭದ್ರತಾ ಸಿಬ್ಬಂದಿ ಸಂಖ್ಯೆ ಹೆಚ್ಚಿಸುತ್ತೇವೆ, ಕಲಾಕೃತಿಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದೆಲ್ಲ ಭರವಸೆ ನೀಡಿದ್ದ ಪಾಲಿಕೆ ಆಯುಕ್ತರು ಕನಿಷ್ಠ ತಾವು ನೀಡಿದ ಭರವಸೆಗಳನ್ನು ನೆನಪು ಮಾಡಿಕೊಂಡು ನಿರ್ಮಿತಿ ಕೇಂದ್ರದಿಂದ ಉದ್ಯಾನವನವನ್ನು ಪಾಲಿಕೆ ಸುಪರ್ದಿಗೆ ತೆಗೆದುಕೊಳ್ಳುವ, ಕನಿಷ್ಠ ಸುಧಾರಣೆ ಕ್ರಮಕ್ಕಾದರೂ ಮುಂದಾಗಲಿ ಎಂಬುದು ಜನರ ಒತ್ತಾಸೆ.
* ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ