ಕಾವಿಯೊಳಗೆ ಖಾದಿ ಪ್ರವೇಶ ಸರಿಯಲ್ಲ
Team Udayavani, Aug 7, 2021, 3:24 PM IST
ಮುಂಡರಗಿ: ಪ್ರಸ್ತುತ ರಾಜಕೀಯದಲ್ಲಿ ಕಾವಿಯೊಳಗೆ ಖಾದಿ ಪ್ರವೇಶ ಸಲ್ಲದು. ಕಾವಿ ತ್ಯಾಗದ ಪ್ರತೀಕವಾಗಿದ್ದು, ಇಂತಹ ಬೆಳವಣಿಗೆಯಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ಕಾವಿ ಪಾವಿತ್ರ್ಯತೆಗೆ ಧಕ್ಕೆ ಬರಲಿದೆ ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಜಗದ್ಗುರು ತೋಂಟದಾರ್ಯ ಶಾಖಾ ಮಠದಲ್ಲಿ ನಡೆದ ಆಷಾಢ ಮಾಸದ ಪ್ರವಚನದ ಸಾಂಕೇತಿಕ ಮಂಗಲ, ಪಾಲಕಿ ಮೆರವಣಿಗೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಮಠಗಳು, ಸ್ವಾಮೀಜಿಯವರು ನಿಸ್ವಾರ್ಥ ಸೇವೆ ಮಾಡುವ ಮೂಲಕ ಸಾಮಾಜಿಕ ಬದ್ಧತೆಯನ್ನು ಸಾಕಾರಗೊಳಿಸಬೇಕು. ಎಲ್ಲರೂ ಒಂದು ಎನ್ನುವ ಭಾವನೆಯಿಂದ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು.
ಬುದ್ಧ, ಬಸವರು ಈ ನಾಡಿಗೆ ದಯವೇ ಧರ್ಮದ ಮೂಲವೆಂದು ಸಾರಿ ಹೋಗಿದ್ದಾರೆ. ಇಂದಿನ ದಿನಮಾನಗಳಲ್ಲಿ ರಾಜಕಾರಣ ಮತ್ತು ಮಾಧ್ಯಮ ಕ್ಷೇತ್ರ ಉದ್ಯಮವಾಗಿರುವುದರಿಂದ ಸಾಮಾಜಿಕ ಬದ್ಧತೆ ಕಾಣುವುದು ಅಪರೂಪವಾಗಿದೆ ಎಂದರು.