ಇಕೋ ಪಾರ್ಕ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ
Team Udayavani, May 22, 2019, 5:48 PM IST
ಹಗರಿಬೊಮ್ಮನಹಳ್ಳಿ: ತಂಬ್ರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜೈವಿಕ ಉದ್ಯಾನವನ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ತಾಪಂ ಇಒ ಮಲ್ಲಾನಾಯ್ಕ ಸ್ಥಳ ಪರಿಶೀಲಿಸಿದರು.
ಹಗರಿಬೊಮ್ಮನಹಳ್ಳಿ: ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸಹಾಯದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ತಂಬ್ರಹಳ್ಳಿಯಲ್ಲಿ ಇಕೋ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ಮಲ್ಲಾನಾಯ್ಕ ತಿಳಿಸಿದರು.
ತಾಲೂಕಿನ ತಂಬ್ರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಇಕೋ ಜೈವಿಕ ಉದ್ಯಾನವನ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿ ನಂತರ ಅವರು ಮಾತನಾಡಿದರು. ಎನ್ಆರ್ಇಜಿ ಯೋಜನೆಯಡಿ ಪಾರ್ಕ್ ಒಳಗೆ ಸುಸಜ್ಜಿತ ನಡಿಗೆಗೆ ಉತ್ತಮ ರಸ್ತೆ ನಿರ್ಮಾಣ, ವಿಶ್ರಮಿಸಲು ಆಸನಗಳು, ಪಾರ್ಕ್ ಒಳಗೆ ಹುಲ್ಲಿನ ಹಾಸು ಸೇರಿದಂತೆ ಕೃಷಿಹೊಂಡವನ್ನು ಸುಂದರವಾಗಿ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಸಾರ್ವಜನಿಕ ಉದ್ಯಾನವನದಿಂದ ಸೌಂದರ್ಯವೃದ್ಧಿಯ ಜತೆಗೆ ನಾಗರಿಕರಿಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ. ತಂಬ್ರಹಳ್ಳಿ ಆಸ್ಪತ್ರೆಯಲ್ಲಿ ಉದ್ಯಾನ ನಿರ್ಮಾಣಕ್ಕೆ ಸ್ಥಳಾವಕಾಶ ಲಭ್ಯವಿದ್ದು, ತಾಲೂಕು ವೈದ್ಯರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು. ಸ್ಥಳೀಯ ಗ್ರಾಪಂ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ನಿವೇಶನದ ಆಧಾರದ ಮೇಲೆ ಅನುದಾನ ನಿರ್ದಿಷ್ಟ ಪಡಿಸಲಾಗುವುದು ಎಂದು ತಿಳಿಸಿದರು.
ತಾಪಂ ತಾಂತ್ರಿಕ ಸಂಯೋಜಕ ದೇವೇಂದ್ರ ನಾಯ್ಕ, ಪಿಡಿಒ ಕೃಷ್ಣಮೂರ್ತಿ, ವೈದ್ಯಾಧಿಕಾರಿಗಳಾದ ಮೋಹನ್ಕುಮಾರ್, ಸಿದ್ದೇಶ್ವರ ಶಿವಸಾಲಿ, ಡಿಇಒ ಕೊಟ್ರೇಶ ಕಾಶಿನಾಯ್ಕರ್, ಗ್ರಾಪಂ ಸದಸ್ಯರಾದ ಗೌರಜ್ಜನವರ ಗಿರೀಶ, ಸೊಬಟಿ ಹರೀಶ, ಮಡಿವಾಳರ ಕೊಟ್ರೇಶ, ಪ್ರಾಂತ ರೈತ ಸಂಘದ ಕೊಟಗಿ ಮಲ್ಲಿಕಾರ್ಜುನ ಇತರರಿದ್ದರು.