ಕಳಪೆ ಕೃಷಿ ಪರಿಕರ ಮಾರಾಟ ಮಾಡಿದರೆ ಕ್ರಮ
Team Udayavani, Jun 1, 2020, 7:49 AM IST
ಹಾಸನ: ಕಳಪೆ ಹಾಗೂ ನಿಗದಿಗಿಂತ ಹೆಚ್ಚಿನ ದರದಲ್ಲಿಕೃಷಿ ಪರಿಕರಗಳನ್ನು ಮಾರಾಟ ಮಾಡುವುದು, ಬಿಡಿ ಬಿತ್ತನೆ ಬೀಜ ಮಾರಾಟ ಮಾಡುವುದು ಹಾಗೂ ನೋಂದಣಿಯಾಗದ ರಾಸಾಯನಿಕ ಮಿಶ್ರಿತ ಜೈವಿಕ ಉತ್ಪನ್ನಗಳನ್ನು ಮಾರಾಟ ಮಾಡುವವರ ವಿರುದ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಜಾಗೃತ ದಳದ ಸಹಾಯಕ ಕೃಷಿ ನಿರ್ದೇಶಕ ತಿಮ್ಮನಗೌಡ ಪಾಟೀಲ ಎಚ್ಚರಿಸಿದರು.
ಆಲೂರು ತಾಲೂಕಿನ ಕೃಷಿ ಪರಿಕರಗಳ ಮಾರಾಟ ಮಳಿಗೆಗಳಿಗೆ ಸಹಾಯಕ ಕೃಷಿ ನಿರ್ದೇಶಕ ಶ್ರೀನಾಥ್ ಚಿಮ್ಮಲಗಿ ಅವರ ತಂಡದೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಅನುಮಾನಸ್ಪದ, ನೋಂದಣಿ ಯಾಗದ ರಾಸಾಯನಿಕ ಮಿಶ್ರಿತ ಜೈವಿಕ ಉತ್ಪನ್ನ ಮಾರಾಟ ಮಾಡುವುದು ಕಂಡು ಬಂದ ಕಾರಣ ಕೆಲವು ಮಾದರಿ ಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಕಳುಹಿಸಿಕೊಟ್ಟರು.
ಆಲೂರು ಪಟ್ಟಣದ ವಿವಿಧ ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕ ಅಂಗಡಿಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಕೊರೊನಾ ಸೋಂಕು ತಡೆಗಟ್ಟಲು ಅಂಗಡಿಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಬೇಕು ಎಂದರು. ಅಧಿಕೃತ ಮಾರಾಟಗಾರರಿಂದ ಪ್ಯಾಕ್ ಮಾಡಿದ ಪ್ರಮಾಣಿಕರಿಸಿದ ಬಿತ್ತನೆ ಬೀಜಗಳನ್ನು ಮಾತ್ರವೇ ರೈತರು ಖರೀದಿಸಬೇಕು. ಖರೀದಿಸಿದ ರಸೀದಿ ಹಾಗೂ ದಾಸ್ತಾನು ಚೀಲವನ್ನು ಬೆಳೆ ಕಟಾವು ಆಗುವರೆಗೂ ಕಾಯ್ದಿರಿಸಿಕೊಳ್ಳಬೇಕು.
ಮಾರಾಟಗಾರರು ಇಲಾಖೆಯ ಪರವನಾಗಿ ಕಡ್ಡಾಯವಾಗಿ ನವೀಕರಣ ಮಾಡಿಸಿ ಕೊಂಡು ತಮ್ಮ ಮಳಿಗೆಯಲ್ಲಿ ಲಭ್ಯವಿರುವ ಕೃಷಿ ಪರಿಕರಗಳ ದಾಸ್ತಾನು ವಿವರ ಹಾಗೂ ಮಾರಾಟ ದರವನ್ನು ದರಪಟ್ಟಿಯ ಪ್ರದರ್ಶನದಲ್ಲಿ ನಮೂದಿಸ ಬೇಕು ಎಂದು ಸೂಚಿಸಿದರು. ಕಸಬಾ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿಅಧಿಕಾರಿ ಮಹಾಂತೇಶ್ ಮೊದಲಾದವರಿದ್ದರು.