ರೈತರು ಅರಣ್ಯ ಕೃಷಿಗೆ ಮುಂದಾಗಬೇಕು
Team Udayavani, Jun 6, 2020, 6:22 AM IST
ಚನ್ನರಾಯಪಟ್ಟಣ: ಸರ್ಕಾರ ಲಕ್ಷಾಂತರ ರೂ. ವೆಚ್ಚ ಮಾಡಿ ಅರಣ್ಯ ಇಲಾಖೆಯಲ್ಲಿ ಸಸಿಗಳನ್ನು ಬೆಳೆಸಿದೆ. ಇವುಗಳನ್ನು ಪಡೆದು ರೈತರು ಅರಣ್ಯ ಕೃಷಿಗೆ ಮುಂದಾಗಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಸಲಹೆ ನೀಡಿದರು. ಪಟ್ಟಣದ ಬೆಲಸಿಂದ ಸಸ್ಯ ಕ್ಷೇತ್ರದಲ್ಲಿ ಅರಣ್ಯ ಕೃಷಿ ಯೋಜನೆಯಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಸಸಿ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಅರಣ್ಯ ಇಲಾಖೆ ಸುಮಾರು 26 ಜಾತಿಯ ಸಸಿಗಳನ್ನು ಬೆಳೆಸಿದ್ದು, 1ರೂ.ಗೆ ಸಸಿ ನೀಡಲಾಗುತ್ತಿದೆ. ಇವುಗಳನ್ನು ಪಡೆದು ಕೃಷಿ ಮಾಡಿದರೆ ಪ್ರತಿ ಸಸಿಗೆ ಮೊದಲ ವರ್ಷ 35 ರೂ. ದ್ವಿತೀಯ ವರ್ಷ 45 ರೂ. ತೃತೀಯ ವರ್ಷ 50 ರೂ. ಸಹಾಯಧನವನ್ನು ಸರ್ಕಾರ ರೈತರ ನೇರವಾಗಿ ಖಾತೆಗೆ ಜಮಾ ಮಾಡಲಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಇಲಾಖೆ ಅಧಿಕಾರಿಗಳು ರೈತರಿಗೆ ಸಸಿ ನೀಡಿದರೆ ಸಾಲದು ಅವುಗಳ ಪೋಷಣೆಯ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದರು. ಸರ್ಕಾರಿ ಅರಣ್ಯ ಕೃಷಿ ಯೋಜನೆಯಲ್ಲಿ 1.81 ಲಕ್ಷ ಸಸಿಗಳನ್ನು ಬೆಳೆಸಿದ್ದು, ರೈತರಿಗೆ ಕೇವಲ ಒಂದು ರೂ.ಗೆ ಸಸಿ ನೀಡಲಾಗುತ್ತಿದೆ ಸಸಿ ಪಡೆಯಲು ಕೃಷಿ ಭೂಮಿ ಪಹಣಿ, ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲನ್ನು ನೀಡಬೇಕು ಎಂದು ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು.
ತಾಲೂಕು ಪಂಚಾಯಿತಿ ಇಒ ಚಂದ್ರಶೇಖರ್, ಪುರಸಭೆ ಸಿಒ ಕುಮಾರ, ಪರಿಸರ ಅಭಿಯಂತ ವೆಂಕಟೇಶ್, ಅರಣ್ಯ ಇಲಾಖೆ ಆರ್ಎಫ್ ಹೇಮಂತಕುಮಾರ, ಹಿರಿಯ ತೋಟಗಾರಿಕೆ ಇಲಾಖೆ ನಿದೇಶಕ ಸತೀಶ್, ಕೃಷಿ ಇಲಾಖೆ ಅಧಿಕಾರಿ ರಶ್ಮಿ ಮೊದಲಾದವರು ಉಪಸ್ಥಿತರಿದ್ದರು.