Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ
Team Udayavani, Apr 13, 2024, 12:37 AM IST
ಹಾಸನ: ನಗರದ ಎಂ.ಜಿ. ರಸ್ತೆಯಲ್ಲಿರುವ ಐನೆಟ್ ಇಂಟರ್ನೆಟ್ ಮಳಿಗೆ ಮೇಲೆ ಶುಕ್ರವಾರ ಮಧ್ಯಾಹ್ನ ಕಿಡಿಗೇಡಿಗಳ ಗುಂಪು ದಾಳಿ ನಡೆಸಿ ಅಂಗಡಿ ಮಾಲಕ ಹಾಗೂ ಬಿಜೆಪಿ ಮುಖಂಡ ಐನೆಟ್ ವಿಜಯಕುಮಾರ್ ಸಹಿತ ಮೂವರ ಮೇಲೆ ಹಲ್ಲೆ ಮಾಡಿದೆ.
ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಹಾಗೂ ಆರೆಸ್ಸೆಸ್ ಕಾರ್ಯಕರ್ತ ವಿಜಯ್ ಕುಮಾರ್ ಅವರು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ 30ಕ್ಕೂ ಹೆಚ್ಚು ಮಂದಿಯ ತಂಡ ದಾಳಿ ಮಾಡಿದೆ. ವಿಜಯಕುಮಾರ್ ಮೇಲಿನ ಹಲ್ಲೆಯನ್ನು ತಡೆಯಲು ಮುಂದಾದ ಪ್ರಮೋದ್ ಹಾಗೂ ಸಂದೇಶ್ ಎಂಬವರ ಮೇಲೂ ಗುಂಪು ಹಲ್ಲೆ ಮಾಡಿದೆ. ಗಾಯಾಳುಗಳನ್ನು ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರೀತಂ ಬೆಂಬಲಿಗರ ಕೃತ್ಯ?
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯಕುಮಾರ್ ಅವರು ಹಲ್ಲೆ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಮೇಲೆ ಹಲ್ಲೆ ಮಾಡುವಾಗ “ನಮ್ಮ ಪ್ರೀತಂ ಅಣ್ಣನ ಬಗ್ಗೆ ಮಾತನಾಡುತ್ತೀಯಾ’ ಎಂದು ಕೇಳಿದರು. ಬಿಜೆಪಿ ಕಾರ್ಯಕರ್ತರು ಈ ರೀತಿ ಮಾಡುವುದಿಲ್ಲ. ಪ್ರೀತಂ ಗೌಡರ ಕಡೆಯವರೇ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.