ಪರೀಕ್ಷೆಯಲ್ಲಿ ಆನ್ಲೈನ್ ಗೊಂದಲ: ಪ್ರತಿಭಟನೆ
ತಾಂತ್ರಿಕ ದೋಷ ಸರಿಪಡಿಸಲು ಒತ್ತಾಯ
Team Udayavani, Feb 4, 2021, 5:39 PM IST
ಅಕ್ಕಿಆಲೂರು: ಐಟಿಐ ತರಬೇತುದಾರರಿಗೆ ಸಿಬಿಟಿ ಪರೀಕ್ಷೆಯಲ್ಲಿ ಸಾಕಷ್ಟು ತೊಂದರೆಗಳು ಉಂಟಾಗುತ್ತಿದ್ದು, ರಾಜ್ಯ ಸರ್ಕಾರ ಶೀಘ್ರ ಈ ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿ ಹಾನಗಲ್ಲ ಘಟಕದ ಅಖೀಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ವಿದ್ಯಾರ್ಥಿ ಸಂಘಟನೆ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸ್ಥಳೀಯ ಸರ್ಕಾರಿ ಐಟಿಐ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರು ಉಪತಹಶೀಲ್ದಾರ್ ಬಿ.ಎಲ್ .ಪೂಜಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆನ್ಲೈನ್ನಿಂದಾಗುವ ತಾಂತ್ರಿಕ ದೋಷಗಳಿಂದಾಗಿ ಐಟಿಐ ತರಬೇತುದಾರರು ಪರೀಕ್ಷೆಗೆ ಎರಡು ಬಾರಿ ಶುಲ್ಕ ಪಾವತಿಸು ವಂತಾಗಿದೆ. ಶುಲ್ಕ ಪಾವತಿಸಲು ಅತ್ಯಂತ ಕಡಿಮೆ ಸಮಯಾವಕಾಶ ನೀಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆಯಾಗುತ್ತಿದೆ. ಕೆಲವೊಮ್ಮೆ ಪರೀಕ್ಷಾ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳು ಲಭ್ಯವಾಗುವುದಿಲ್ಲ. ಆನ್ಲೈನ್ ಪರೀಕ್ಷೆಗಳಿಂದ ರಾಜ್ಯಾದ್ಯಂತ ವಿದ್ಯಾರ್ಥಿವೃಂದ ಖನ್ನತೆಗೆ ಒಳಗಾಗಿದೆ. ಹಾವೇರಿ ಜಿಲ್ಲೆಯಲ್ಲಿ ಕೇವಲ 2 ಪರೀಕ್ಷಾ ಕೇಂದ್ರಗಳಿದ್ದು, ತರಬೇತುದಾರರು ದೂರದಿಂದ ಪರೀಕ್ಷೆಗೆ ಬಂದರೂ ಸರ್ವರ್ ಸಮಸ್ಯೆಯಿಂದಾಗಿ ಕಂಗಾಲಾಗಿ ಹೋಗಿದ್ದಾರೆ ಎಂದು ದೂರಿದ್ದಾರೆ.
ಇದನ್ನೂ ಓದಿ :ಪ್ಲಾಸ್ಟಿಕ್ ಮುಕ್ತ ಹಾವೇರಿಗೆ ನಿರಂತರ ಯತ್ನ
ಸರ್ಕಾರ ಶೀಘ್ರ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ. ಆನ್ಲೈನ್ ಸಿಇಟಿ ಪರೀಕ್ಷೆಯನ್ನು ರದ್ದುಗೊಳಿಸಿ ಆಫ್ ಲೆ„ನ್ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಅಕ್ಕಿಆಲೂರ, ರಾಣಿಬೆನ್ನೂರ, ಗುತ್ತಲ, ಹಂಸಭಾವಿ, ಕವಲೆತ್ತು, ಹಿರೇಕೇರೂರ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಎಬಿವಿಪಿ ತಾಲೂಕು ಘಟಕದ ಕಾರ್ಯಕರ್ತರು ಇದ್ದರು.