Byadagi Market; ಕುಸಿದ ಮೆಣಸಿನಕಾಯಿ ದರ: ಬ್ಯಾಡಗಿ ಮಾರುಕಟ್ಟೆಯಲ್ಲಿ ರೈತಾಕ್ರೋಶ
ಎಪಿಪಿಎಂಸಿಯ ಪೀಠೊಪಕರಣಗಳ ಧ್ವಂಸ, ಕಲ್ಲುತೂರಾಟ; ಹಲವು ಜೀಪ್, ಕಾರುಗಳಿಗೆ ಉದ್ರಿಕ್ತರಿಂದ ಬೆಂಕಿ
Team Udayavani, Mar 11, 2024, 11:29 PM IST
ಬ್ಯಾಡಗಿ: ಮೆಣಸಿನಕಾಯಿ ದರ ಕುಸಿತಗೊಂಡಿದೆ ಎಂದು ಆರೋಪಿಸಿ ಸೋಮವಾರ ರೈತರು ಹಾವೇರಿ ಜಿಲ್ಲೆ ಬ್ಯಾಡಗಿಯ ಎಪಿಎಂಸಿ ಕಚೇರಿಗೆ ನುಗ್ಗಿ ಪೀಠೊಪಕರಣ ಧ್ವಂಸಗೊಳಿಸಿ, ಕಾರು ಹಾಗೂ ಅಗ್ನಿಶಾಮಕ ವಾಹನಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.
ದರ ಕುಸಿತದಿಂದ ಆಕ್ರೋಶಗೊಂಡ ರೈತರು ಎಪಿಎಂಸಿ ಕಚೇರಿಯತ್ತ ಕಲ್ಲು ತೂರಿದ ಪರಿಣಾಮ ಕಚೇರಿಯ ಕಿಟಕಿ ಗಾಜುಗಳು ಒಡೆದಿವೆ. ಕಚೇರಿಗೆ ನುಗ್ಗಿ ಪೀಠೊಪಕರಣಗಳನ್ನು ಧ್ವಂಸಗೊಳಿಸಲಾಗಿದೆ. ಕಚೇರಿ ಮುಂಭಾಗ ನಿಂತಿದ್ದ ಎಪಿಎಂಸಿ ಕಾರ್ಯದರ್ಶಿ ಕಾರಿಗೆ ಕಲ್ಲು ತೂರಿ, ಗಾಜುಗಳನ್ನು ಒಡೆದು ಹಾಕಿ ಬೆಂಕಿ ಹಚ್ಚಲಾಗಿದೆ. ಅನಂತರ ಆವರಣದಲ್ಲಿ ನಿಂತಿದ್ದ ಜೀಪ್, ಕಾರು, ಸ್ವತ್ಛತಾ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಕೈಗೆ ಸಿಕ್ಕಿದ ಕಲ್ಲು, ದೊಣ್ಣೆಗಳಿಂದ ಬಡಿದು ಸಿಕ್ಕ ಸಿಕ್ಕ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳ್ಳುವಂತೆ ಮಾಡಿದ್ದಾರೆ.
ನಾಯಿತು?:
ಏಕಾಏಕಿ ರೈತರ ಗುಂಪು ಮೆಣಸಿನ ಕಾಯಿಗೆ ದರ ಕಡಿಮೆ ಎಂಬ ಕಾರಣ ನೀಡಿ ಕೂಗಾ ಡುತ್ತ ಎಪಿಎಂಸಿ ಕಡೆಗೆ ನುಗ್ಗಿತು. ಈ ಸುದ್ದಿ ಮಾರುಕಟ್ಟೆಯೆಲ್ಲೆಡೆ ಹರಡುತ್ತಿದ್ದಂತೆ ಒಬ್ಬರಿಗೊಬ್ಬರು ಸೇರಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದರು. ಗೇಟ್ ಹಾಕಿದ್ದರಿಂದ ಕೆಲ ಹೊತ್ತು ಹೊರ ನಿಂತು ಪತ್ರಿಭಟನೆ ನಡೆಸಿದ ರೈತರು ದರದಲ್ಲಿ ಕಡಿಮೆಯಾದ ಕುರಿತು ಯಾರೊಂದಿಗೂ ಚರ್ಚಿಸದೆ ಏಕಾಏಕಿ ಕಲ್ಲು ತೂರಾಟ ನಡೆಸಿದರು. ಬಳಿಕ ಪ್ರತಿಭಟನೆ ಹಿಂಸಾತ್ಮಕ ರೂಪ ತಳೆಯಿತು. ಪರಿಸ್ಥಿತಿ ಕೈಮೀರುತ್ತಿದಂತೆ ಬೆರಳೆಣಿಕೆಯಷ್ಟು ಪೊಲೀಸರು ರೈತರನ್ನು ಚದುರಿಸಲು ಮುಂದಾದಾಗ ತಿರುಗಿಬಿದ್ದ ರೈತರು ಪೊಲೀಸರನ್ನೇ ಬೆನ್ನತ್ತಿ ಥಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ನೇತೃತ್ವದಲ್ಲಿ ಪೊಲೀಸ್ ತುಕಡಿಗಳು ಬ್ಯಾಡಗಿಗೆ ಧಾವಿಸಿ, ಪರಿಸ್ಥಿತಿಯನ್ನು ಸದ್ಯ ನಿಯಂತ್ರಣಕ್ಕೆ ತಂದಿವೆ. ವಿದ್ಯುತ್ ಸಂಪರ್ಕ ಕಡಿದುಹೋದ ಪರಿಣಾಮ ಎಪಿಎಂಸಿ ಮಾರುಕಟ್ಟೆ ಕತ್ತಲಲ್ಲಿ ಮುಳುಗಿದ್ದು, ಈ ಘಟನೆಯಿಂದಾಗಿ ಬ್ಯಾಡಗಿ ಜನತೆ ಬೆಚ್ಚಿ ಬೀಳುವಂತಾಗಿದೆ.
ಮೂರು ವಾರಗಳಿಂದ ಮೂರು ಲಕ್ಷಕ್ಕೂ ಅಧಿ ಕ ಚೀಲ ಮೆಣಸಿನಕಾಯಿ ಆವಕವಾಗುತ್ತಿದೆ. ನಿರೀಕ್ಷೆಯಂತೆ ಸೋಮವಾರವೂ ಮೆಣಸಿನಕಾಯಿ ಮೂರು ಲಕ್ಷಕ್ಕೂ ಅಧಿ ಕ ಚೀಲ ಆವಕವಾಗಿತ್ತು.