ಹಾವೇರಿ ಜಿಲ್ಲೆ ಉದಯಿಸಿದ ಉದಾಸಿ : ಜನಮನದಲ್ಲಿ ನೆಲೆ ನಿಂತ ಮುತ್ಸದ್ದಿ

ರಾಜ್ಯ ರಾಜಕಾರಣದಲ್ಲಿ ಛಾಪು ಮೂಡಿಸಿದ ದಿ| ಸಿ.ಎಂ. ಉದಾಸಿ

Team Udayavani, Aug 30, 2022, 12:40 PM IST

thumb news udasi ad

ಹಾವೇರಿ ಜಿಲ್ಲೆಯಾದ ಬಳಿಕ ಮೊದಲ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲಾ ಕೇಂದ್ರವನ್ನು ಆರಂಭದಲ್ಲೇ ಹೆಚ್ಚು ಅಭಿವೃದ್ಧಿಯತ್ತ ಕೊಂಡೊಯ್ದಿರುವುದು ಗಮನಾರ್ಹ ಸಂಗತಿ. ಇದರ ಹಿಂದೆಯೇ ಹಾವೇರಿ ಲೋಕಸಭಾ ಕ್ಷೇತ್ರವಾಗಿ ವಿಂಗಡನೆಯಾದಾಗ ಸಿ.ಎಂ ಉದಾಸಿಯವರ ಪುತ್ರ ಶಿವಕುಮಾರ ಉದಾಸಿ ಮೊದಲ ಸಂಸದರಾಗಿ ಈವರೆಗೂ ತಮ್ಮ ಕ್ರಿಯಾಶೀಲತೆ ಮೂಲಕ ಈ ಕ್ಷೇತ್ರದ ಜನತೆಯ ಸೇವೆ ಮಾಡುತ್ತಿದ್ದು ತಂದೆಯವರು ತೋರಿದ ಮಾರ್ಗದಲ್ಲೇ ಮುಂದುವರಿದಿದ್ದಾರೆ.

ಹಾವೇರಿ ಜಿಲ್ಲೆಯ ಮೂಲಕ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ದಿ|ಸಿ.ಎಂ. ಉದಾಸಿ. ಹಾವೇರಿ ಪ್ರತ್ಯೇಕ ಜಿಲ್ಲೆ ರಚನೆಗೆ ಅತ್ಯಂತ ಬುದ್ಧಿವಂತಿಕೆಯಿಂದ ಅಂದಿನ ಮುಖ್ಯಮಂತ್ರಿ ಜೆ.ಎಚ್‌. ಪಟೇಲರ ಮನವೊಲಿಸಿ ವಾಸ್ತವ ಅರುಹಿ, ಹಾವೇರಿ ಜಿಲ್ಲೆ ನಿರ್ಮಾಣ ಮಾಡುವಲ್ಲಿ ತಮ್ಮ ಇಚ್ಛಾಶಕ್ತಿ ಮೆರೆದ ಅಪರೂಪದ ರಾಜಕಾರಣಿ ದಿ|ಸಿ.ಎಂ.ಉದಾಸಿ ಇಂದಿಗೂ ಮನೆ ಮಾತಾಗಿದ್ದಾರೆ.

ಅಖಂಡ ಧಾರವಾಡ ಜಿಲ್ಲೆಯಲ್ಲಿದ್ದ ಹಾವೇರಿ ಜಿಲ್ಲೆಯ ಎಲ್ಲ ತಾಲೂಕುಗಳ ಜನ ಅಗತ್ಯ ಕೆಲಸ ಕಾರ್ಯಗಳಿಗಾಗಿ ಜಿಲ್ಲಾ ಕೇಂದ್ರ ಧಾರವಾಡಕ್ಕೆ ತೆರಳಲು ಹರಸಾಹಸ ಪಡುವಂತಾಗಿತ್ತು. ಅದರಲ್ಲೂ ಹಿರೇಕೇರೂರು, ಹಾನಗಲ್ಲ ತಾಲೂಕಿನ ಜನ ಜಿಲ್ಲಾ ಕಚೇರಿ ಹಾಗೂ ನ್ಯಾಯಾಲಯಗಳಿಗೆ ಅಲೆದಾಡುವಾಗ ತೀರ ಸಂಕಷ್ಟ ಅನುಭವಿಸಬೇಕಾಗಿತ್ತು. ವಾಹನಗಳ ವ್ಯವಸ್ಥೆ ಇಲ್ಲದೆ ಅತಿ ದೂರ ಚಲಿಸಬೇಕಾದ ಪರಿಸ್ಥಿತಿಯಿಂದ ಅನೇಕ ಕೆಲಸ ಆಗದೆ ಸಂಕಷ್ಟ ಅನುಭವಿಸುತ್ತಿದ್ದರು. ಸಮಯಕ್ಕೆ ಸರಿಯಾಗಿ ನ್ಯಾಯಾಲಯ ತಲುಪಲಾಗದೇ ನ್ಯಾಯವಂಚಿತರೂ ಆಗುತ್ತಿದ್ದರು. ಈ ಎಲ್ಲ ಕಾರಣಗಳಿಂದ ಹಾವೇರಿಯನ್ನು ಒಂದು ಪ್ರತ್ಯೇಕ ಜಿಲ್ಲೆಯನ್ನಾಗಿಸಬೇಕು ಎಂದು ಉದಾಸಿ ಕನಸು ಕಂಡಿದ್ದರು. ಕಂಡ ಕನಸನ್ನು ನನಸಾಗಿಸಲು 25 ವರ್ಷಗಳ ಹಿಂದೆ ಅವಿರತ ಹೋರಾಟ ನಡೆಸಿದ್ದರು.

ಕೊನೆಗೂ ಇದರಲ್ಲಿ ಯಶಸ್ಸು ಕಂಡ ಉದಾಸಿಯವರು ಆ ಸಂದರ್ಭದಲ್ಲಿ ಸವಣೂರು, ಶಿಗ್ಗಾಂವಿ, ಹಾವೇರಿ, ರಾಣೆಬೆನ್ನೂರ, ಬ್ಯಾಡಗಿ, ಹಿರೇಕೇರೂರ, ಹಾನಗಲ್ಲ ತಾಲೂಕುಗಳನ್ನೊಳಗೊಂಡು ಹಾವೇರಿ ಪ್ರತ್ಯೇಕ ಜಿಲ್ಲೆ ಘೋಷಿಸುವಲ್ಲಿ ಸಫಲರಾದರು. ಜನರ ಹಲವು ದಶಕಗಳ ಕನಸನ್ನು ನನಸಾಗಿಸಿದ ಸಿ.ಎಂ.ಉದಾಸಿ ಜನರ ಮನದಲ್ಲಿ ಧೀಮಂತ ನಾಯಕರಾಗಿ ಅಚ್ಚಳಿಯದೇ ಉಳಿದಿದ್ದಾರೆ.

ಜನಹಿತ ಬಯಸಿದ ಕ್ರಿಯಾಶೀಲ ರಾಜಕಾರಣಿ: ಬುದ್ಧಿವಂತ ವ್ಯಾಪಾರಿ, ನಾಡು ಮೆಚ್ಚುವ ರಾಜಕಾರಣಿಯಾಗಿ, ರಾಜಕೀಯದ ಹೆದ್ದಾರಿ ನಿರ್ಮಿಸಿ, ಸೋಲು ಗೆಲುವುಗಳ ಮಧ್ಯೆಯೂ ಜಿಲ್ಲೆಯ ಅಭಿವೃದ್ಧಿ, ಸಾಧನೆಯೇ ಜೀವನದ ಗುರಿಯಾಗಿಸಿಕೊಂಡು ಮುನ್ನಡೆದು ಸೈ ಎನಿಸಿಕೊಂಡ ಸಿ.ಎಂ.ಉದಾಸಿ ಎಂಬ ಹೆಸರು ಇಡೀ ರಾಜ್ಯದ ರಾಜಕಾರಣದಲ್ಲಿ ಗುರುತಿಸಲ್ಪಡುವ ಹೆಸರು. ಸ್ವತ್ಛ, ಯಾವುದೇ ಕಪ್ಪುಚುಕ್ಕೆ ಇಲ್ಲದ ರಾಜಕಾರಣಿಯಾಗಿ ಜನಮೆಚ್ಚುಗೆಗೆ ಪಾತ್ರರಾಗಿ, ಜನಮಾನಸಕ್ಕೆ ಸದಾ ಹೊಸ ಚಿಂತನೆಗಳನ್ನು ನೀಡಿದ ವೈಚಾರಿಕ ನಾಯಕ ಎಂದು ಹೆಸರು ಮಾಡಿ ಇಂದಿಗೂ ಜಿಲ್ಲೆಯ, ರಾಜ್ಯದ ಜನ ನೆನಪಿಸಿಕೊಳ್ಳುವ ನಾಯಕ.

ಪಕ್ಷಕ್ಕೇ ಸೆಡ್ಡು ಹೊಡೆದ ಪಕ್ಷೇತರ: ಹಾನಗಲ್ಲ ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಆಕಸ್ಮಿಕವಾಗಿ 1972 ರಲ್ಲಿ ನಗರ ಸುಧಾರಣಾ ಸಮಿತಿ ಹೆಸರಿನಲ್ಲಿ ಪುರಸಭೆಯ 15 ಸ್ಥಾನಗಳಲ್ಲಿ ಸಿ.ಎಂ. ಉದಾಸಿ ನೇತೃತ್ವದಲ್ಲಿ 9 ಸ್ಥಾನಗಳನ್ನು ಗೆಲ್ಲಿಸಿ ಸದಸ್ಯನಾಗಿ ಎಲ್ಲರ ಸಹಮತದೊಂದಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು ಉದಾಸಿ. ಅದಾವುದೋ ಘಳಿಗೆಯಲ್ಲಿ ವಿಧಾನಸಭೆಗೆ ಮುಖ ಮಾಡಿದಾಗ ಅಂದಿನ ರಾಷ್ಟ್ರ ನಾಯಕಿ ದಿ|ಇಂದಿರಾಗಾಂಧಿಯವರ ಪಕ್ಷದ ಅಲೆಯ ನಡುವೆಯೂ ತಮ್ಮ ಜನಬಲ ತೋರಿದವರು. ಅಂದಿನ ಕಾಂಗ್ರೆಸ್‌ ರಾಷ್ಟ್ರ ನಾಯಕಿ ಇಂದಿರಾಗಾಂಧಿಯವರೇ ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಉದಾಸಿ ವಿರುದ್ಧ ತಮ್ಮ ಅಭ್ಯರ್ಥಿ ಗೆಲ್ಲಲು ಪ್ರಚಾರ ಮಾಡಿದರೂ “ಆನೆ’ ಗುರುತಿನಿಂದ ಪಕ್ಷೇತರರಾಗಿ ಸ್ಪರ್ಧಿಸಿ ಯಾರೂ ನಿರೀಕ್ಷಿಸಲಾರದ ಗೆಲುವು ಸಾಧಿಸಿ ಹೊಸ ಇತಿಹಾಸ ಬರೆದವರು. ಬಳಿಕ ಅರ್ಧ ಶತಕಗಳ ಕಾಲ ಸಿ.ಎಂ.ಉದಾಸಿಯವರು ಐದು ಚಿನ್ಹೆಗಳಲ್ಲಿ 9 ಚುನಾವಣೆ ಎದುರಿಸಿ 6 ಬಾರಿ ವಿಧಾನಸಭೆ ಪ್ರವೇಶಿಸಿ ಮಂತ್ರಿಯಾಗಿ, ನಿಗಮಗಳ ಅಧ್ಯಕ್ಷರಾಗಿ ಇಡೀ ಕರ್ನಾಟಕದ ಅಚ್ಚುಮೆಚ್ಚಿನ ರಾಜಕಾರಣಿಯಾಗಿ ಹೆಸರು ಮಾಡಿದ ಮಾದರಿ ರಾಜಕಾರಣಿ.

ಅಭಿವೃದ್ಧಿಯಲ್ಲೂ ಮೈಲಿಗಲ್ಲು: ಹಾನಗಲ್ಲ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಸಿ.ಎಂ. ಉದಾಸಿ ಹಗಲಿರುಳು ಶ್ರಮಿಸಿ ಸರಕಾರದಲ್ಲಿ ಪ್ರಭಾವ ಬೀರಿ ತಾಲೂಕಿನ ಅಭಿವೃದ್ಧಿಗೆ ಶಕ್ತಿ ಮೀರಿ ಸೇವೆ ಸಲ್ಲಿಸಿದವರು. ಲೋಕೋಪಯೋಗಿ ಖಾತೆ ಮಂತ್ರಿಯಾದ ಸಂದರ್ಭದಲ್ಲಿ ಕೇವಲ ಕೃಷಿಗೆ ಸೀಮಿತವಾದ ನಬಾರ್ಡ್‌ ಯೋಜನೆಯನ್ನು ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಅನ್ವಯಿಸುವಂತೆ ಮಾಡಿ ಇಡೀ ರಾಜ್ಯದಲ್ಲಿ ರಸ್ತೆಗಳ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದರು. ಹಾನಗಲ್ಲ ತಾಲೂಕಿನ ರಸ್ತೆಗಳಂತೂ ಸದಾ ಕಾಲಕ್ಕೂ ಸಿ.ಎಂ.ಉದಾಸಿಯವರ ಹೆಸರು ಹೇಳುವಂತೆ ಅಭಿವೃದ್ಧಿಗೊಂಡಿದ್ದು, ಇಡೀ ತಾಲೂಕಿನ ಜನ ಪûಾತೀತವಾಗಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚುವಂತೆ ಈಗಲೂ ನೆನಪಿಸುತ್ತಾರೆ.

ಛಲದಂಕಮಲ್ಲ : ಸಿ.ಎಂ. ಉದಾಸಿ ಎಂದರೆ ಹಠ ಬಿಡದ ಛಲದಂಕಮಲ್ಲ. ಹಿಡಿದ ಕೆಲಸವನ್ನು ಪಟ್ಟು ಬಿಡದೆ ಪೂರ್ಣಗೊಳಿಸಿ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಹುಬ್ಬೇರಿಸುವಂತೆ ಮಾಡುವ ತಾಕತ್ತಿರುವ ವ್ಯಕ್ತಿತ್ವ. ತನ್ನ ಬೆನ್ನ ಹಿಂದೆ ಇರುವ ಕಾರ್ಯಕರ್ತರ ಹಿತಕ್ಕೆ ಯಾವುದೇ ಧಕ್ಕೆಯಾಗದಂತೆ ಕಾಪಾಡಿಕೊಳ್ಳುವ ನಿಷ್ಠೆ ಉದಾಸಿಯವರದಾಗಿತ್ತು. ಕಾರ್ಯಕರ್ತರೆಂದರೆ ತನ್ನ ಶಕ್ತಿ ಎಂದು ತಿಳಿದ ಸಿ.ಎಂ. ಉದಾಸಿ ಎಂತಹುದೇ ಕಠಿಣ ಪ್ರಸಂಗದಲ್ಲಿಯೂ ಹೋರಾಟದಿಂದ ಹಿಂದೆ ಸರಿಯದೆ ನ್ಯಾಯಕ್ಕಾಗಿ ಊಟ ನಿದ್ದೆಯ ಪರಿವಿಲ್ಲದೆ ಕೆಲಸ ಮಾಡುವ ನಿಜವಾದ ರಾಜಕೀಯ ಮುತ್ಸದ್ಧಿಯಾಗಿದ್ದರು.

ಬಹುಭಾಷಾ ಪ್ರವೀಣ: ಕೇವಲ 8 ನೇ ತರಗತಿ ವರೆಗೆ ಓದಿದ್ದ ಸಿ.ಎಂ. ಉದಾಸಿ 8-10 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಛಾತಿ ಉಳ್ಳವರು. ತೀರಾ ಇತ್ತೀಚಿನ ವರ್ಷಗಳಲ್ಲಿ ಉರ್ದು ಮಾತನಾಡುವುದರ ಜೊತೆಗೆ ಇಲ್ಲಿನ ನಿವೃತ್ತ ಉರ್ದು ಶಿಕ್ಷಕ ಉಪ್ಪಿನ ಎಂಬುವವರಲ್ಲಿ ಉರ್ದು ಬರವಣಿಗೆಯನ್ನು ಅಭ್ಯಾಸ ಮಾಡಿ ಭಾಷೆ ಅಧ್ಯಯನಕ್ಕೆ ವಯಸ್ಸು, ಜಾತಿ ಧರ್ಮದ ಕಟ್ಟಳೆ ಇಲ್ಲ ಜ್ಞಾನಕ್ಕಾಗಿ ಜಗತ್ತಿನ ಎಲ್ಲ ಭಾಷೆಗಳನ್ನು ಅರಿಯಬೇಕು ಎಂಬ ಸಂದೇಶ ಸಾರಿದ್ದರು.

ಅದ್ಭುತ ನೆನಪಿನ ಶಕ್ತಿ : ಸಿ.ಎಂ.ಉದಾಸಿ ಅವರಿಗೆ ಅಗಾಧ ನೆನಪಿನ ಶಕ್ತಿ ಇತ್ತೆಂಬುದು ಇಡೀ ತಾಲೂಕಿನ ಜನತೆಗೆ ಗೊತ್ತಿರುವ ಸಂಗತಿ. ಹತ್ತಾರು ವರ್ಷಗಳ ಹಿಂದೆ ಭೇಟಿಯಾದ ವ್ಯಕ್ತಿಗಳ ಹೆಸರನ್ನು ಹಿಡಿದು ಮಾತನಾಡುವ, ಎಂದೋ ಕೇಳಿದ ದೂರವಾಣಿ ಸಂಖ್ಯೆ, ಮೊಬೈಲ್‌ ನಂಬರ್‌ಗಳನ್ನು ನೆನಪಿಟ್ಟುಕೊಂಡು ಡಯಲ್‌ ಮಾಡುತ್ತಿದ್ದರು. ಕಾರ್ಯಕರ್ತರನ್ನು ಹೆಸರು ಹೇಳಿ ಕರೆಯುವ ಹಾಗೂ ತಮ್ಮ ಕಾರ್ಯಕರ್ತರು ಪಂಚಾಯತಿ ಸದಸ್ಯರು ಸೇರಿದಂತೆ ಯಾವುದೇ ಸೇವೆಯಲ್ಲಿದ್ದರೂ ಅವರ ಅಧಿಕಾರಾವಧಿಯನ್ನು ದಿನಾಂಕ ಸಹಿತ ಹೇಳುವ ನೆನಪಿನ ಶಕ್ತಿ ಅವರದ್ದು.

ಬೆಳೆವಿಮಾ ಹರಿಕಾರ : ಇಡೀ ರಾಜ್ಯದಲ್ಲಿ ಬೆಳೆವಿಮೆಯನ್ನು ಕೆಲವೇ ಕೆಲವು ರೈತರು ಕಾನೂನು ರೀತ್ಯಾ ಬಳಸಿಕೊಳ್ಳುತ್ತಿದ್ದರು. ಹಾನಗಲ್ಲ ತಾಲೂಕು ಅತಿ ಹೆಚ್ಚು ಅತಿವೃಷ್ಟಿ ಅನಾವೃಷ್ಟಿಗಳಿಗೆ ಈಡಾಗಿ ರೈತ ಸಂಕಷ್ಟಕ್ಕೆ ಈಡಾದ ಸಂದರ್ಭದಲ್ಲಿ ಹಾನಗಲ್ಲ ತಾಲೂಕು ಹಾಗೂ ಹಾವೇರಿ ಜಿಲ್ಲೆಯಾದ್ಯಂತ ರೈತರು ಬೆಳೆವಿಮೆ ಕಂತು ತುಂಬುವಂತೆ ಜಾಗೃತಿಯ ಹೋರಾಟವನ್ನೇ ಮಾಡಿ ಇಡೀ ರಾಜ್ಯದಲ್ಲಿ ಹಾನಗಲ್ಲ ತಾಲೂಕು ಅತಿ ಹೆಚ್ಚು ಬೆಳೆವಿಮಾ ಸೌಲಭ್ಯವನ್ನು ಪಡೆಯುವಂತೆ ಮಾಡಿದ ಶ್ರೇಯಸ್ಸು ಸಿ.ಎಂ.ಉದಾಸಿಯವರಿಗೆ ಸಲ್ಲುತ್ತದೆ. ಅಲ್ಲದೆ ಸಕಾಲಿಕವಾಗಿ ಬೆಳೆವಿಮೆ ರೈತರ ಖಾತೆಗಳಿಗೆ ಜಮಾ ಆಗುವಂತೆ ಅಧಿಕಾರ ಇದ್ದಾಗಲೂ ಇಲ್ಲದಿದ್ದಾಗಲೂ ಕಾನೂನು ಹೋರಾಟ ನಡೆಸಿ ರೈತರ ಪರ ನಿಂತು ರೈತ ನಾಯಕ ಎನಿಸಿಕೊಂಡವರು.

ಶಿಕ್ಷಣ ಪ್ರೇಮಿ : ಕೇವಲ 8 ನೇ ತರಗತಿ ಓದಿದ ಸಿ.ಎಂ. ಉದಾಸಿಯವರಿಗೆ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಸುಲಭವಾಗಿ ಉನ್ನತ ಶಿಕ್ಷಣ ಲಭ್ಯವಾಗಬೇಕೆಂಬ ಕಳಕಳಿ ಇತ್ತು. ಹಾವೇರಿ ಜಿಲ್ಲೆಯ ನವೋದಯ ವಿದ್ಯಾಲಯವನ್ನು ಹಾನಗಲ್ಲ ತಾಲೂಕಿನ ಮಹರಾಜಪೇಟೆಯಲ್ಲಿ ಸ್ಥಾಪಿಸಿ ಎಲ್ಲ ಸೌಲಭ್ಯಗಳನ್ನು ಒದಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜಿಲ್ಲೆಯಾದ್ಯಂತ ಮೋರಾರ್ಜಿ ವಸತಿ ಶಾಲೆಗಳು, ಪಾಲಿಟೆಕ್ನಿಕ್‌, ಸರಕಾರಿ ಪ್ರೌಢಶಾಲೆಗಳನ್ನು, ತೆರೆದಿರುವುದು ಮಾತ್ರವಲ್ಲ ಮೂರು ಪದವಿ ಕಾಲೇಜುಗಳನ್ನು ಆರಂಭಿಸುವಲ್ಲಿ ಅಗ್ರಣೀಯ ಸೇವೆ ಸಲ್ಲಿಸಿದರು. ಇವರದೇ ಆಡಳಿತದ ಶ್ರೀ ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟನ ಶಿಕ್ಷಣ ಮಹಾವಿದ್ಯಾಲಯ ಇಡೀ ರಾಜ್ಯದಲ್ಲಿಯೇ ಹೆಸರು ಮಾಡಿದೆ. ಇದೇ ಆವರಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಬಸವೇಶ್ವರರ ಪುತ್ಥಳಿಗಳನ್ನು ಸ್ಥಾಪಿಸಿರುವುದು ವಿಶೇಷ ಸಂಗತಿ.

ನೀರು ಹರಿಸಿದ ಭಗೀರಥ : ನೀರಾವರಿ ಎಂದರೆ ಸಿ.ಎಂ.ಉದಾಸಿಯವರಿಗೆ ನರನಾಡಿಗಳೆಲ್ಲ ಒಮ್ಮೆಲೆ ಜಾಗೃತವಾಗುತ್ತಿದ್ದವು. ರೈತನ ಕೃಷಿ ಭೂಮಿಗೆ ನೀರೊದಗಿಸಿದರೆ ರೈತ ಆರ್ಥಿಕವಾಗಿ ಬಲಗೊಳ್ಳಬಲ್ಲ. ಆಗ ಸರಕಾರದ ಕಡೆಗೆ ಅನುದಾನಗಳಿಗಾಗಿ ಆಸೆ ಪಡಲಾರ ಎಂಬುದು ಇವರ ಅರಿವಿಗೆ ಬಂದಿತ್ತು. ಹೀಗಾಗಿ ಹಾನಗಲ್ಲ ತಾಲೂಕಿನ ನೂರಾರು ಕೆರೆಗಳ ಹೂಳೆತ್ತುವ, ಧರ್ಮಾ ಜಲಾಶಯದ ಕಾಲುವೆಯನ್ನು ಕಾಂಕ್ರೀಟ್‌ ಕಾಲುವೆ ಮಾಡುವ, ಇದೆಲ್ಲದಕ್ಕಿಂತ ಮುಖ್ಯವಾಗಿ 500 ಕೋಟಿಗೂ ಅಧಿಕ ಹಣದಲ್ಲಿ ಬಾಳಂಬೀಡ ಹಾಗೂ ಹಿರೇಕಾಂಶಿ ಏತ ನೀರಾವರಿ ಯೋಜನೆಗಳನ್ನು ಸಾಕಾರಗೊಳಿಸಲು ಮುಂದಾಗಿ ಹಾನಗಲ್ಲ ತಾಲೂಕಿನ ಅರ್ಧಕ್ಕೂ ಹೆಚ್ಚು ಕೃಷಿ ಪ್ರದೇಶ ನೀರಾವರಿಗೆ ಒಳಪಡುವಂತೆ ಮಾಡಿ ನೀರು ಹರಿಸಿದ ಭಗೀರಥ ಎಂದು ಕರೆಸಿಕೊಂಡರು. ತಿಳವಳ್ಳಿ, ಬಸಾಪೂರ ಏತ ನೀರಾವರಿ ಯೋಜನೆಗಳು ದಶಕಗಳ ಹಿಂದೆಯೇ ನಿರ್ಮಾಣಗೊಂಡು ತಾಲೂಕಿನ ದಕ್ಷಿಣ ಭಾಗದ ರೈತರ ಕೃಷಿ ಭೂಮಿಯನ್ನು ತಣಿಸಿ ರೈತರು ನೆಮ್ಮದಿಯಾಗಿರಲು ಅವಕಾಶ ಮಾಡಿಕೊಟ್ಟಿದೆ.

ಉದಾಸಿ ನಡೆದದ್ದೇ ಮಾರ್ಗ : ರಾಜಕಾರಣದಲ್ಲಿ ಎಂದೂ ತನ್ನ ಗುರಿಯನ್ನು ತಪ್ಪದೆ ಹೆಜ್ಜೆ ಹಾಕಿದ ಸಿ.ಎಂ. ಉದಾಸಿ ರಾಜಕೀಯ ಇತಿಹಾಸದಲ್ಲಿ ಅವರು ನಡೆದದ್ದು ಮಾದರಿ ಮಾರ್ಗ ಎಂಬ ಹೆಗ್ಗುರುತನ್ನು ಮೂಡಿಸಿದ್ದಾರೆ. ಹಾನಗಲ್ಲ ತಾಲೂಕಿನ ಚುನಾವಣೆ ವಿಷಯದಲ್ಲಿ ಕಾಂಗ್ರೇಸ್‌ ಸೇರಿದಂತೆ ವಿವಿಧ ಪಕ್ಷಗಳು ಒಂದೆಡೆಯಾದರೆ ಇಲ್ಲಿ ಉದಾಸಿಯವರೇ ಒಂದು ಪಕ್ಷ ಎನ್ನುವಷ್ಟರ ಮಟ್ಟಿಗೆ ಶಸಕ್ತ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದರು. ಜನಹಿತದ ರಾಜಕಾರಣದ ಮೂಲಕ ಉದಾಸಿಯವರು ಇಂದಿಗೂ ಇಡೀ ಜಿಲ್ಲೆಯಲ್ಲಿ ಮನೆಮಾತಾಗಿ ಉಳಿದಿದ್ದಾರೆ.

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.