ವಿಷಯ ಪುನರ್ ಮನನ ಆರಂಭ
Team Udayavani, Jun 3, 2020, 2:19 PM IST
ಹಾವೇರಿ: ಕೋವಿಡ್-19 ಸೋಂಕಿನ ಕಂಟಕದಿಂದ ಹಿನ್ನಡೆ ಕಂಡಿರುವ ಶೈಕ್ಷಣಿಕ ಚಟುವಟಿಕೆ ಚುರುಕುಗೊಳಿಸುವ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಆನ್ಲೈನ್ ತರಬೇತಿ ಮೂಲಕ ವಿಷಯದ ಪುನರ್ ಮನನ ಕಾರ್ಯ ನಡೆದಿದೆ.
ಜೂ. 1ರಿಂದ ಈ ಆನ್ಲೈನ್ ತರಬೇತಿ ಆರಂಭವಾಗಿದ್ದು, ಜೂ. 30ರ ವರೆಗೆ ನಡೆಯಲಿದೆ. ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರಿಗೆ ಹಾವೇರಿ ವಲಯವಾರು ಸಂಪನ್ಮೂಲ ವ್ಯಕ್ತಿ ಗಳಿಂದ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಸುಮಾರು 500ಕ್ಕೂ ಅಧಿಕ ಶಿಕ್ಷಕರು ಆನ್ಲೈನ್ ತರಬೇತಿ ಪಡೆಯುತ್ತಿದ್ದಾರೆ. ವಿಷಯವಾರು 70 ಸಂಪನ್ಮೂಲ ವ್ಯಕ್ತಿಗಳಿಂದ ಏಕ ಕಾಲದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಆನ್ ಲೈನ್ ತರಬೇತಿ ನೀಡುತ್ತಿದ್ದಾರೆ. ಬಿಆರ್ಸಿ, ಸಿಆರ್ಸಿ ಅಧಿಕಾರಿಗಳು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ತರಬೇತಿ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾ ಸಮನ್ವಯ ಅಧಿಕಾರಿಗಳು ಹೊಂದಿದ್ದಾರೆ.
ನೆಟ್ವರ್ಕ್ ಕಿರಿಕಿರಿ: ಈಗಾಗಲೇ ಝೂಮ್ ಆ್ಯಪ್ ಮೂಲಕ ಲಾಗಿನ್ ಆಗಿರುವ ಶಿಕ್ಷಕರಿಗೆ ನೆಟವರ್ಕ್ ಸಮಸ್ಯೆ ಎದುರಾಗುತ್ತಿದೆ. ಆದರೂ ಗ್ರಾಮೀಣ ಭಾಗದ ಶಿಕ್ಷಕರು ತಮ್ಮ ಮನೆಯ ಮಾಳಿಗೆ ಇಲ್ಲವೇ ನೆಟವರ್ಕ್ ಸಿಗುವ ಸುತ್ತಲಿನ ಎತ್ತರದ ಪ್ರದೇಶಗಳಿಗೆ ಹೋಗಿ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಶಿಕ್ಷಕರಿಗೆ ಇದು ಹೊಸ ಅನುಭವ ನೀಡುತ್ತಿದೆ.
ಸುಮಾರು ತಿಂಗಳಿಂದ ಮನೆಯಲ್ಲಿ ಕುಳಿತು ಬೇಸರವಾಗಿದ್ದ ಶಿಕ್ಷಕರಿಗೆ ಆನ್ಲೈನ್ ತರಬೇತಿ ಭಾಗವಹಿಸುವಿಕೆಯಿಂದಾಗಿ ಮತ್ತೆ ಶೈಕ್ಷಣಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಲುವಂತೆ ಮಾಡಿ ಹೊಸ ಚೈತನ್ಯವನ್ನುಂಟುಮಾಡಿದೆ. ಜೊತೆಗೆ ಶಿಕ್ಷಕರಿಗೆ ತಂತ್ರಜ್ಞಾನದ ಅರಿವು ಮೂಡಿಸಿದಂತಾಗಿದೆ. –ಎಸ್.ಜಿ. ಪಾಟೀಲ, ನಲಿಕಲಿ ತರಗತಿ ಶಿಕ್ಷಕಿ ಕೆ.ಜಿಎಸ್., ನೆಗಳೂರ