13ರಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ
Team Udayavani, May 11, 2019, 3:06 PM IST
ರಾಣಿಬೆನ್ನೂರ: ನಗರದ ಹೊರವಲಯದಲ್ಲಿನ ದೇವರಗುಡ್ಡ ಮಾರ್ಗದ ರಾಜ್ಯ ಹೆದ್ದಾರಿಗೆ ನಿರ್ಮಾಣವಾಗುತ್ತಿರುವ ರೈಲ್ವೆ ಇಲಾಖೆ ಒಳಸೇತುವೆ ನಿರ್ಮಾಣ ಕಾರ್ಯ ಅವೈಜ್ಞಾನಿಕವಾಗಿದ್ದು, ಅದನ್ನು ಸ್ಥಗಿತಗೊಳಿಸಿ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಮೇ 13ರಿಂದ ಕಾಮಗಾರಿ ಸ್ಥಳದಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ವಿರಕ್ತಮಠದ ಗುರುಬಸವ ಸ್ವಾಮೀಜಿ ಹೇಳಿದರು.
ಶುಕ್ರವಾರ ಪಾಂಡುರಂಗ ದೇವಸ್ಥಾನದ ಸಭಾಭವನದಲ್ಲಿ ರೈಲ್ವೆ ಮೇಲ್ಸೇತುವೆ ಹೋರಾಟ ಸಮಿತಿಯವರು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೀಳಗಿ-ಬಿಳಗಿರಿ ರಂಗನತಿಟ್ಟು ರಾಜ್ಯ ಹೆದ್ದಾರಿಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿರುವುದರಿಂದ ಮಳೆಗಾಲದಲ್ಲಿ ಬಹಳ ತೊಂದರೆಯಾಗಲಿದೆ ಎಂದರು. ವಾಣಿಜ್ಯ ನಗರಿಯಾಗಿರುವ ಈ ನಗರ ಹತ್ತಿ ಮತ್ತು ಗೋವಿನ ಜೋಳಕ್ಕೆ ಹೆಸರುವಾಸಿಯಾಗಿದೆ. ತಾಲೂಕಿನ ವಿವಿಧ ಗ್ರಾಮಗಳಿಂದ ರೈತರು ಮಾರುಕಟ್ಟೆಗೆ ತರುವ ಗೋವಿನ ಜೋಳ, ಹತ್ತಿ, ಶೇಂಗಾ ಮತ್ತಿತರ ಕೃಷಿ ಉತ್ಪನ್ನ ಸಾಗಾಟ ಮಾಡುವಾಗ ಈ ಕೆಳಸೇತುವೆಯಿಂದ ಬಹಳಷ್ಟು ಅನಾನುಕೂಲವಾಗುತ್ತದೆ ಎಂದರು.
ಶೀಘ್ರವೇ ರೈಲ್ವೆ ಇಲಾಖೆಯವರು ಸೇತುವೆ ಕಾಮಗಾರಿ ಮರು ಪರಿಶೀಲಿಸಬೇಕು. ಕೆಳ ಸೇತುವೆಯಿಂದ ಜನ-ಜಾನುವಾರು ಮತ್ತು ವಾಹನಗಳಿಗೆ ಉಂಟಾಗುವ ಸಮಸ್ಯೆ ಅರಿತು ಮೇಲ್ಸೇತುವೆ ನಿರ್ಮಾಣ ಕಾರ್ಯ ಆರಂಭಿಸಬೇಕು ಎಂದರು.
ಜಿ.ಜಿ. ಹೊಟ್ಟಿಗೌಡ್ರ, ಬಸವರಾಜ ಪಾಟೀಲ, ಉಮೇಶ ಹೊನ್ನಾಳಿ, ಜಗದೀಶ ಕೆರೂಡಿ, ಮಲ್ಲಣ್ಣ ಅಂಗಡಿ, ರವೀಂದ್ರಗೌಡ ಪಾಟೀಲ, ಪ್ರಭುಸ್ವಾಮಿ ಕರ್ಜಗಿಮಠ, ಪ್ರಕಾಶ ಪೂಜಾರ, ಹನುಮಂತಪ್ಪ ಕಬ್ಟಾರ, ಚಂದ್ರಣ್ಣ ಹೊನ್ನಾಳಿ ಸೇರಿದಂತೆ ಇತರರಿದ್ದರು.