ಅಪರಾಧ ತಡೆಗೆ ಜನತೆ ಸಹಕರಿಸಲಿ
ಎಲ್ಲರೂ ಕಾನೂನು ಗೌರವಿಸಿದರೆ ಸಮಾಜ ಸನ್ಮಾರ್ಗದಲ್ಲಿ :ನ್ಯಾ| ವಿಜಯ್
Team Udayavani, Jul 1, 2019, 10:05 AM IST
ಹೊನ್ನಾಳಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಶಿಬಿರದಲ್ಲಿ ಜೆಎಂಎಫ್ಸಿ ಪ್ರಧಾನ ಸಿವ್ಹಿಲ್ ನ್ಯಾಯಾಧಿಧೀಶ ಎಂ.ವಿಜಯ್ ಮಾತನಾಡಿದರು.
ಹೊನ್ನಾಳಿ: ಸಾರ್ವಜನಿಕರಿಗಾಗಿ ಪೊಲೀಸರು, ಕಾನೂನಿಗಾಗಿ ಸಾರ್ವಜನಿಕರಿದ್ದರೆ ಸಮಾಜದಲ್ಲಿ ಅಪರಾಧಗಳು ಜರುಗುವುದಿಲ್ಲ ಎಂದು ಜೆಎಂಎಫ್ಸಿ ಪ್ರಧಾನ ಸಿವ್ಹಿಲ್ ನ್ಯಾಯಾಧೀಶ ಎಂ.ವಿಜಯ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಪೊಲೀಸ್ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸರು ಜನಸ್ನೇಹಿಯಾಗಿ ತಮ್ಮ ಕರ್ತವ್ಯ ಪಾಲಿಸಿ ಕಾನೂನನ್ನು ಗೌರವಿಸುತ್ತ ಬರುತ್ತಿದ್ದಾರೆ. ಅಂತಹ ಪೊಲೀಸ್ ಅಧಿಕಾರಿಗಳಿಗೆ ಸಾರ್ವಜನಿಕರು ಅಪರಾಧಗಳನ್ನು ತಡೆಯುವುದಕ್ಕೆ ಸಹಕಾರ ನೀಡಿದರೆ ಸ್ವಸ್ಥ ಸಮಾಜ ನಿರ್ಮಾಣ ಹಾಗೂ ನೊಂದವರಿಗೆ ನ್ಯಾಯ ಒದಗಿಸಲಿಕ್ಕೆ ಸಹಕಾರ ನೀಡಿದಂತಾಗುತ್ತದೆ ಎಂದು ಹೇಳಿದರು.
ಕಾನೂನನ್ನು ಎಲ್ಲರೂ ಗೌರವಿಸಿದರೆ ತಾನಾಗಿಯೇ ಸಮಾಜ ಸನ್ಮಾರ್ಗದಲ್ಲಿ ನಡೆಯುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಕಾನೂನಿಗೆ ಗೌರವ ಕೊಟ್ಟು ನಡೆದರೆ ಎಲ್ಲರಿಗೂ ನ್ಯಾಯ ಸಿಗುತ್ತದೆ ಎಂದು ಹೇಳಿದರು.
ಹೆಚ್ಚುವರಿ ನ್ಯಾಯಾಧೀಶೆ ಅರ್ಚನಾ ಕೆ. ಉಣ್ಣಿತ್ತಾನ್ ಮಾತನಾಡಿ, ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ಕಾನೂನಿನಡಿಯಲ್ಲೇ ಬರುವುದರಿಂದ ಕಾನೂನನ್ನು ಬಿಟ್ಟು ಬದುಕಲಿಕ್ಕೆ ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ಕಾನೂನಿಗೆ ಗೌರವ ನೀಡಿದರೆ ಮುಂದೆ ಕಾನೂನು ಎಲ್ಲರಿಗೂ ರಕ್ಷಾ ಕವಚ ಆಗಲಿದೆ ಎಂದರು.
ತಾಲೂಕು ಕಚೇರಿ, ನ್ಯಾಯಾಲಯದ ಆವರಣ ಹಾಗೂ ಸಿಡಿಪಿಒ ಕಚೇರಿಗಳಲ್ಲಿ ಉಚಿತ ಕಾನೂನು ಸಲಹೆ ನೀಡಲಿಕ್ಕೆ ವಕೀಲರನ್ನು ನೇಮಕ ಮಾಡಲಾಗಿದೆ. ಅದರ ಸದುಪಯೋಗವನ್ನು ಕಕ್ಷಿದಾರರು ಪಡೆದುಕೊಳ್ಳಬೇಕು ಎಂದು ಹೇಳಿದರು. ಸಿಪಿಐ ಬ್ರಿಜೇಶ್ ಮ್ಯಾಥ್ಯು ಮಾತನಾಡಿ, ಬೈಕ್ ಸವಾರಿ ಮಾಡುವ ಯುವಕರು ಮೊದಲು ಲೈಸೆನ್ಸ್ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ದಂಡ ವಿಧಿಸುವ ಅವಕಾಶ ಇದೆ. ಅಲ್ಲದೇ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ತಿಳಿಸಿದರು. ವಾಹನ ಚಾಲಕರಲ್ಲದೇ ಮಾಲೀಕರ ಮೇಲೆ ಕೂಡ ಪ್ರಕರಣ ದಾಖಲು ಮಾಡಲು ಪ್ರಾವಧಾನ ಇರುವುದರಿಂದ ಬೇರೆಯವರಿಗೆ ವಾಹನ ನೀಡಬಾರದು ಎಂದರು.ವಕೀಲರ ಸಂಘದ ಅಧ್ಯಕ್ಷ ಬಸವನಗೌಡ, ಉಪಾಧ್ಯಕ್ಷ ಉಮಾಕಾಂತ್ ಜೋಯ್ಸ, ಉಮೇಶ್ ಮಾತನಾಡಿದರು. ವಕೀಲರಾದ ಚೇತನ್ಕುಮಾರ್, ಮಂಜುಳ, ಗುಡ್ಡಪ್ಪ, ಕರುಣಾಕರ್ ಇದ್ದರು.