ಅವ್ಯವಸ್ಥೆಯ ಆಗರವಾದ ಬಸ್ ನಿಲ್ದಾಣ
ನಿಷೇಧಿತ ಸ್ಥಳದಲ್ಲೇ ಬೈಕ್ ನಿಲುಗಡೆ•ಸೌಲಭ್ಯ ಕೊರತೆಯಿಂದ ಪ್ರಯಾಣಿಕರಿಗೆ ಸಮಸ್ಯೆ •ನಿರ್ಲಕ್ಷ್ಯಕ್ಕೆ ಆಕ್ರೋಶ
Team Udayavani, Jul 21, 2019, 10:12 AM IST
ಹುಮನಾಬಾದ: ಕೇಂದ್ರ ಬಸ್ ನಿಲ್ದಾಣದ ನಿಷೇಧಿತ ಸ್ಥಳದಲ್ಲಿ ಸಾರ್ವಜನಿಕರು ಬೈಕ್ ನಿಲ್ಲಿಸಿರುವುದು.
ಹುಮನಾಬಾದ: ಪಟ್ಟಣದ ಕೇಂದ್ರ ಬಸ್ ನಿಲ್ದಾಣ ಪ್ರಾಂಗಣದ ನಿಷೇಧಿತ ಸ್ಥಳದಲ್ಲೇ ಮೂತ್ರ ವಿಸರ್ಜನೆ ಮತ್ತು ಬೈಕ್ ನಿಲುಗಡೆ ಮಾಡುತ್ತಿರುವ ಕಾರಣ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಸಂಪರ್ಕ ಸೇತುವೆಯಾಗಿರುವ ರಾಷ್ಟ್ರೀಯ ಹೆದ್ದಾರಿ 65ಕ್ಕೆ ಹೊಂದಿಕೊಂಡ, ಪಟ್ಟಣದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಸುಸಜ್ಜಿತ ಬಸ್ ನಿಲ್ದಾಣದಲ್ಲಿ ಎಲ್ಲವೂ ಅಂದುಕೊಂಡಂತೆ ಮೂಲಸೌಲಭ್ಯಗಳು ಸುಸಜ್ಜಿತ ಆಗಿದ್ದರೆ ಇಲ್ಲಿ ಯಾವುದೇ ಸಮಸ್ಯೆಗಳೇ ಇರುತ್ತಿರಲಿಲ್ಲ. ಆದರೆ ಸುಸಜ್ಜಿತ ಇರುವುದು ಕೇವಲ ಕಟ್ಟಡ ಮಾತ್ರ. ಸೌಲಭ್ಯಗಳೆಲ್ಲ ಕಳಪೆ ಆಗಿರುವುದರಿಂದ ಪ್ರಯಾಣಿಕರು ಪ್ರತಿನಿತ್ಯ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಪ್ರಾಂಗಣದಲ್ಲೇ ಮೂತ್ರ ವಿಸರ್ಜನೆ: ನಿಲ್ದಾಣ ಒಳಗೆ ಪುರುಷರು ಮತ್ತು ಸ್ತ್ರೀಯರಿಗಾಗಿ ಪ್ರತ್ಯೇಕ ಶೌಚಾಲಯ ಸೌಲಭ್ಯ ಕಲ್ಪಿಸಿದ್ದರೂ ಬಹುತೇಕ ಜನರು ಒಳಗೆ ಹೋಗದೇ ನಿಲ್ದಾಣ ಪ್ರಾಂಗಣದಲ್ಲಿ ಕಾಂಪೌಂಡ್ ಬಳಿ ನಿರ್ಮಿಸಲಾದ ಚರಂಡಿ ಪಕ್ಕದಲ್ಲೇ ಮೂತ್ರ ವಿಸರ್ಜಿಸುವ ಕಾರಣ ನಿಲ್ದಾಣದ ಪ್ರಾಂಗಣ ಗಬ್ಬೇರಿ ನಾರುತ್ತಿದೆ. ಮಹಿಳೆಯರು ಅಲ್ಲಿಂದ ಸಂಚರಿಸುತ್ತಾರೆ ಎಂಬುದು ಗೊತ್ತಿದ್ದೂ ಮೂತ್ರ ವಿಸರ್ಜನೆ ಮಾಡುವುದರಿಂದ, ಮಹಿಳೆಯರು ಬಸ್ನಿಂದ ಕೆಳಗಿಳಿಯಲು ಸಂಕೋಚಪಡುವ ಸ್ಥಿತಿ ನಿರ್ಮಾಣವಾಗಿದೆ.
ಹೂಳು ತೆರವುಗೊಳಿಸಿ: ನಿಲ್ದಾಣದ ಕಂಪೌಂಡ್ಗೆ ಹೊಂದಿಕೊಂಡು ನಿರ್ಮಿಸಲಾದ ಬೃಹತ್ ಚರಂಡಿಯಲ್ಲಿ ಹೂಳುತುಂಬಿ, ಮಳೆ ನೀರು ಸೇರಿದಂತೆ ತ್ಯಾಜ್ಯ ಹರಿದು ಹೋಗಲು ಸಾಧ್ಯವಾಗದೇ ಮಳೆಗಾಲದಲ್ಲಿ ಚರಂಡಿ ತ್ಯಾಜ್ಯ ನಿಲ್ದಾಣದ ಪ್ರಾಂಗಣ ಸೇರುತ್ತಿದ್ದು, ಶೀಘ್ರದಲ್ಲಿ ಚರಂಡಿಯಲ್ಲಿ ತುಂಬಿರುವ ಹೂಳು ತೆರವಿಗೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ.
ನಿಷೇಧಿತ ಸ್ಥಳದಲ್ಲೇ ನಿಲುಗಡೆ: ಸರ್ಕಾರಿ ನೌಕರರು, ನೌಕರಿಗಾಗಿ ಬೇರೆ ಊರಿಗೆ ಹೋಗುವ ನೌಕರರು ಅದಕ್ಕಾಗಿಯೇ ಎಂದು ನಿಗದಿಪಡಿಸಲಾದ ಸ್ಥಳದಲ್ಲಿ ನಿಯಮಾನುಸಾರ ಹಣ ಪಾವತಿ ಮಾಡಿ ವಾಹನ ನಿಲ್ಲಿಸುತ್ತಾರೆ. ಆದರೆ ತಮ್ಮ ಸಂಬಂಧಿಕರನ್ನು ಬಿಡುವುದು ಹಾಗೂ ವಿವಿಧ ಕೆಲಸ ನಿಮಿತ್ತ ನಿಲ್ದಾಣಕ್ಕೆ ಆಗಮಿಸುವ ಬೈಕ್ ಸವಾರರು ನೋಪಾರ್ಕಿಂಗ್ ನಾಮಫಲಕ ಹಾಕಿದ ಸ್ಥಳದಲ್ಲಿಯೇ ಗಂಟೆಗಟ್ಟಲೇ ವಾಹನಿ ನಿಲ್ಲಿಸಿ ಹೋಗುತ್ತಿದ್ದಾರೆ. ಇದರಿಂದ ಪಾದಚಾರಿ, ಪ್ರಯಾಣಿಕ ಮಕ್ಕಳು ಮತ್ತು ವೃದ್ಧರು ನಿಲ್ದಾಣದ ಒಳಗೆ ಹೋಗಲು ಸ್ಥಳವಿಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಶೌಚಾಲಯದಲ್ಲಿ ಹೆಚ್ಚು ಹಣ ವಸೂಲಿ: ಬಸ್ನಿಂದ ಇಳಿದು ತುರ್ತಾಗಿ ಮೂತ್ರ ವಿಸರ್ಜನೆಗೆ ಹೋಗುವ ಪ್ರಯಾಣಿಕರಿಂದ 2ರಿಂದ 5 ರೂ. ಮತ್ತು ಶೌಚಕ್ಕೆ 8ರಿಂದ 10 ರೂ. ಶೌಚಾಲಯದಲ್ಲಿ ಪಡೆಯುತ್ತಿದ್ದಾರೆ. ಚೌಕಾಸಿ ಮಾಡಿದರೆ ಪ್ರಯಾಣಿಕರ ಜೊತೆಗೆ ಕಿರಿಕಿರಿ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಮೂತ್ರ ವಿಸರ್ಜನೆಗೆ ಹಣ ಪಡೆಯಲು ಅವಕಾಶವಿಲ್ಲ. ಶೌಚಕ್ಕೆ ರೂ.2ಮಾತ್ರ ತೆಗೆದುಕೊಳ್ಳಬೇಕೆಂಬ ನಿಯಮವಿದೆ. ಅದಕ್ಕೆ ನಮ್ಮಿಂದ ಯಾವುದೇ ತಕರಾರಿಲ್ಲ. ಆದರೆ ತುರ್ತು ಸಂದರ್ಭದಲ್ಲಿ ಹೀಗೆ ಹಿಂಸೆ ನೀಡುವುದು ಯಾವ ನ್ಯಾಯ ಎಂಬುದು ಸಾರ್ವನಿಕರ ಪ್ರಶ್ನೆ.
ಎಟಿಎಂ ಸೌಲಭ್ಯಕ್ಕೆ ಕಲ್ಪಿಸಿ: ಎರಡು ರಾಜ್ಯಗಳಿಗೆ ಸಂರ್ಪಕ ಸೇತುವೆಯಂತೆ ಇರುವ ಹುಮನಾಬಾದ ಬಸ್ ನಿಲ್ದಾಣದಲ್ಲಿ ತುರ್ತು ಸಂದರ್ಭದಲ್ಲಿ ಹಣವಿಲ್ಲದೇ ಇದ್ದಾಗ ಅದೆಷ್ಟೋ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಲ್ದಾಣದಲ್ಲಿ ಎಟಿಎಂ ಸೌಲಭ್ಯ ಅತ್ಯಂತ ಅವಶ್ಯವಿದೆ. ಬಹು ದಿನಗಳ ಬೇಡಿಕೆಯಾದ ಇದನ್ನು ಈಶಾನ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಗಂಭೀರ ಪರಿಗಣಿಸದ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದು, ಈಗಲಾದರೂ ಸಾಧ್ಯವಾದಷ್ಟು ಶೀಘ್ರ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಜಾಹಿರಾತು ಶಬ್ದ ನಿಯಂತ್ರಿಸಿ: ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ನಿಲ್ದಾಣದಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ಪ್ರಕಟಿಸುವ ಜಾಹಿರಾತು ಶಬ್ದ ಮಿತಿ ಮೀರುತ್ತಿರುವ ಕಾರಣ ಪ್ರಯಾಣಿಕರಿಗೆ ತೀವ್ರವಾದ ತೊಂದರೆ ಉಂಟಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ. ನಿಷೇಧಿತ ಸ್ಥಳದಲ್ಲಿ ಮೂತ್ರ ವಿಸರ್ಜನೆ, ಬೈಕ್ ನಿಲ್ಲುಸುವವರ ವಿರುದ್ಧ ಮುಲಾಜಿಲ್ಲದೇ ದಂಡ ವಿಧಿಸಬೇಕು. ಶೌಚಕ್ಕೆ ಹಣ ಪಡೆಯುವ ಗುತ್ತಿಗೆದಾರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಶಬ್ದ ಮಾಲಿನ್ಯ ಉಂಟಾಗುವ ರೀತಿ ಜಾಹಿರಾತು ಪ್ರಕಟಿಸದಂತೆ ನಿಯಂತ್ರಿಸುವ ಮೂಲಕ ಪ್ರಯಾಣಿಕರ ನೆಮ್ಮದಿ ಕಾಪಾಡಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ