ಸಿಇಒ ವಿರುದ್ಧ ಗುಡುಗಿದ ಜಿಪಂ ಅಧ್ಯಕ್ಷೆ
Team Udayavani, Jul 7, 2017, 3:36 PM IST
ಕಲಬುರಗಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಹಲವಾರು ಅವ್ಯವಹಾರಗಳಲ್ಲಿ ತಪ್ಪಿತಸ್ಥರು ಎಂದು ಕಂಡು ಬಂದರೂ ಕ್ರಮ ಕೈಗೊಳ್ಳುವಲ್ಲಿ
ಸುಖಾಸುಮ್ಮನೆ ಕಾಲಾಹರಣ ಮಾಡಿ ಹಿಂದೇಟು ಹಾಕುವ ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ, ಗಡಿಕೇಶ್ವರ ಪಿಡಿಓ ವಿರುದ್ಧ ಕ್ರಮ ಕೈಗೊಳ್ಳದೆ ಹೋದರೆ ಸಿಇಒ ವಿರುದ್ಧವೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಗುಡುಗಿದರು.
ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ 7ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಮೂರು ಸಭೆಗಳಲ್ಲಿ ಸದಸ್ಯರು ಕೆಲವು ಅಧಿಕಾರಿಗಳ ವಿರುದ್ಧ ದೂಷಣೆ ಮಾಡಿದ್ದಲ್ಲದೆ, ಅದಕ್ಕೆ ಸಂಬಂಧಿಸಿದ ದಾಖಲೆ ನೀಡಿದರೂ, ಸಿಇಒ ಅವರು ಅವುಗಳ ಕುರಿತು ಪುನಃ ತನಿಖೆ ಮಾಡಿ, ಅದಕ್ಕಾಗಿ ಸಮಯ ತೆಗೆದುಕೊಳ್ಳುತ್ತಿರುವುದರಿಂದ ಜಿಲ್ಲೆಯಲ್ಲಿ ಅಭಿವೃದ್ಧಿ
ಕೆಲಸಗಳು ನಡೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಮೂರು ಸಭೆಗಳಲ್ಲಿ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಪಂ ಪಿಡಿಒ ವಿರುದ್ಧ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ ಪ್ರಸ್ತಾಪಿಸಿದ್ದಾರೆ. ಈ ಅವ್ಯವಹಾರದ ಕುರಿತು ಹಿಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ ಅವರ ಅವಧಿಯಲ್ಲಿಯೇ ಪ್ರಸ್ತಾಪಿಸಲಾಗಿದೆ. ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬಂದು ಮೂರು ಸಾಮಾನ್ಯ ಸಭೆಗಳು ನಡೆದಿವೆ. ಅನುಪಾಲನಾ ವರದಿ ಮಾತ್ರ ಜಾರಿಗೆ ಬಂದಿಲ್ಲ. ಅವ್ಯವಹಾರದ ಕುರಿತು ದಾಖಲೆ ಸಮೇತ ಒಪ್ಪಿಸಿದರೂ ಯಾವುದೇ ಕ್ರಮ ಕೈಗೊಳ್ಳಲು ಆಗಿಲ್ಲ. ಹೀಗಾದರೆ ನಾವು ಸಭೆ ನಡೆಸುವುದಾದರೂ ಏಕೆ? ಇದೇ ರೀತಿ ಆದರೆ ನಾವು ಮುಂದಿನ ಚುನಾವಣೆಗೆ ಹೋಗುವುದಾದರೂ ಹೇಗೆ? ಒಂದು ವೇಳೆ ಮತದಾರರ ಬಳಿ ಹೋದಲ್ಲಿ ಅವರು ಸುಮ್ಮನೆ ಇರುತ್ತಾರೆಯೇ. ತಪ್ಪಿತಸ್ಥರ ವಿರುದ್ಧ ಇದೇ ಸಭೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.
ಚವ್ಹಾಣ ಅವರ ಬೇಡಿಕೆಗೆ ಜಿಲ್ಲಾ ಪಂಚಾಯಿತಿ ಸದಸ್ಯ ಶಿವಶರಣಪ್ಪ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ್, ಬಿಜೆಪಿ ಸದಸ್ಯರಾದ ಹರ್ಷಾನಂದ ಗುತ್ತೇದಾರ, ಬಸವರಾಜ ಮತ್ತಿಮೂಡ್, ಶಿವರಾಜ ಪಾಟೀಲ ರದ್ದೇವಾಡಗಿ
ಹಾಗೂ ಬಹುತೇಕ ಆಡಳಿತಾರೂಢ ಪಕ್ಷದ ಸದಸ್ಯರು ಬೆಂಬಲಿಸಿದರು. ಇದರಿಂದ ಕೆಲ ಕಾಲ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಈ ಮಧ್ಯೆ ಸಿಇಒ ಅವರು ಪದೇ ಪದೇ ತಮ್ಮ ಕ್ರಮ ಸಮರ್ಥಸಿಕೊಂಡರೂ ಯಾರೂ ಕಿವಿಗೊಡದಂತ ಪರಿಸ್ಥಿತಿ ನಿರ್ಮಾಣ ಆಗಿತ್ತು. ಈ ಕುರಿತು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಪತ್ಕುಮಾರ ಮಾತನಾಡಿ, ಜಿಲ್ಲಾ ಪಂಚಾಯಿತಿ ನಿವೃತ್ತ ಕಾರ್ಯಪಾಲಕ ಅಭಿಯಂತರ ರಾಜೇಂದ್ರ ಚಿಂಚೋಳಿಕರ ಅವರನ್ನು ಒಳಗೊಂಡು ಜಂಟಿ ತನಿಖೆ ಕೈಗೊಳ್ಳಲು
ಸೂಚಿಸಲಾಗಿದೆ. ಆ ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದರಿಂದ ಕೆರಳಿದ ಅರವಿಂದ ಚವ್ಹಾಣ
ಮಾತನಾಡಿ, ಕಳೆದ ಸಾಮಾನ್ಯ ಸಭೆಯಲ್ಲಿ ಇದೆ ಹೇಳಿದ್ದಿರಿ. ಅವ್ಯವಹಾರದ ಕುರಿತು ಸಾಕ್ಷಿಗಳನ್ನು ಒದಗಿಸಿದರೂ ಏಕೆ ವಿಳಂಬ. ಅಧಿ ಕಾರಿಗಳು, ಸಿಬ್ಬಂದಿಗಳು ತಪ್ಪು ಮಾಡಿದಾಕ್ಷಣ ತಕ್ಷಣವೇ ಅಮಾನತು ಮಾಡುತ್ತಾರೆ. ಆದರೆ, ಅದೇ ಜನಪ್ರತಿನಿ ಧಿಗಳು ಸಾಕ್ಷಿ ಸಮೇತ ತಪ್ಪು ಮಾಡಿದ್ದನ್ನು ಸಾಬೀತುಪಡಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅ ಧಿಕಾರಿಗಳೇನು ಸತ್ಯ ಹರಿಶ್ಚಂದ್ರರ
ಮಕ್ಕಳಾ, ನಾವು ಭ್ರಷ್ಟಾಚಾರಿಗಳಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ನ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ರಾಮ ಪ್ಯಾಟಿ, ಅನುಪಾಲನಾ ವರದಿಯನ್ವಯ ಇಲ್ಲಿಯವರೆಗೆ
ಯಾವುದೇ ಕ್ರಮ ಆಗಿಲ್ಲ. ಎಲ್ಲ ಅವ್ಯವಹಾರಗಳ ಸೂತ್ರದಾರರು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಪತ್ಕುಮಾರ ಆಗಿದ್ದಾರೆ. ತಪ್ಪಿತಸ್ಥ ಅಧಿ ಕಾರಿಗಳನ್ನು ಕಾನೂನಿನ ಅಡಿಯಲ್ಲಿ ಯಾವ ರೀತಿ ರಕ್ಷಿಸಬೇಕೋ ಆ ರೀತಿ ರಕ್ಷಿಸುತ್ತಿದ್ದಾರೆ.
ಜಿಲ್ಲಾ ಪಂಚಾಯಿತಿಯ ಎಲ್ಲ ಹಗರಣಗಳಿಗೆ ಅವರೇ ಹೊಣೆಯಾಗಿದ್ದಾರೆ ಎಂದು ಆರೋಪಿಸಿದರು. ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಸೇರಿದಂತೆ ಪಕ್ಷ ಬೇಧ ಮರೆತು ಎಲ್ಲ ಸದಸ್ಯರು ತಪ್ಪಿತಸ್ಥ ಅ ಧಿಕಾರಿಗಳ ವಿರುದ್ಧ ಇದೇ ಸಭೆಯಲ್ಲಿ
ಕ್ರಮ ಆಗಬೇಕು ಎಂದು ಪಟ್ಟು ಹಿಡಿದರು.
ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ರಮೇಶ ಯಾಕಾಪುರ್ ಮಾತನಾಡಿ, ಸೂಕ್ತ ಮಾಹಿತಿ ನೀಡದ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಅಶೋಶ ಅಂಬಲಗಾ ಅವರಿಗೆ ಕೂಡಲೇ ದಂಡ ವಿ ಧಿಸಬೇಕು ಇಲ್ಲವೇ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು. ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿಗಳು ಪ್ರತಿಕ್ರಿಯಿಸಿ, ಈ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಮಾಹಿತಿ ಒದಗಿಸಿ ಕ್ರಮ
ಕೈಗೊಳ್ಳುವ ಭರವಸೆ ನೀಡಿದರು. ಅದಕ್ಕೆ ಯಾಕಾಪುರ ಆಕ್ಷೇಪಿಸಿ, ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಒಂದು ವಾರದಲ್ಲಿ ಮಾಹಿತಿ ಒದಗಿಸಬೇಕು. ಇಲ್ಲದಿದ್ದಲ್ಲಿ ಅವರು ದಂಡನೆಗೆ ಅರ್ಹರು. ಅದನ್ನು ಪಾಲಿಸಿ ಎಂದು ಒತ್ತಾಯಿಸಿದರು. ಸೂಕ್ತ ಕ್ರಮ ಕೈಗೊಳ್ಳಿ
ಎಂದು ಅಧ್ಯಕ್ಷರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಯೋಜನಾಧಿಕಾರಿ ಪ್ರವೀಣಪ್ರಿಯಾ ಹಾಜರಿದ್ದರು.
10ದಿನ ಕಾಲಾವಕಾಶ ಕೇಳಿದ ಸಿಇಒ ಈ ಮಧ್ಯೆ ಜಿಪಂ ಸಿಇಒ ಹೆಪ್ಸಿಬಾರಾಣಿ ಅವರು, ಪುನಃ 10 ದಿನಗಳ ಸಮಯ ಕೇಳಿದರು.
ಇದರಿಂದ ಸಿಟ್ಟಿಗೆದ್ದ ಅರವಿಂದ ಚವ್ಹಾಣ ಅವರು, ನೀವು ವಿಳಂಬ ನೀತಿ ಮುಂದುವರಿಸುತ್ತಿದ್ದೀರಿ. ಇದೇ ಸಭೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ನಾನು ಧರಣಿ ಕೈಗೊಳ್ಳುತ್ತೇನೆ ಎಂದು ವೇದಿಕೆಯ ಬಾಲ್ಕನಿ ಮುಂದಿನ ಬಾವಿಯಲ್ಲಿ ಬಂದು
ಕುಳಿತರು. ಅವರಿಗೆ ಆಡಳಿತಾರೂಢ ಬಿಜೆಪಿ ಸದಸ್ಯರು ಬೆಂಬಲಿಸಿ ಧರಣಿ ಕುಳಿತರು. ಒಂದು ಹಂತದಲ್ಲಿ ಸದಸ್ಯರೊಬ್ಬರು ಮುಖ್ಯ
ಕಾರ್ಯನಿರ್ವಾಹಕ ಅ ಧಿಕಾರಿ ವಿರುದ್ಧ ಘೋಷಣೆ ಕೂಗಿ, ನ್ಯಾಯಕ್ಕಾಗಿ ಆಗ್ರಹಿಸಿದರು. ಬಿಜೆಪಿ ಸದಸ್ಯರು ಹಾಗೂ ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಎರಡೇ ದಿನದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು
ಒತ್ತಾಯಿಸಿದರೆ, ಇನ್ನೂ ಕಾಲಾವಕಾಶ ಬೇಕು ಎಂದು ಅ ಧಿಕಾರಿ ಹೇಳಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಅಧ್ಯಕ್ಷೆ ಸುವರ್ಣಾ ಹಣಮಂತರಾವ್ ಮಲಾಜಿ, ಒಂದು ವಾರದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದರಿಂದಾಗಿ ಆಡಳಿತಾರೂಢ ಬಿಜೆಪಿ ಸದಸ್ಯರು
ತಮ್ಮ ಪ್ರತಿಭಟನೆ ಹಿಂದಕ್ಕೆ ಪಡೆದುಕೊಂಡರು.
ಶೀಘ್ರ ನರ್ಸ್, ಅಂಗನವಾಡಿ ಶಿಕ್ಷಕರ ನೇಮಕ
ಕಲಬುರಗಿ: ಜಿಲ್ಲೆಯಲ್ಲಿ ಅವಶ್ಯಕತೆ ಇರುವಷ್ಟು ಅಂಗನವಾಡಿ ಶಿಕ್ಷಕಿಯರು ಹಾಗೂ ಸ್ಪಾಫ್ ನಸ್ ìಗಳ ನೇಮಕವನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದರು. ಉಭಯ ಅಧಿಕಾರಿಗಳು, ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ ಅವರ ಪ್ರಶ್ನೆಗೆ ಉತ್ತರಿಸಿದರು.
ಗುರುವಾರ ನಡೆದ ಜಿಪಂ 7ನೇ ಸಾಮಾನ್ಯ ಸಭೆಯಲ್ಲಿ ಈ ಮಾಹಿತಿ ನೀಡಿದ ಅಧಿಕಾರಿಗಳು, ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿ ಇದೆ. ಕೆಲವು ತಾಂತ್ರಿಕ ಅಂಶಗಳ ಪರಿಗಣನೆ ನಡೆದಿದೆ. ಅದು ಮುಗಿಯುತ್ತಿದ್ದಂತೆ ಅವಶ್ಯತೆ ಇರುವ ಕಡೆಗಳಲ್ಲಿ ನಿಯೋಜನೆ ಮಾಡಲಾಗುವುದು ಎಂದರು.
ಇದಕ್ಕೂ ಮುನ್ನ ಸದಸ್ಯ ಹರ್ಷಾನಂದ ಗುತ್ತೇದಾರ, ಜಿಪಂ ಸಾಮಾನ್ಯ ಸಭೆ ಆಟಕ್ಕೆ ನಡೆದಂತೆ ನಡೆಯುತ್ತಿದೆಯೇನು? ನಾನು ಕಳೆದ ಮೂರು ಸಭೆಯಗಳಲ್ಲಿ ಆರೋಗ್ಯ ಸಹಾಯಕಿಯರು, ನರ್ಸ್ಗಳ ಕುರಿತು ಗಮನ ಸೆಳೆಯುತ್ತಲೇ ಇದ್ದೇನೆ. ಇದಕ್ಕೆ ಅಧಿಕಾರಿ ವರ್ಗದಿಂದ ಯಾವುದೇ ಸ್ಪಂದನೆಯೇ ಇಲ್ಲ ಎಂದರು.
ಆಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಮಾತನಾಡಿ, ಈಗಾಗಲೇ ಆಳಂದ, ಕಲಬುರಗಿ ನಗರ, ಕಲಬುರಗಿ ಗ್ರಾಮೀಣ ಮೂರು ಬ್ಲಾಕ್ ಹೊರತು ಪಡಿಸಿ, ಉಳಿದ ಐದು ಬ್ಲಾಕ್ಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಉಳಿದ ಮೂರು ಬ್ಲಾಕ್ಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಕರೆದು 15 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅ ಧಿಕಾರಿ ಡಾ| ಶಿವರಾಜ ಸಜ್ಜನಶೆಟ್ಟಿ ಮಾತನಾಡಿ, ಈಗಾಗಲೇ ಸ್ಟಾಫ್ ನರ್ಸ್ಗಳ ನೇಮಕಾತಿ ಪ್ರಕ್ರಿಯೆ ಪೂರ್ತಿಯಾಗುವ ಹಂತಕ್ಕೆ ಬಂದಿದೆ. ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು ತಿಳಿಸಲಾಗಿದೆ ಎಂದರು.
ತೊಗರಿ ಹಣ ಕುರಿತು: ಸದಸ್ಯ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ತೊಗರಿ ಮಾರಾಟ ಮಾಡಿದ ರೈತರಿಗೆ ಇನ್ನು ಹಣ ಬಂದಿಲ್ಲ. ಮೊದಲು ಮಾರಾಟ ಮಾಡಿದ ರೈತರಿಗೆ ಹಣ ಪಾವತಿಸುವ ಬದಲು, ಕೊನೆಯ ಹಂತದಲ್ಲಿ ಮಾರಾಟ ಮಾಡಿದವರಿಗೆ ಹಣ ಪಾವತಿಸಲಾಗಿದೆ ಎಂದು ಆರೋಪಿಸಿದರು. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೋಕಾಶಿ ಪ್ರತಿಕ್ರಿಯಿಸಿ, ತೊಗರಿ ಖರೀದಿಸಿದ ರೈತರಿಗೆ ಹಣ ಜಮಾವಣೆ ಕಾರ್ಯವು ಪ್ರಗತಿಯಲ್ಲಿದೆ. ನೆಫೆಡ್ನಿಂದ 16 ಕೋಟಿ ರೂ.ಗಳು ಬಂದಿದ್ದು, ಈಗಾಗಲೇ ಐದಾರು ಕೋಟಿ ರೂ.ಗಳನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ತೊಗರಿ ಮಂಡಳಿಯಿಂದ 15 ಕೋಟಿ ರೂ.ಗಳು, ಫೆಡರೇಷನ್ನಿಂದ 20 ಕೋಟಿ ರೂ. ಜಮಾ ಆಗಿದ್ದು, ರೈತರಿಗೆ ಪಾವತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ
Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ
Bengaluru: ಸೈಕಲ್ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಬಂಧನ
Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ