ಬೆಂಕಿ ಹಚ್ಚಿದ್ದು ಸಿದ್ದರಾಮಯ್ಯ: ಕೆ.ಎಸ್.ಈಶ್ವರಪ್ಪ
Team Udayavani, Sep 14, 2017, 7:05 AM IST
ಕಲಬುರಗಿ: “ಬಿ.ಎಸ್.ಯಡಿಯೂರಪ್ಪ ಸಿಎಂ ಆಗುವುದನ್ನು ತಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಶೈವ-ಲಿಂಗಾಯತರ ನಡುವೆ ಬೆಂಕಿ ಹಚ್ಚಿದ್ದು, ರಾಜಕೀಯ ದುರುಪಯೋಗಕ್ಕಾಗಿ ಷಡ್ಯಂತ್ರ ರೂಪಿಸಿದ್ದಾರೆ’ ಎಂದು ವಿಧಾನ
ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಾತಿ-ಜಾತಿಗಳ ನಡುವೆ ಜಗಳ ಹಚ್ಚಿ ಮತ್ತೆ ಮುಖ್ಯಮಂತ್ರಿ ಆಗುವ ಕನಸನ್ನು ಸಿದ್ದರಾಮಯ್ಯ ಕಾಣುತ್ತಿದ್ದಾರೆ. ಆದರೆ, ಅವರ ಕನಸು ಭಗ್ನವಾಗುವುದರಲ್ಲಿ ಅನುಮಾನವಿಲ್ಲ. ಯಡಿಯೂರಪ್ಪ ಸಿಎಂ ಆಗುವುದನ್ನು ತಪ್ಪಿಸಲು ಸಿದ್ದರಾಮಯ್ಯ ಷಡ್ಯಂತ್ರ ರೂಪಿಸಿದ್ದರೂ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಒಕ್ಕಲಿಗರು ಜೆಡಿಎಸ್ನ ದೇವೇಗೌಡರ ಜತೆ, ವೀರಶೈವ-ಲಿಂಗಾಯತರು ಹಾಗೂ ಬ್ರಾಹ್ಮಣರು ಬಿಜೆಪಿ ಜತೆಗಿದ್ದಾರೆ. ವೀರಶೈವ-ಲಿಂಗಾಯತರು ಪ್ರಜ್ಞಾವಂತರು. ಎಲ್ಲ ವಿಷಯದ ಕುರಿತು ಅವರಿಗೆ ತಿಳಿವಳಿಕೆ ಇದೆ.
ಹೀಗಾಗಿ, ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದರು. “ಸಚಿವ ಎಂ.ಬಿ.ಪಾಟೀಲ ಅವರು ಸಿದಟಛಿಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರನ್ನು ಸೂಕ್ಷ್ಮವಾಗಿರುವ ಧರ್ಮದ ವಿಚಾರದಲ್ಲಿ ಕರೆ ತಂದು ಏನೇನೋ ಹೇಳುತ್ತಿದ್ದಾರೆ. ಹೆಂಡತಿ ಮಕ್ಕಳಿಗಿಂತ ರಾಜಕಾರಣವೇ ಮುಖ್ಯವಾಗಿದೆ. ಹೆಂಡತಿ, ಮಕ್ಕಳ ಮೇಲೆ ಆಣೆ ಮಾಡುವ ಬದಲು ಸಿಎಂ ಸಿದ್ದರಾಮಯ್ಯ ಮೇಲೆಯೇ ಅವರು ಆಣೆ ಮಾಡಲಿ’ ಎಂದು ಸವಾಲು ಹಾಕಿದರು.