ಜನಿಸಿದ್ದು ಕ್ರೈಸ್ತನಾಗಿ; ಸೇರಿದ್ದು ಇಸ್ಲಾಂಗೆ, ಅಂತ್ಯವಿಧಿ ಹಿಂದೂ ಕ್ರಮದಂತೆ!
ಕೊಡಗಿನಲ್ಲೊಂದು ವಿಶಿಷ್ಟ ಪ್ರಕರಣ
Team Udayavani, Jul 7, 2020, 10:47 AM IST
ಸಾಂದರ್ಭಿಕ ಚಿತ್ರ
ಮಡಿಕೇರಿ: ಮೃತ ವ್ಯಕ್ತಿಗೆ ಪತ್ನಿ, ಮಕ್ಕಳು, ಸಂಬಂಧಿಕರು ಇದ್ದರೂ ಅಂತ್ಯಕ್ರಿಯೆಗೆ ಬಾರದ ಅಮಾನವೀಯ ಘಟನೆ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಗೋಪಾಲ ಪುರ ಗ್ರಾಮದಲ್ಲಿ ನಡೆದಿದೆ.
ಗೋಪಾಲಪುರ ಗ್ರಾಮದ ನಿವಾಸಿ ಯೂಸುಫ್ ಅಲಿಯಾಸ್ ವರ್ಗೀಸ್ (68) ಮೃತಪಟ್ಟವರು. ಮೂಲತಃ ಕ್ರೈಸ್ತ ಧರ್ಮದವರಾದ ವರ್ಗೀಸ್ ಕೆಲವು ವರ್ಷಗಳ ಹಿಂದೆ ಇಸ್ಲಾಂ ಧರ್ಮಕ್ಕೆ ಮತಾಂತರ ಗೊಂಡಿದ್ದು ಯೂಸುಫ್ ಎಂದು ಹೆಸರು ಬದಲಾಯಿ ಸಿಕೊಂಡಿದ್ದರು. ಅವರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಅವರೆಲ್ಲರು ಕೆಲವು ದಿನಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದು, ಗೋಪಾಲಪುರದಲ್ಲಿ ಯೂಸುಫ್ ಏಕಾಂಗಿಯಾಗಿದ್ದರು.
ವಯೋ ಸಹಜ ಆನಾರೋಗ್ಯ ಸಮಸ್ಯೆಯಿಂದ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಯೂಸುಫ್ ಜು. 4ರಂದು ಮೃತಪಟ್ಟರು. ಸಂಬಂಧಿಕರು ಯಾರೂ ಬಾರದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬಂದಿ ಅನಾಥ ಶವ ಎಂದು ಪರಿಗಣಿಸಿ ಮೃತದೇಹವನ್ನು ಶವಾಗಾರದಲ್ಲಿ ಇಟ್ಟಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಲಾಗಿತ್ತು. ಮಾಹಿತಿ ತಿಳಿದ ಗೋಪಾಲಪುರದ ಸ್ಥಳೀಯರು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮೃತನ ಪತ್ನಿ, ಮಕ್ಕಳಿಗೆ ಮಾಹಿತಿ ನೀಡಿದರೂ ಯಾರೂ ಬಾರದ ಹಿನ್ನೆಲೆಯಲ್ಲಿ ಅವರು ಮೃತದೇಹವನ್ನು ಗೋಪಾಲಪುರ ಗ್ರಾಮಕ್ಕೆ ತಂದು ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಮಾನವೀಯತೆ ಮೆರೆದರು.
ಕ್ರೈಸ್ತ ಧರ್ಮದಲ್ಲಿ ಜನಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿ ಸತ್ತಾಗ ಸಂಬಂಧಿಕರು ಬಾರದಿದ್ದಾಗ ಹಿಂದೂ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ಮಾಡಿರುವ ಅಪರೂಪದ ಪ್ರಕರಣವಿದು.