5.75 ಕೋಟಿ ವೆಚ್ಚದಲ್ಲಿ ಕಿರು ತಾರಾಲಯ
Team Udayavani, Aug 17, 2017, 7:15 AM IST
ಮಡಿಕೇರಿ: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ 5.75 ಕೋಟಿ ರೂ. ವೆಚ್ಚದಲ್ಲಿ ಕಿರು ತಾರಾಲಯ ನಿರ್ಮಿಸಲು ಅನುಮೋದನೆ ದೊರಕಿದೆ. ವಿಜ್ಞಾನ ಮತ್ತು ತಂತ್ರಜ್ಞಾನಾ ಇಲಾಖೆ ವತಿಯಿಂದ 4 ಕೋ. ರೂ. ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಗೆ ಮುಂದಾ ಗಿರುವುದಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎಂ.ಆರ್. ಸೀತಾರಾಂ ತಿಳಿಸಿದ್ದಾರೆ.
ನಗರದ ಕೋಟೆ ಆವರಣದಲ್ಲಿ ನಡೆದ ಸ್ವಾತಂತ್ರೊÂàತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ಮಡಿಕೇರಿಯಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ 1.70 ಕೊಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.
ಪ್ಯಾಕೇಜ್ನಲ್ಲಿ 122 ಕಾಮಗಾರಿ
ಕೊಡಗು ಜಿಲ್ಲೆಯ ಗ್ರಾಮೀಣ ರಸ್ತೆಗಳ ದುರಸ್ತಿ ಕಾಮಗಾರಿಗಾಗಿ 2016-17ನೇ ಸಾಲಿನಲ್ಲಿ 50 ಕೋಟಿ ರೂ. ಅನುದಾನ ಲೋಕೋಪಯೋಗಿ ಇಲಾಖೆಗೆ ಬಿಡುಗಡೆಯಾಗಿದ್ದು, ಕೊಡಗು ಪ್ಯಾಕೇಜ್ನಡಿ ಒಟ್ಟು 122 ಕಾಮಗಾರಿಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಜಿಲ್ಲೆಯ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ ರೂ. 38 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ರಾಜ್ಯ ಹೆದ್ದಾರಿ ಹಾಗೂ ಮುಖ್ಯರಸ್ತೆಗಳ ಒಟ್ಟು 19 ಕಾಮಗಾರಿಗಳು ಹಾಗೂ 3 ಸೇತುವೆಗಳ ಅಭಿವೃದ್ಧಿ ಕಾಮಗಾರಿ ನಿರ್ವಹಿಸಲು ಉದ್ದೇಶಿಸಿರುವುದಾಗಿ ತಿಳಿಸಿದರು.
ಸಾವಯವ ಭಾಗ್ಯ ಯೋಜನೆ
ಸಾವಯವ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಜಿಲ್ಲೆಯ 13 ಹೋಬಳಿಗಳಲ್ಲಿ ಸಾವ ಯವ ಭಾಗ್ಯ ಯೋಜನೆಯನ್ನು ಅನುಷ್ಠಾನ
ಗೊಳಿಸಲಾಗಿದೆಯೆಂದು ಸಚಿವರು ಮಾಹಿತಿ ನೀಡಿ, ಜಿಲ್ಲೆ ಜೇನು ಕೃಷಿಗೆ ಪ್ರಸಿದ್ಧಿಯನ್ನು ಪಡೆದಿರುವ ಹಿನ್ನೆಲೆಯಲ್ಲಿ ಜೇನು ಮ್ಯೂಸಿಯಂ ಸ್ಥಾಪನೆಯ ಜೊತೆಗೆ ಜೇನು ಕೃಷಿ ತರಬೇತಿ ಹಾಗೂ ಪೆಟ್ಟಿಗೆಗಳಿಗೆ ಸಹಾಯಧನ ನೀಡಲಾಗುವುದೆಂದರು.
ವಸತಿ ಶಾಲಾ ನಿರ್ಮಾಣ ಪೂರ್ಣ
ಸೋಮವಾರಪೇಟೆ ತಾಲೂಕು ಕೂಡಿಗೆ ಯಲ್ಲಿ 9.54 ಕೋಟಿ ರೂ. ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಭಾಗಮಂಡಲದ ಕೋರಂಗಾಲದಲ್ಲಿ 15 ಕೊಟಿ ರೂ. ವೆಚ್ಚದಲ್ಲಿ ವಾಜಪೇಯಿ ವಸತಿ ಶಾಲೆಯ ಕಟ್ಟಡ ಕಾಮಗಾರಿ ಶೀಘ್ರವೇ ಪ್ರಾರಂಭಗೊಳ್ಳಲಿದೆ ಎಂದು ಹೇಳಿದರು. ಮಡಿಕೇರಿ ನಗರದ ಅಂಚಿನಲ್ಲಿ ಜಿಲ್ಲಾ ಪಂಚಾಯತ್ ಆಡಳಿತ ಭವನ ಕಚೇರಿ ಕಟ್ಟಡ 18.25 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, 2018ರ ಜೂನ್ ಅಂತ್ಯದೊಳಗೆ ಉದ್ದೇಶಿತ ಕಾಮಗಾರಿ ಪೂರ್ಣಗೊಳ್ಳಲಿದೆಯೆಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
151 ಕೊಟಿ ರೂ. ಸಾಲ ಮನ್ನಾ: ಬರದ ಛಾಯೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ 34 ಸಾವಿರ ರೈತರಿಗೆ 151 ಕೋಟಿ ರೂ.ಗಳಷ್ಟು ಸಾಲ ಮನ್ನಾ ಸೌಲಭ್ಯವನ್ನು ನೀಡಲಾಗಿದೆಯೆಂದು ತಿಳಿಸಿದ ಸಚಿವರು, 2016-17ನೇ ಸಾಲಿನ ಬರದ ಹಿನ್ನೆಲೆಯಲ್ಲಿ ಉಂಟಾದ ಕೃಷಿ ಹಾನಿಗೆ ಸಂಬಂಧಿ ಸಿದಂತೆ 6,200 ರೈತರಿಗೆ 2.30 ಕೋ.ರೂ. ಪರಿಹಾರವನ್ನು ನೇರವಾಗಿ ರೈತರ ಖಾತೆ ಗಳಿಗೆ ವರ್ಗಾಯಿಸಿರುವುದಾಗಿ ಅವರು ಹೇಳಿದರು.