Ponnampet; ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರು ಪಾಲು
Team Udayavani, Dec 30, 2023, 6:27 PM IST
ಮಡಿಕೇರಿ: ಮೂವರು ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಬರಪೊಳೆ(ಕೊಂಕಣ ಹೊಳೆ) ನದಿಯಲ್ಲಿ ನಡೆದಿದೆ.
ಪೊನ್ನಂಪೇಟೆಯ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದ ಶ್ರೀಮಂಗಲ ನೆಮ್ಮಲೆ ಗ್ರಾಮದ ನಿವಾಸಿ ಕುಂಞಗಡ ರಶಿಕ್ ಕುಶಾಲಪ್ಪ(20), ಜೋಡುಬೀಟಿ ಗ್ರಾಮದ ಮಂಗೇಟಿರ ಪಿ.ಆಕಾಶ್ ಬಿದ್ದಪ್ಪ(20) ಹಾಗೂ ಶ್ರೀಮಂಗಲ ಗ್ರಾಮದ ಉಳುವಂಗಡ ಸುದೇಶ್ ಅಯ್ಯಪ್ಪ(20) ಎಂಬುವವರು ಮೃತ ದುರ್ದೈವಿಗಳು.
ನಾಲ್ವರು ವಿದ್ಯಾರ್ಥಿಗಳು ಕಾಲೇಜ್ ನಿಂದ 5 ಕಿ.ಮೀ ದೂರದಲ್ಲಿರುವ ಬರಪೊಳೆಗೆ ತೆರಳಿದ್ದು, ಈ ಪೈಕಿ ಮೂವರು ನೀರಿಗೆ ಇಳಿದಿದ್ದರು ಎಂದು ಹೇಳಲಾಗಿದೆ. ಈ ವೇಳೆ ನೀರಿನ ಆಳಕ್ಕೆ ಸಿಲುಕಿ ಮೂವರು ಕೂಡ ಮೃತಪಟ್ಟಿದ್ದಾರೆ.ಓರ್ವ ವಿದ್ಯಾರ್ಥಿ ಕಾಲು ನೋವಿನ ಕಾರಣದಿಂದ ನೀರಿಗೆ ಇಳಿಯದೆ ದಡದಲ್ಲಿ ಉಳಿದಿದ್ದ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತೀತಿಮಾಡ ಪವಿ, ಕಡೇಮಾಡ ಅನಿಲ್ ಕಾಳಪ್ಪ, ತೀತಿಮಾಡ ಸದನ್ ಹಾಗೂ ತೀತಿಮಾಡ ಸುಗುಣ ಅವರುಗಳ ಸಹಕಾರದಿಂದ ಮೃತದೇಹಗಳನ್ನು ಮೇಲಕ್ಕೆತ್ತಿದರು. ಗೋಣಿಕೊಪ್ಪ ಠಾಣಾಧಿಕಾರಿ ಬಿ.ಎಸ್.ರೂಪಾದೇವಿ, ಪೊನ್ನಂಪೇಟೆ ಠಾಣಾಧಿಕಾರಿ ನವೀನ್, ಶ್ರೀಮಂಗಲ ಠಾಣಾಧಿಕಾರಿ ಶಿವಾನಂದ್ ಹಾಗೂ ಸಿಬಂದಿಗಳು ಪರಿಶೀಲನೆ ನಡೆಸಿದರು. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.