ಅಧಿಕಾರಿಗಳ ವಿರುದ್ಧ ರಮೇಶ್ಕುಮಾರ್ ಕಿಡಿ
Team Udayavani, Dec 7, 2017, 7:55 AM IST
ಕೋಲಾರ: ರಸ್ತೆ ಕಾಮಗಾರಿ ಸಂಬಂಧ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ನಾಗರೀಕರು ದೂರಿದ ಹಿನ್ನೆಲೆ ಕುಪಿತರಾದ ಸಚಿವ ಕೆ.ಆರ್.ರಮೇಶ್ ಕುಮಾರ್ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ನೀರಿನ ಬಾಟಲ್ ಎಸೆಯಲು ಮುಂದಾದ ಘಟನೆ ನಡೆಯಿತು.
ಬುಧವಾರ ತಾಲೂಕಿನ ಸುಗಟೂರು ಗ್ರಾಮದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಿದ ಸಚಿವರು, ಬಳಿಕ ಗ್ರಾಮಸ್ಥರಿಂದ ಕುಂದುಕೊರತೆ ಆಲಿಸಿದರು. ಈ ವೇಳೆ ಬೆಂಬಲಿಗರು, ರಸ್ತೆ ಅಗಲೀಕರಣದಲ್ಲಿ ಅಧಿಕಾರಿಗಳು ತಾರತಮ್ಯವೆಸಗಿ, ಕ್ರಿಯಾ ಯೋಜನೆಯನ್ನು ಅನುಸರಿಸದೆ, ಅವರಿಗೆ ಇಷ್ಟ ಬಂದ ಕಡೆ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ದೂರಿದರು. ಇದರಿಂದಾಗಿ ತೀವ್ರ ಆಕ್ರೋಶಗೊಂಡ ಸಚಿವರು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಲ್ಲ, ಅಭಿವೃದ್ಧಿ ಕುಂಠಿತವಾದರೆ ನಾನು ಸಹಿಸಲ್ಲ ಎಂದು ಸಿಡಿಮಿಡಿಗೊಂಡರು. ಅಲ್ಲದೆ ಮುಂಭಾಗದ ಟೇಬಲ್ ಮೇಲೆ ಇಟ್ಟಿದ್ದ ನೀರಿನ ಬಾಟಲ್ ಹಿಡಿದು, ಎಸೆಯಲು ಮುಂದಾದರು. ಮುಖಂಡರು ಸಮಾಧಾನಪಡಿಸಿದರು.