Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Team Udayavani, Mar 19, 2024, 3:10 PM IST
ಕುಷ್ಟಗಿ: ತಾಲೂಕಿನ ನಿಡಶೇಸಿ ಮೊರಾರ್ಜಿ ವಸತಿ ಶಾಲೆಯ ಅವ್ಯವಸ್ಥೆಗೆ ಕಾರಣರಾದ ಪ್ರಾಂಶುಪಾಲೆಯ ವಿರುದ್ದ ವಿಧ್ಯಾರ್ಥಿಗಳು ಡಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿ, ಪ್ರಾಂಶುಪಾಲೆ ಸೌಭಾಗ್ಯ ಹಾಗೂ ಸಮಾಜ ವಿಜ್ಞಾನ ಹಾಗೂ ವಿಜ್ಞಾನ ಶಿಕ್ಷಕರ ವಿರುದ್ದ ಆಕ್ರೋಶ ಹೊರ ಹಾಕಿದರು.
ತರಗತಿ ಹಾಗೂ ವಸತಿ ನಿಲಯದ ಮೂಲ ಸೌಕರ್ಯಗಳ ಅವ್ಯವಸ್ಥೆಯ ಬಗ್ಗೆ ವಿಧ್ಯಾರ್ಥಿಗಳು ಪ್ರಶ್ನಿಸಿದರೆ ಪ್ರಶ್ನಿಸಿದ ವಿಧ್ಯಾರ್ಥಿಯನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಜಾತೀಯವಾಗಿ ಹಾಗೂ ಅಶ್ಲೀಲವಾಗಿ ನಿಂದಿಸುತ್ತಿದ್ದಾರೆ. ಸಮಾಜ ವಿಜ್ಞಾನ ಹಾಗೂ ವಿಜ್ಞಾನ ಸರಿಯಾಗಿ ಪಾಠ ಮಾಡುವುದಿಲ್ಲ. ವಿಜ್ಞಾನ ಪ್ರಯೋಗಾಲಯ ಸರಿಯಾಗಿಲ್ಲ. ಸಮಾಜ ವಿಜ್ಞಾನ ಶಿಕ್ಷಕನಿಗೆ ಪಾಠ ಮಾಡಲು ಬರುವುದಿಲ್ಲ. ಸುಮ್ಮನೇ ಓದಿ ಹೋಗ್ತಾರೆ. ಕನ್ನಡ ಶಿಕ್ಷಕರೊಬ್ಬರು ತರಗತಿ ಕೊಠಡಿಯಲ್ಲಿ ವಿಮಲ್ ಗುಟ್ಕಾ ಹಾಕುತ್ತಾರೆಂದು ವಿಧ್ಯಾರ್ಥಿಗಳು ಗಂಭೀರವಾಗಿ ಆಕ್ಷೇಪಿಸಿದರು.
ಖರ್ಚು ಉಳಿಸಲು ಕಡಿಮೆ ಗುಣಮಟ್ಟದ ಪಾಮ್ ಎಣ್ಣೆಯನ್ನು ಅಡುಗೆಗೆ ಬಳಸುತ್ತಿದ್ದು, ಅಡುಗೆ ರುಚಿಸುವುದಿಲ್ಲ. ಅಡುಗೆ ರುಚಿ ಇಲ್ಲ ಎಂದು ಹೇಳುವುದು ತಪ್ಪಾಗಿದೆ. ಈ ಅವ್ಯವಸ್ಥೆಗಳೇನೆ ಇದ್ದರೂ, ಪ್ರಾಂಶುಪಾಲೆಯ ಪತಿ ಸರ್ಕಾರಿ ನೌಕರನಾಗಿದ್ದರೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಪ್ರಾಂಶುಪಾಲೆಯ ಗಂಡ ವಸತಿ ಶಾಲೆಗೆ ಸಂಬಂಧಿಸಿಲ್ಲ. ಆದರೂ ಪ್ರಶ್ನಿಸಿದ ವಿದ್ಯಾರ್ಥಿಗೆ ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಸಿದ್ದಾನೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿಧ್ಯಾರ್ಥಿಗಳಿಗೆ ತರಗತಿಯಲ್ಲಿ ತಿಳಿಯದ ಗೊಂದಲಗಳಿಗೆ ವಿಷಯಗಳ ಪರಿಹಾರಕ್ಕಾಗಿ ವಿಷಯ ಶಿಕ್ಷಕರ ಭೇಟಿಗೆ ಅವಕಾಶ ನೀಡದೆ ನಿರ್ಬಂಧಿಸಿದ್ದಾರೆಂದು ಆರೋಪಿಸಿದ್ದರು.
ಈ ಪ್ರಾಂಶುಪಾಲೆ ಅಧಿಕಾರ ವಹಿಸಿಕೊಂಡಾಗಿನಿಂದ ಸಮಸ್ಯೆ ಉಲ್ಬಣಿಸಿದ್ದು ಯಾರಾದ್ರೂ ಮೇಲಾಧಿಕಾರಿಗಳು ಭೇಟಿ ನೀಡಿದರೆ ಶಾಲೆಯಲ್ಲಿ ಏನು ಕೊರತೆ ಇಲ್ಲ. ಎಲ್ಲವೂ ಸರಿಯಾಗಿ ಇದೆ ಎಂದು ಹೇಳಿಸುತ್ತಿದ್ದಾರೆ.
ಮೊರಾರ್ಜಿ ವಸತಿ ನಿಲಯ ಅವ್ಯವಸ್ಥೆಗೆ ವಿಧ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದ್ದು, ಪಾಲಕರು ಸಹ ಸಾಥ್ ನೀಡಿದ್ದರಿಂದ ಪ್ರತಿಭಟನೆ ತೀವ್ರವಾಗಿದೆ. ಸಂಬಂಧಿಸಿದ ಅಧಿಕಾರಿ, ಜಿಲ್ಲಾಧಿಕಾರಿ ಬರುವವರೆಗೂ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪ್ರಾಂಶುಪಾಲೆ ಸೌಭಾಗ್ಯ ಪ್ರತಿಕ್ರಿಯಿಸಿ, 30 ವರ್ಷಗಳ ಹಳೆಯ ಶಾಲೆ ಇದು, ಹಾಗಾಗಿ ಸಮಸ್ಯೆಗಳಿವೆ. ಕಳೆದ 8 ತಿಂಗಳಿನಿಂದ ಕರೆಂಟ್ ಬಿಲ್ ಬಿಡುಗಡೆಯಾಗಿಲ್ಲ. ದುರಸ್ಥಿಗೆಗೆ ಅನುದಾನ ಅವಶ್ಯತಕೆ ಇದೆ. ದುರಸ್ಥಿ ವಿಳಂಬವಾಗಿರುವುದಕ್ಕೆ ವಿದ್ಯಾರ್ಥಿಗಳು ನನ್ನ ಮೇಲೆ ಕಳ್ಳನ ಆರೋಪ ಹೊರೆಸಿದ್ದಾರೆ. ಕಳೆದ ಫೆ.24 ರಂದು ನಡೆದ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನದ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ನಮ್ಮ ವಿರುದ್ದ ತಿರುಗಿ ಬೀಳುವಂತೆ ಮಾಡಿದ್ದಾರೆಂದು ಆರೋಪಿಸಿದರು.
ಈ ವಸತಿ ಶಾಲೆಯಲ್ಲಿ 246 ವಿದ್ಯಾರ್ಥಿಗಳಿದ್ದು, ವಾರ್ಡನ್ ಸೇವೆ ಇಲ್ಲ. ಶಿಕ್ಷಕರಿಗೆ ಪ್ರತಿಯೊಬ್ಬರಿಗೆ ಒಂದೊಂದು ದಿನ ಜವಾಬ್ದಾರಿವಹಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದರು.