ಲೋಕಪಾಲ್ ಬಿಲ್ ಜಾರಿಗೆ ಪ್ರಾಣತ್ಯಾಗಕ್ಕೂ ಸಿದ್ಧ: ಅಣ್ಣಾ
Team Udayavani, Jan 5, 2018, 6:15 AM IST
ಕೊಪ್ಪಳ: “ಜನತಂತ್ರ ವ್ಯವಸ್ಥೆಯಡಿ ಬಲಿಷ್ಠ ಲೋಕಪಾಲ್ ಬಿಲ್ ಜಾರಿಗೆ ಒತ್ತಾಯಿಸಿ ಮಾ.23ರಿಂದ ದೆಹಲಿಯ ರಾಮಲೀಲಾ ಮೈದಾನದಲ್ಲಿ ಹೋರಾಟ ಆರಂಭಿಸಲಿದ್ದೇನೆ. ಸಶಕ್ತ ಲೋಕಪಾಲ್ ಬಿಲ್ ಜಾರಿಗಾಗಿ ಮಾಡುವ ಹೋರಾಟದಲ್ಲಿ ನಾನು ನನ್ನ ಪ್ರಾಣ ತ್ಯಾಗಕ್ಕೂ ಸಿದ್ಧನಿದ್ದೇನೆ’ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದರು.
ನಗರದಲ್ಲಿ ಗುರುವಾರ ಮಾತನಾಡಿ, ಜನಲೋಕಪಾಲ್ ಬಿಲ್ 1968ರಲ್ಲಿಯೇ ಲೋಕಸಭೆ ಮುಂದೆ ಬಂದಿತ್ತು. ಆದರೆ 8 ಬಾರಿ ಲೋಕಪಾಲ್ ಬಿಲ್ನ್ನು ಲೋಕಸಭೆಯಲ್ಲಿ ಪಾಸ್ ಮಾಡಲೇ ಇಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 2011ರಲ್ಲಿ ಮೊದಲ ಬಾರಿಗೆ ಬಿಲ್ ಕುರಿತು ಲೋಕಸಭೆಯಲ್ಲಿ ಚರ್ಚೆ ಮಾಡಲಾಯಿತು. ಆಗ ಬಿಲ್ನಲ್ಲಿನ ಅಂಶಗಳನ್ನೆಲ್ಲ ತೆಗೆದು ಬಲಹೀನ ಮಾಡಿದರು. ನಂತರ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಮೇಲಂತೂ ಬಿಲ್ನ್ನು ಮತ್ತಷ್ಟು ದುರ್ಬಲಗೊಳಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ಏಷ್ಯಾ ಖಂಡದಲ್ಲಿಯೇ ಭಾರತ ನಂ.1 ಭ್ರಷ್ಟ ರಾಷ್ಟ್ರವಾಗಿದೆ ಎಂದು ಸಮೀûಾ ವರದಿಯೊಂದು ಹೇಳಿದೆ. ದೇಶದಲ್ಲಿ 20 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೋದಿ ಸರ್ಕಾರ ಆಡಳಿತಕ್ಕೆ ಬಂದು ಮೂರು ವರ್ಷ ಕಳೆದರೂ ಭ್ರಷ್ಟಾಚಾರ ತಡೆಯಲಾಗಿಲ್ಲ. ಕರ್ನಾಟಕದಲ್ಲಿ ಮಹದಾಯಿ ವಿವಾದ ಗಡಿ ಸಮಸ್ಯೆಯಿಂದ ತೊಂದರೆಯಾಗಿದೆ.
ಸಮಸ್ಯೆಯನ್ನು ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಬೇಕು. ಈ ವಿಷಯದಲ್ಲಿ ಎಲ್ಲ ಪಕ್ಷಗಳು ರಾಜಕಾರಣ ಮಾಡುತ್ತಿವೆ. ಹೀಗೆ ಪ್ರಮುಖ ನಾಲ್ಕು ಅಂಶಗಳನ್ನು ಮುಂದಿಟ್ಟುಕೊಂಡು ಮಾ.23ರಂದು ಮತ್ತೆ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ಆರಂಭಿಸಲಿದ್ದೇನೆ. ಬಲಿಷ್ಠ ಬಿಲ್ ಜಾರಿಗೆ ನನ್ನ ಪ್ರಾಣ ತ್ಯಾಗಕ್ಕೂ ಸಿದ್ಧನಿದ್ದೇನೆ. ಜನತಂತ್ರ ವ್ಯವಸ್ಥೆಗೆ ದೇಶದ ಜನತೆ 08879069688 ಈ ನಂಬರ್ಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಬೆಂಬಲಿಸಬಹುದು. ಇಲ್ಲಿನ ಜನತೆ ದೆಹಲಿಗೆ ಬರದಿದ್ದರೂ ಚಿಂತೆಯಿಲ್ಲ. ಸ್ಥಳೀಯವಾಗಿ ಹೋರಾಟ ಆರಂಭಿಸಿ ಎಂದರು.