ಸುಡಾನ್ನಲ್ಲಿ ಗುಂಡಿನ ದಾಳಿ: ಗಂಗಾವತಿ ಯುವಕ ಸಾವು
Team Udayavani, Feb 19, 2017, 3:45 AM IST
ಗಂಗಾವತಿ: ಉತ್ತರ ಆಫ್ರಿಕಾದ ಸುಡಾನ್ನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಗಂಗಾವತಿ ಮೂಲದ ಸೈಯ್ಯದ್ ಫಾರೂಕ್ ಖಾದ್ರಿ (25) ಶನಿವಾರ ಬೆಳಗಿನ ಜಾವ ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರ ಆಪ್ತ ಸಹಾಯಕ ಸೈಯ್ಯದ್ ಬದರುದ್ದೀನ್ ಖಾದ್ರಿ (ಎಸ್.ಬಿ. ಖಾದ್ರಿ) ಅವರ ಪುತ್ರ ಫಾರೂಕ್ ಎರಡು ವರ್ಷಗಳಿಂದ ಸುಡಾನ್ನ ಕಂಪ್ಯೂಟರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಕಂಪನಿಯ ವಾಹನದಲ್ಲಿ ಕಚೇರಿ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದ್ದರಿಂದ ಚಾಲಕ ಹಾಗೂ ಫಾರೂಖ್ ಖಾದ್ರಿ ಮೃತಪಟ್ಟಿದ್ದಾರೆ. ಮೃತದೇಹವನ್ನು ಭಾರತಕ್ಕೆ ತರಲು ನೆರವಾಗುವಂತೆ ಕುಟುಂಬ ವರ್ಗದವರು ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.