ಮಳೆಗೆ ಮತ್ತೆ ಒಡೆದ ವಿಜಯನಗರ ಕಾಲುವೆ: ಅತಂತ್ರದಲ್ಲಿ ಭತ್ತದ ನಾಟಿ ಕಾರ್ಯ
Team Udayavani, Aug 10, 2020, 10:01 AM IST
ಗಂಗಾವತಿ: ಕಳೆದ ಮೂರು ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದ ಗುಡ್ಡದ ನೀರು ನುಗ್ಗಿ ಇತ್ತೀಚೆಗೆ ನಿರ್ಮಿಸಿದ್ದ ವಿಜಯನಗರ ಕಾಲುವೆ ಕೋರಮ್ಮನ ಕ್ಯಾಂಪ್ ಮತ್ತು ಕಡೆಬಾಗಿಲು ಗ್ರಾಮದ ಮಧ್ಯೆ ಕಾಲುವೆ ಒಡೆದು ನಾಟಿ ಮಾಡಿದ ಭತ್ತ ಗದ್ದೆಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿದೆ.
ಇನ್ನೂ ಶೇ.80ರಷ್ಟು ಭತ್ತದ ನಾಟಿ ಮಾಡುವ ಕಾರ್ಯ ಬಾಕಿ ಇದ್ದು ರೈತರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. ಪುರಾತನ ವಿಜಯನಗರ ಕಾಲುವೆಗಳನ್ನು ಶಾಶ್ವತ ದುರಸ್ತಿ ಮಾಡುವ ನೆಪದಲ್ಲಿ ಇಡೀ ಕಾಲುವೆಯನ್ನು ಅಗೆದು ಕೆಡಿಸಲಾಗಿದ್ದು ರೈತರ ಒತ್ತಾಯದ ಮೇರೆಗೆ ಅರ್ಧಂಬರ್ಧ ಕಾಮಗಾರಿ ಮಾಡಿ ಉಳಿದ ಕಾಮಗಾರಿಯನ್ನು ಬೇಸಿಗೆಯಲ್ಲಿ ಮಾಡಲು ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ನಿರ್ಧರಿಸಿದೆ.
ಪುರಾತನ ಕಾಲುವೆಗಳನ್ನು ಮಳೆಗಾಲದಲ್ಲಿ ಗುಡ್ಡದ ನೀರು ಬಂದರೂ ಒಡೆಯದಂತೆ ತಾಂತ್ರಿಕತೆ ಬಳಸಿ ನಿರ್ಮಿಸಲಾಗಿತ್ತು. ಅದರಂತೆ ಶಾಶ್ವತ ದುರಸ್ತಿ ಸಂದರ್ಭದಲ್ಲಿ ವಿಜಯನಗರ ಕಾಲುವೆಗಳನ್ನು ಹಳೆಯ ಡಿಸೈನಿನಂತೆ ನಿರ್ಮಿಸುವಂತೆ ಆನೆಗೊಂದಿ ಭಾಗದ ರೈತರು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ನಿರ್ಲಕ್ಷ್ಯ ಮಾಡಿದ್ದರಿಂದ ಈಗ ಮಳೆಯ ನೀರಿಗೆ ಪದೇಪದೇ ಕಾಲುವೆ ಒಡೆಯುವಂತಾಗಿದೆ.
ಇದನ್ನೂ ಓದಿ: ನೆಮ್ಮಾರ್ ಬಳಿ ಕುಸಿದ ರಸ್ತೆ: ಶೃಂಗೇರಿ ಕಾರ್ಕಳ ರಸ್ತೆ ತಾತ್ಕಾಲಿಕ ಬಂದ್
ವ್ಯಾಪಕ ಭ್ರಷ್ಟಾಚಾರ: ವಿಜಯನಗರ ಕಾಲುವೆ ಶಾಶ್ವತ ದುರಸ್ತಿ ನೆಪದಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದ್ದು ಹೊಸ ಡಿಸೈನ್ ಮತ್ತು ಕಳಪೆ ಕಾಮಗಾರಿಯಿಂದ ಕಾಲುವೆ ಒಡೆಯುತ್ತಿದೆ. ಸಾಣಾಪೂರದಿಂದ ಸಂಗಾಪೂರದವರೆಗೆ ವಿಜಯನಗರ ಕಾಲುವೆ ಗುಡ್ಡಪ್ರದೇಶದಲ್ಲಿ ಹರಿಯುವುದರಿಂದ ಮಳೆಗಾಲದಲ್ಲಿ ಗುಡ್ಡದ ನೀರು ಕಾಲುವೆ ಸೇರ್ಪಡೆಯಾಗಿ ಕಾಲುವೆ ಒಡೆಯುತ್ತಿದೆ. ಮಳೆ ಸಂದರ್ಭದಲ್ಲಿ ಹೆಚ್ಚುವರಿ ನೀರು ಹೋಗಲು ಎಕ್ಸೆಪ್ ಗಳನ್ನು ನಿರ್ಮಿಸುವಂತೆ ಕಾಂಗ್ರೆಸ್ ಮುಖಂಡರಾದ ಡಾ.ಅಮರೇಶ ಬಂಡಿ ಹಾಗೂ ಕೆ.ವಿ.ಬಾಬು ಒತ್ತಾಯಿಸಿದ್ದಾರೆ