ರಾಹುಲ್ ಜೀನ್ನಲ್ಲೇ ದೋಷ: ಸಿ.ಟಿ.ರವಿ
Team Udayavani, Sep 10, 2017, 8:00 AM IST
ಮಂಡ್ಯ: ಗೌರಿ ಲಂಕೇಶ್ ಹತ್ಯೆ ಹಿಂದೆ ಆರ್ಎಸ್ಎಸ್ ಕೈವಾಡವಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಲು ಅವರ ಜೀನ್ನಲ್ಲಿರುವ ದೋಷ ಕಾರಣವಿರಬಹುದು ಎಂದು ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ಅವರ ಮುತ್ತಾತ ಕೂಡ ಮಹಾತ್ಮಗಾಂಧಿ ಹತ್ಯೆ ವೇಳೆ ಆರ್ಎಸ್ಎಸ್ ಕೈವಾಡ ಎಂದು ಆರೋಪಿಸಿ ಆರ್ಎಸ್ಎಸ್ನ ಸರ್ ಸಂಚಾಲಕ ಗುರೂಜಿ ಅವರನ್ನು ಬಂಧಿಸಿದ್ದರು. ಆರ್ಎಸ್ಎಸ್ ಸಂಘಟನೆಯ ಮೇಲೆ ನಿಷೇಧ ಹೇರಿದ್ದರು.
ನಂತರ ಅವರೇ ನೇಮಕ ಮಾಡಿದ ಮೂರು ಆಯೋಗಗಳು ಗಾಂಧಿ ಹತ್ಯೆ ಹಿಂದೆ ಆರ್ಎಸ್ಎಸ್ ಕೈವಾಡವಿಲ್ಲ ಎಂಬ ವರದಿಯನ್ನು ಕೊಟ್ಟವು.ನಂತರ ಗುರೂಜಿ ಅವರನ್ನು ಬಿಡುಗಡೆಗೊಳಿಸಿ ಆರ್ಎಸ್ಎಸ್ ಮೇಲಿನ ನಿಷೇಧ ವಾಪಸ್ ಪಡೆದರು. ನ್ಯಾಯಾಲಯವೂ ಕೂಡ ಆರ್ಎಸ್ಎಸ್ಗೂ ಗಾಂಧಿ ಹತ್ಯೆಗೂ ಸಂಬಂಧವಿಲ್ಲ ಎಂದಿತು. ಹೀಗಾಗಿ, ಮುತ್ತಾತನಂತೆ ಸುಳ್ಳು ಹೇಳುವ, ಆರ್ಎಸ್ಎಸ್ ವಿರುದ್ಧ ದ್ವೇಷ ಸಾಧಿಸುವ, ಪೂರ್ವಾಗ್ರಹ ಪೀಡಿತ ಆರೋಪ ಮಾಡುವ ಮನೋಭಾವ ಆನುವಂಶೀಯವಾಗಿ ರಾಹುಲ್ಗಾಂಧಿಗೆ ಬೆಳೆದು ಬಂದಿರಬಹುದು ಎಂದು ಟೀಕಿಸಿದರು.