ಗ್ರಾಮಾಭಿವೃದ್ಧಿ ವೇಗ ಹೆಚ್ಚಿಸಿ: ಶಾಸಕ ತಮ್ಮಣ್ಣ
Team Udayavani, May 29, 2020, 5:11 AM IST
ಮದ್ದೂರು: ಪ್ರತಿ ಗ್ರಾಮಕ್ಕೂ ನಕ್ಷೆ ತಯಾರಿಸಿ ಅವಶ್ಯಕತೆಯುಳ್ಳ ಕಾಮಗಾರಿ ಪೂರ್ಣಗೊಳಿಸಿ ಪಿಡಿಒಗಳ ಸಭೆಯಲ್ಲಿ ಮಾತನಾಡಿಸುವ ಮೂಲಕ ಗ್ರಾಮಾಭಿವೃದ್ಧಿಗೆ ವೇಗ ಕಲ್ಪಿಸುವಂತೆ ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು. ಪಟ್ಟಣದ ತಾಪಂ ಕಚೇರಿಯಲ್ಲಿ ನಡೆದ ಪಿಡಿಒಗಳ ಸಭೆಯಲ್ಲಿ ಮಾತನಾಡಿದರು.
ಕೇಂದ್ರ, ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಅಂತರ್ಜಲ ವೃದ್ಧಿಗೆ ಸಹ ಕಾರಿಯಾಗುವ ಚೆಕ್ಡ್ಯಾಂ, ಜಮೀನಿನಲ್ಲಿ ನೀರು ನಿಲ್ಲಲು ಕಟ್ಟೆಗಳನ್ನು ನಿರ್ಮಿಸುವ ಮೂಲಕ ನೀರಿನ ಸಮಸ್ಯೆಯನ್ನು ನೀಗಿಸಬೇಕೆಂದು ಹೇಳಿದರು.ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ ಡಾಂಬರೀಕರಣ, ವಿದ್ಯುತ್ ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು.
ಕೆಲ ಪಿಡಿಒಗಳು ಅವೈಜ್ಞಾನಿಕ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದು, ಇದರಿಂದಾಗಿ ಅಭಿ ವೃದ್ಧಿ ಕಾಮಗಾರಿಗಳು ಕುಂಠಿತಗೊಳ್ಳಲು ಕಾರಣ ವಾಗಿದೆ. ತಾಲೂಕಿನ ಆತಗೂರು, ತಿಪ್ಪೂರು, ತೊರೆ ಶೆಟ್ಟಹಳ್ಳಿ, ಬ್ಯಾಡರ ಹಳ್ಳಿ ಇನ್ನಿತರೆ ಗ್ರಾಮಗಳಲ್ಲಿ ನರೇಗಾ ಯೋಜನೆ ಯಡಿ ಕರ್ತವ್ಯ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಕೂಲಿ ಹೆಚ್ಚಳ, ಅಗತ್ಯ ಮೂಲ ಸೌಲಭ್ಯ ಕಲ್ಪಿಸ ಬೇಕೆಂದರು. ಕೊರೊನಾ ಹಿನ್ನೆಲೆಯಲ್ಲಿ ಪಿಡಿಒಗಳು ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡುವ ಜತೆಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ತಿಳಿಸಬೇಕು.
ಕ್ವಾರಂಟೈನ್ಗೆ ಒಳಗಾಗುವವರಿಗೆ ಗ್ರಾಮದ ಹೊರ ವಲಯದ ಅರಣ್ಯ ಪ್ರದೇಶಗಳಲ್ಲಿ ಪ್ರತ್ಯೇಕ ಸ್ಥಳ ಮೀಸಲಿಡುವ ಮೂಲಕ ಕೊರೊನಾ ವೈರಸ್ ಇತರರಿಗೆ ಹರಡದಂತೆ ಎಚ್ಚರಿಕೆ ವಹಿಸಬೇಕೆಂದರು. ತಾಪಂ ಸದಸ್ಯ ಚಿಕ್ಕಮರಿಯಪ್ಪ, ಇಒ ಮುನಿರಾಜು, ಪಿಡಿಒಗಳಾದ ಲೀಲಾವತಿ, ಮಧುಸೂದನ್, ಕುಮಾರ್, ಬಸವಯ್ಯ, ಮಂಜುನಾಥ್ ಇತರರಿದ್ದರು.