ಹುಣಸೂರು: ಚಿರತೆ ಕಂಡು ಹೌಹಾರಿದ ಬೀಟ್ ಪೊಲೀಸರು!
ಮತ್ತೊಂದೆಡೆ ಮನೆಬಳಿ ಕಾಣಿಸಿಕೊಂಡ 24 ಗಂಟೆಯಲ್ಲೇ ಚಿರತೆ ಸೆರೆ
Team Udayavani, Feb 1, 2024, 11:42 PM IST
ಹುಣಸೂರು: ಮನೆ ಬಳಿ ಕಾಣಿಸಿಕೊಂಡ ಚಿರತೆಯು ಮಾರನೇ ದಿನವೇ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಬಂಧಿಯಾಗಿದೆ.
ಸುಮಾರು ಎರಡು ವರ್ಷದ ಗಂಡು ಚಿರತೆಯು ಹುಣಸೂರು-ಮೈಸೂರು ರಸ್ತೆಯ ನಗರಕ್ಕೆ ಹೊಂದಿಕೊಂಡಂತಿರುವ ಅಗ್ನಿಶಾಮಕ ಠಾಣೆ ಬಳಿಯ ಗಿರೀಶ್ ಎಂಬುವವರ ಮನೆ ಬಳಿ ಬುಧವಾರ ರಾತ್ರಿ ಚಿರತೆ ಕಾಣಿಸಿಕೊಂಡಿತ್ತು. ತತ್ ಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಪ್ರಾದೇಶಿಕ ವಿಭಾಗದ ಸಿಬಂದಿ ಮನೆ ಬಳಿ ನಾಯಿಯನ್ನು ಕಟ್ಟಿದ ಬೋನ್ ಇರಿಸಿದ್ದರು. ಮಾರನೇ ದಿನ ನಾಯಿತಿನ್ನುವ ಆಸೆಯಿಂದ ಬಂದಿದ್ದ ಚಿರತೆಯು ಬೋನಿನಲ್ಲಿ ಬಂಧಿಯಾಗಿದೆ.
ಸೆರೆ ಸಿಕ್ಕ ಚಿರತೆಗೆ ಚಿಪ್ ಅಳವಡಿಸಿ ನಾಗರಹೊಳೆ ಉದ್ಯಾನದಲ್ಲಿ ಬಂಧಮುಕ್ತಗೊಳಿಸಲಾಯಿತೆಂದು ಆರ್.ಎಫ್.ಓ.ನಂದಕುಮಾರ್ ತಿಳಿಸಿದ್ದಾರೆ.
ಕಲ್ಕುಣಿಕೆ ಬಳಿ ಮತ್ತೊಂದು ಚಿರತೆ
ಕೆ.ಆರ್.ನಗರ ರಸ್ತೆಯ ಜಂಕ್ಷನ್ನ ಶನಿದೇವರ ದೇವಾಲಯದ ಬಳಿ ಬುಧವಾರ ರಾತ್ರಿ ಚಿರತೆ ಕಾಣಿಸಿಕೊಂಡಿದ್ದು, ಜನರು ಭಯಬೀತರಾಗಿದ್ದಾರೆ. ದೇವಾಲಯದ ಬಳಿ ವಿರಮಿಸುತ್ತಿದ್ದ ಬೀಟ್ ಪೋಲೀಸರು ಯಾವುದೋ ಪ್ರಾಣಿಯನ್ನು ಕಚ್ಚಿಕೊಂಡು ರಸ್ತೆ ದಾಟಿ ಓಡಿ ಬರುತ್ತಿದ್ದ ಚಿರತೆಯನ್ನು ಕಂಡು ಹೌಹಾರಿ ತತ್ ಕ್ಷಣವೇ ಜೀವ ಕೈಯಲ್ಲಿ ಹಿಡಿದು ಬೈಕ್ ಏರಿ ಜಾಗ ಖಾಲಿ ಮಾಡಿದ್ದಾರೆ. ತತ್ ಕ್ಷಣವೇ ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದಾರೆ.