Hunsur ಹನುಮ ಜಯಂತಿ: ಭದ್ರತೆಗೆ 1800 ಪೊಲೀಸರ ನಿಯೋಜನೆ
Team Udayavani, Dec 25, 2023, 7:07 PM IST
ಹುಣಸೂರು: ನಗರದಲ್ಲಿ ಡಿ.26ರ ಮಂಗಳವಾರ ನಡೆಯಲಿರುವ ಹನುಮ ಜಯಂತಿ ಮೆರವಣಿಗೆ ಅಂಗವಾಗಿ ಸೋಮವಾರ ಸಂಜೆ ಪೊಲೀಸರು ಪಥಸಂಚಲನ ನಡೆಸಿದರು.
ನಗರದ ಮುನೇಶ್ವರಕಾವಲ್ ಮೈದಾನದಿಂದ ಪೊಲೀಸ್ ಬ್ಯಾಂಡ್ ನೊಂದಿಗೆ ಎಸ್ಪಿ ಸೀಮಾಲಾಟ್ಕರ್, ಅಡಿಷನಲ್ ಎಸ್ಪಿ ಡಾ.ನಂದಿನಿ, ಡಿವೈಎಸ್ಪಿ ಗೋಪಾಲಕೃಷ್ಣ ನೇತೃತ್ವದಲ್ಲಿ 1800ಕ್ಕೂ ಹೆಚ್ಚು ಪೊಲೀಸರು ನಗರದ ಎಸ್.ಜೆ.ರಸ್ತೆ, ಜೆಎಲ್ಬಿ ರಸ್ತೆ, ಬಜಾರ್ ರಸ್ತೆ, ಬಸ್ ನಿಲ್ದಾಣ, ಸಂವಿಧಾನ ಸರ್ಕಲ್, ಗೋಕುಲ ರಸ್ತೆ, ಬೈಪಾಸ್ ರಸ್ತೆ ಮೂಲಕ ಶಬ್ಬೀರ್ನಗರ, ಕಲ್ಪತರು ವೃತ್ತ ಸೇರಿದಂತೆ ವಿವಿಧೆಡೆ ಸೈರನ್ ಮೊಳಗಿಸುತ್ತಾ ಸಾಗಿಬಂದರು.
ಬಂದೋಬಸ್ತ್ ಗೆ 1800 ಪೊಲೀಸರು:
ಬಂದೋಬಸ್ತ್ ಗಾಗಿ ಒಬ್ಬರು ಎಸ್ಪಿ, ಮೂವರು ಎಎಸ್ಪಿ, 10 ಡಿವೈಎಸ್ಪಿ, 32 ಇನ್ಸ್ಪೆಕ್ಟರ್, 88 ಎಸ್ಐ, 157 ಎಎಸ್ಐ, 1100 ಪೊಲೀಸರು, 10 ಕೆಎಸ್ಆರ್ಪಿ ಮತ್ತು 6 ಡಿಎಆರ್ ತುಕಡಿಗಳು, 2 ತುಕಡಿ ಕ್ಷಿಪ್ರಕಾರ್ಯಪಡೆ, 2 ಆ್ಯಂಟಿ ಬಾಂಬ್ ಸ್ಕ್ವಾಡ್ ಸೇರಿದಂತೆ 1800ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದು, ರಸ್ತೆಗಳಲ್ಲೊಂದಾದ ಬಜಾರ್ ರಸ್ತೆಯ ಹಲವೆಡೆ ವಿಡಿಯೋ ಚಿತ್ರೀಕರಣ ತಂಡ ನಿಯೋಜಿಸಲಾಗುತ್ತಿದೆ.
ಆಯಾಕಟ್ಟಿನ ಸ್ಥಳಗಳಲ್ಲಿ ಬಂದೂಕುಧಾರಿ ಪೊಲೀಸರನ್ನು ನಿಯೋಜಿಸಲಾಗುವುದು. ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ಮುನ್ನೆಚ್ಚರಿಕೆವಹಿಸಲಾಗಿದೆ ಎಂದು ಡಿವೈಎಸ್ಪಿ ಗೋಪಾಲಕೃಷ್ಣ ತಿಳಿಸಿದ್ದಾರೆ.