Hunsur; ನಿಯಂತ್ರಣ ತಪ್ಪಿದ ಬೈಕ್ ಹಳ್ಳಕ್ಕೆ ಬಿದ್ದು ಸವಾರ ಸಾವು
Team Udayavani, Jun 19, 2023, 6:36 PM IST
ಹುಣಸೂರು: ನಿಯಂತ್ರಣ ತಪ್ಪಿ ಬೈಕ್ ಹಳ್ಳಕ್ಕೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡು ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಾಳಬೂಚನಹಳ್ಳಿ ಬಳಿ ನಡೆದಿದೆ.
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕಾಳಬೂಚನಹಳ್ಳಿ ಗ್ರಾಮದ ತಮ್ಮಬೋಯಿರ ಪುತ್ರ ಉಮೇಶ್(26) ಮೃತ ದುರ್ದೈವಿ. ತಂದೆ, ತಾಯಿ, ಪತ್ನಿ ಮತ್ತು ಒಂದು ಮಗುವನ್ನು ಅಗಲಿದ್ದಾರೆ.
ಉಮೇಶ್ ತಮ್ಮ ಬೈಕಿನಲ್ಲಿ ಜಮೀನಿನ ಶುಂಠಿ ಕೆಲಸಕ್ಕೆ ಕೂಲಿ ಕಾರ್ಮಿಕರನ್ನು ಬರ ಹೇಳಿ ವಾಪಸ್ ಆಗುವ ವೇಳೆ ಕಾಳಬೂಚನಹಳ್ಳಿ ತಿರುವಿನ ಬಳಿ ನಿಯಂತ್ರಣ ತಪ್ಪಿ ಬೈಕ್ ಸಹಿತ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದ್ದು, ಮೋರಿಯ ಕಲ್ಲು ತಲೆಗೆ ಬಡಿದ ಪರಿಣಾಮ ತೀವ್ರಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸು ದಾರರಿಗೆ ಒಪ್ಪಿಸಲಾಗಿದ್ದು. ಸ್ವಗ್ರಾಮದ ಅವರ ಜಮೀನಿನಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಿತು.