Mysuru Airport: ವಿಮಾನ ಸ್ಥಗಿತ; ಪ್ರವಾಸೋದ್ಯಮಕ್ಕೆ ಹೊಡೆತ
Team Udayavani, Mar 6, 2024, 4:43 PM IST
ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಕೆಲವು ಪ್ರಮುಖ ಪ್ರವಾಸಿ ನಗರಗಳಿಗೆ ವಿಮಾನ ಹಾರಾಟ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೊಡೆತ ಬೀಳುತ್ತಿದೆ.
ವಾರದ ಹಿಂದೆ ಬೆಳಗಾವಿ, ಹುಬ್ಬಳ್ಳಿ, ಕಲುಬುರ್ಗಿಗೆ ವಿಮಾನ ಹಾರಾಟ ನಿಂತುಹೋಗಿದೆ. ಪ್ರಮುಖ ಪ್ರವಾಸಿತಾಣಗಳಾದ ಕೊಚ್ಚಿನ್, ಗೋವಾ ಮಾರ್ಗಕ್ಕೆ ವಿಮಾನ ಸೇವೆ ನಿಂತು ಹೋಗಿ ಸರಿಸುಮಾರು ಎರಡು ತಿಂಗಳು ಆಗುತ್ತಾ ಬರುತ್ತಿದೆ. ಈಗ ಚೆನ್ನೈ, ಹೈದಾರಬಾದ್ಗೆ ಮಾತ್ರ ಸೇವೆ ಲಭ್ಯವಿದೆ.
ಸ್ವಲ್ಪ ದಿನಗಳಲ್ಲಿ ಬಹು ದೊಡ್ಡ ಹೊಡೆತ: ಕೇರಳ- ತಮಿಳುನಾಡು ರಾಜ್ಯಗಳ ಗಡಿಯು ಸಮೀಪವಿರುವ ಕಾರಣ ಸಾಂಸ್ಕೃತಿಕ ನಗರಿ ಮೈಸೂರು ಪ್ರವಾಸೋ ದ್ಯಮದ ಹಬ್ ಆಗಿ ಬೆಳವಣಿಗೆಯನ್ನು ಕಾಣುತ್ತಿತ್ತು. ವಿಮಾನಗಳ ಹಾರಾಟದಿಂದಾಗಿ ಗೋವಾ ಹಾಗೂ ಕೊಚ್ಚಿನ್ ಕಡೆಗೆ ಪ್ರವಾಸಿಗರ ದಟ್ಟಣೆ ಇತ್ತು. ಇದಕ್ಕಿದಂತೆ ವಿಮಾನ ಹಾರಾಟಗಳು ಸ್ಥಗಿತಗೊಂಡಿರು ವುದರಿಂದ ಸ್ವಲ್ಪ ದಿನಗಳಲ್ಲಿ ಬಹು ದೊಡ್ಡ ಹೊಡೆತ ಬೀಳಲಿದೆ.
ಏಕೆಂದರೆ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ವಿದೇಶಿಗರು ಹಾಗೂ ಉತ್ತರ ಭಾರತದ ಪ್ರವಾಸಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸಿ, ಇಲ್ಲಿಂದ ಊಟಿ, ಮುನ್ನಾರ್, ವೈನಾಡು ಕಡೆಗೆ ಹೋಗುತ್ತಿದ್ದರು. ಈಗ ಆ ಅವಕಾಶವೂ ಇಲ್ಲವಾಗುತ್ತದೆ ಎನ್ನುವುದು ಪ್ರವಾಸೋದ್ಯಮ ವಲಯದಲ್ಲಿ ಸಕ್ರಿಯವಾಗಿರುವವರ ಅಭಿಪ್ರಾಯವಾಗಿದೆ.
ನಿಂತು ಹೋದ ವಹಿವಾಟು: ವಿಮಾನ ಹಾರಾಟ ನಿರಂತರವಾಗಿದ್ದ ಕಾಲದಲ್ಲಿ ಮೈಸೂರಿಗೆ ದಿನಂಪ್ರತಿ ಕನಿಷ್ಠ 95ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಬರುತ್ತಿದ್ದರು. ಇವರಲ್ಲಿ ಬಹುತೇಕರು ವಿದೇಶಿಯರು. ಇವರು ಮೈಸೂರಿನ ಸ್ಥಳೀಯ ಪ್ರವಾಸಿ ತಾಣಗಳನ್ನು ನೋಡಿದ ಬಳಿಕ ಬೇಲೂರು, ಹಳೇಬೀಡು, ಕೊಡಗು ಮುಂತಾದ ಕಡೆಗಳಿಗೆ ಒಂದು ದಿನದ ಪ್ಯಾಕೇಜಿನಲ್ಲಿ ಹೋಗುತ್ತಿದ್ದರು. ಮತ್ತೆ ಮೈಸೂರಿಗೆ ವಾಪಸ್ ಬಂದು ತಂಗುತ್ತಿದ್ದರು. ಹೋಟೆಲ್, ವಸತಿಗೃಹ, ಸ್ಥಳೀಯ ಪ್ರವಾಸಿ ವಾಹನಗಳಿಗೂ ವಹಿವಾಟು ಉತ್ತಮವಾಗಿ ನಡೆಯುತ್ತಿತ್ತು. ಅಂದಾಜು ತಿಂಗಳಿಗೆ 60 ಲಕ್ಷ ರೂಪಾಯಿ ವಹಿವಾಟು ಈಗ ನಿಂತು ಹೋಗುತ್ತದೆ. ಇದರಿಂದ ಶೇ.40ರಷ್ಟು ನಷ್ಟವಾಗುತ್ತದೆ ಎನ್ನುತ್ತಾರೆ ಮೈಸೂರಿನ ಉದ್ಯಮಿಗಳು.
25ರಿಂದ 30 ಕುಟುಂಬಗಳ ಸ್ಥಿತಿ ಡೋಲಾಯ ಮಾನ: ಕೊಚ್ಚಿನ್, ಗೋವಾ ವಿಮಾನಗಳನ್ನು ಸ್ಥಗಿತಗೊಳಿಸಿರುವುದರಿಂದ 25ರಿಂದ 30 ಕುಟುಂಬಗಳ ಸ್ಥಿತಿ ಡೋಲಾಯಮಾನವಾಗಿದೆ ಎಂದು ಮೈಸೂರು ಜಿಲ್ಲಾ ಪ್ರವಾಸಿ ವಾಹನಗಳ ಚಾಲಕರ ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗರಾಜು ಅವರು ಆಂತಕದಲ್ಲೇ ಮಾತನಾಡಿದರು.
ವಿಮಾನ ಹಾರಾಟವಿದ್ದ ವೇಳೆಯಲ್ಲಿ ಮಂಡಕಳ್ಳಿಯಿಂದ ಮೈಸೂರಿಗೆ ಕನಿಷ್ಠ 50 ಸಿಂಗಲ್ ಟ್ರಿಪ್ ಮಾಡುತ್ತಿದ್ದೇವು. ಇದಕ್ಕೆ 10ರಿಂದ 15 ಪ್ರವಾಸಿ ಟ್ಯಾಕ್ಸಿಗಳು ನಿಗದಿಯಾಗಿದ್ದವು. ಕೆಲ ಪ್ರವಾಸಿಗರು ಮೈಸೂರಿಗೆ ಬಂದು ಇಲ್ಲಿಂದ ಬೇರೆ ವಾಹನವನ್ನು ಬಾಡಿಗೆಗೆ ಮಾಡಿಕೊಂಡು ಹೋಗುತ್ತಿದ್ದರು. ಕೆಲವರು ವಿಮಾನ ನಿಲ್ದಾಣದಿಂದಲೇ ಪ್ರವಾಸಿ ತಾಣಗಳತ್ತ ಹೊರಟು ಬಿಡುತ್ತಿದ್ದರು. ಇದರಿಂದ ನಮ್ಮ ಟ್ಯಾಕ್ಸಿಯವರಿಗೆ ದಿನಕ್ಕೆ 3.500 ರೂಪಾಯಿ ಆದಾಯ ಸಿಗುತ್ತಿತ್ತು. ಇದನ್ನೇ ನಂಬಿಕೊಂಡು ಸಾಲ ಮಾಡಿ ಕಾರು ಖರೀದಿ ಮಾಡಿರುವವರು ಇಎಂಐ ಕಟ್ಟಲು ಪರದಾಡಬೇಕಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು.
ಎಟಿಆರ್ ಏರ್ಕ್ರಾಫ್ಟ್ಗಳ ಸಮರ್ಪಕ ಲಭ್ಯತೆ ಇಲ್ಲದ ಕಾರಣ ಹಾರಾಟ ಸ್ಥಗಿತಗೊಳಿಸಲಾಗಿದೆ. ನಾವು ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಕೊಚ್ಚಿನ್ ಹಾಗೂ ಗೋವಾ ಮಾರ್ಗವು ಆದಾಯದ ಮಾರ್ಗವಾಗಿರುವುದಿಂದ ಹಾರಾಟವನ್ನು ಮತ್ತೆ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ಅಲೈಯನ್ಸ್ , ಸ್ಟಾರ್ ಏರ್ ಕಂಪನಿಗಳ ಜತೆ ಮಾತುಕತೆ ನಡೆದಿದೆ. ●ಜೆ.ಆರ್.ಅನೂಪ್, ನಿರ್ದೇಶಕರು, ಮೈಸೂರು ವಿಮಾನ ನಿಲ್ದಾಣ
ವಿದೇಶಿ ಪ್ರವಾಸಿಗರಿಗೆ ಗೋವಾದ ಬಳಿಕ ಎರಡನೇ ಆಯ್ಕೆ ಮೈಸೂರೇ ಆಗಿದೆ. ಮೈಸೂರಿಗೆ ಬಂದು ಇಲ್ಲಿ ಪ್ರವಾಸಿ ತಾಣಗಳನ್ನು ನೋಡಿದ ಮೇಲೆ ಅವರು ಕೊಚ್ಚಿನ್ ಕಡೆಗೆ ಮುಖ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಪುನರಾಂಭಿಸಬೇಕು. ●ಸಿ.ಎ.ಜಯಕುಮಾರ್, ಮೈಸೂರು ಟ್ರ್ಯಾವಲ್ಸ್ ಅಸೋಸಿಯೇಷನ್ ಅಧ್ಯಕ್ಷ
-ಆರ್.ವೀರೇಂದ್ರ ಪ್ರಸಾದ್