ಕ್ಷೇತ್ರಕ್ಕೆ ಪ್ರಸಾದ್ ಕೊಡುಗೆ ಶೂನ್ಯ
Team Udayavani, Apr 4, 2017, 11:56 AM IST
ನಂಜನಗೂಡು: ಕ್ಷೇತ್ರಕ್ಕೆ ಪ್ರಸಾದರ ಕೊಡುಗೆ ಶೂನ್ಯ ವಾಗಿದ್ದು ನಿಮಗೆ ಅಭಿವೃದ್ಧಿ ಬೇಕಾದಲ್ಲಿ ಕಳಲೆಗೆ ಮತ ನೀಡಿ ಎಂದು ಗೃಹ ಸಚಿವ ಪರಮೇಶ್ವರ ಮನವಿ ಮಾಡಿದರು.
ತಾಲೂಕಿನ ಹೊರಳವಾಡಿ, ಮುಳ್ಳೂರು, ದೇವರಸನ ಹಳ್ಳಿ, ಮುಂತಾದ ಗ್ರಾಮಗಳಲ್ಲಿ ಸೋಮವಾರ ಕಾಂಗ್ರೆಸ್ ಪರ ಮತಯಾಚಿಸಿ, ದೇವರಸನಹಳ್ಳಿ ಮಾತನಾಡಿ, ಜೀವಮಾನದುದ್ದಕ್ಕೂ ಪ್ರಸಾದರಿಗೆ ಅಧಿಕಾರ ನೀಡಿದ ಕಾಂಗ್ರೆಸ್ ಅವರನ್ನು ರಾಜೀನಾಮೆ ನೀಡಿ ಪಕ್ಷಬಿಟ್ಟು ಹೋಗಿ ಎಂದೇನೂ ಹೇಳಿರಲಿಲ್ಲ ಹೊಸಬರಿಗೆ ಅವಕಾಶ ನೀಡುವ ದೃಷ್ಟಿಯಿಂದ 14 ಜನರನ್ನು ಮಂತ್ರಿ ಮಂಡಲ ದಿಂದ ತೆಗೆಯಲಾಯಿತೇ ವಿನಃ ಬೇರೆನ್ನೇನು ಇಲ್ಲಾ ಎಂದರು.
5 ಬಾರಿ ಲೋಕಸಭಾ ಸದಸ್ಯರಾಗಿ, 2 ಬಾರಿ ಶಾಸಕರಾಗಿ ಕೇಂದ್ರ ಸರ್ಕಾರದಿಂದ ಯಾವ ಕಂಪನಿಯನ್ನು ನಂಜನಗೂಡಿಗೆ ತರಲಿಲ್ಲ. ಜೊತೆಗೆ ಇವರ ಅಭಿವೃದ್ಧಿ ಈ ಕ್ಷೇತ್ರಕ್ಕೆ ಶೂನ್ಯ ಎಂದು ಹೇಳಿದರು. 2 ಬಾರಿ ಲೋಕಸಭಾ ಸದಸ್ಯರಾದ ಆರ್. ಧ್ರುವ ನಾರಯಣ್ ನಂಜನಗೂಡು – ಮೈಸೂರು ರಸ್ತೆ ಅವ್ಯವಸ್ಥೆಯನ್ನು ಸಿಆರ್ಎಫ್ ನಿಧಿಯಿಂದ ಚರ್ತುಷ್ಪಥ ರಸ್ತೆ ಮಾಡಿಸಿದರು.
ಹುಲ್ಲಹಳ್ಳಿ ವೃತ್ತದಿಂದ ಹುಲ್ಲಹಳ್ಳಿವರೆಗೆ ಹೈಟೆಕ್ ರಸ್ತೆ, ಕೇಂದ್ರ ಸರ್ಕಾರದಿಂದ ಅನೇಕ ಶಿಕ್ಷಣ ಸಂಸ್ಥೆ ತರಲು ಶ್ರಮಿಸಿದ್ದಾರೆ. ಈ ಭಾಗದಲ್ಲಿ ಜನರ ನಾಡಿ ಮಿಡಿತಕ್ಕೆ ಸ್ಪಂದಿಸಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ರಾಷ್ಟ್ರದಲ್ಲೇ ಉತ್ತಮ ಸಂಸದ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ ಎಂದರು. ಪುಣ್ಯ ಕ್ಷೇತ್ರ ಎನಿಸಿರುವ ನಂಜನಗೂಡಿನಲ್ಲಿ ಸಾರ್ವ ಜನಿಕ ಉಪಯೋಗಕ್ಕೆ ಬರುವ ಎರಡೇ ರಸೆಗಳಿವೆ,
ಆ ರಸ್ತೆಗಳನ್ನು ದುರಸ್ತಿ ಮಾಡಲಾಗದ ಶೋಚನೆಯ ಸ್ಥಿತಿಯಲ್ಲಿದ್ದರೂ ನೀವುಗಳು ಅವರನ್ನು ಹೇಗೆ ಬೆಂಬಲಿಸು ತ್ತೀರಿ ಎಂದು ಪ್ರಶ್ನೆ ಮಾಡಿದ ಅವರು ದಿನದ ಇಪ್ಪತ್ತನಾಲ್ಕು ಗಂಟೆಗಳು ನಿಮ್ಮ ಕೈಗೆ ಸಿಗುವ, ನಿಮ್ಮ ಸಹೋದರ ನಂತಿರುವ ಕಳಲೆ ಕೇಶವಮೂರ್ತಿರನ್ನು ಗೆಲ್ಲಿಸಿ ಆಗ ನಂಜನಗೂಡಿನ ಅಭಿವೃದ್ಧಿಪಥದ ಚಮತ್ಕಾರ ನೀವೆ ನೋಡಿ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೋದ ಕಡೆಯಲ್ಲಾ, ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಭ್ರಷ್ಟಾಚಾರದಡಿಯಲ್ಲಿ ಜೈಲಿಗೆ ಹೋಗಿ ಬಂದಿರುವರಿಂದ ಪ್ರಾಮಾಣಿಕತೆಯ ಪಾಠ ಕೇಳುವ ಹಾಗಾಗಿದೆ ಎಂದು ವ್ಯಂಗ್ಯವಾಡಿದರು.
ವಿಪ ಸದಸ್ಯೆ ನಟಿ ಜಯಮಾಲಾ, ಭಾವನಾ, ಉಸ್ತುವಾರಿ ನಾರಾಯಣಸ್ವಾಮಿ, ಮಾಜಿ ವಿಪ ಸದಸ್ಯ ಸಲೀಂ ಅಹಮದ್, ಮೈಸೂರು ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್, ಜಿಪಂ ಸದಸ್ಯೆ ಲತಾ ಸಿದ್ದಶಟ್ಟಿ, ದೇವರಸನಹಳ್ಳಿ ಗ್ರಾಪಂ ಅಧ್ಯಕ್ಷೆ ಮಹದೇವಪ್ಪ, ಸುರೇಶ್, ದಾಸೇಗೌಡ, ಪ್ರಭಾಕರ್, ಬಸವರಾಜನಾಯ್ಕ, ರವಿಚಂದ್ರ, ದೇವರಸನಹಳ್ಳಿ ಸುರೇಶ್, ಚೆಲುವಪ್ಪ ಇದ್ದರು.