ಕನ್ನಡ “ಮತ’ ಜಾತ್ಯತೀತ: ಚಂಪಾ
Team Udayavani, Nov 25, 2017, 6:00 AM IST
ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆ, ಮೈಸೂರು: 83ನೇ ಅಖಿಲ;ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ| ಚಂದ್ರಶೇಖರ ಪಾಟೀಲ ಅವರು ನವ್ಯದ ಮಟಮಟ ಮಧ್ಯಾಹ್ನ ಹುಟ್ಟಿದ ಶಿಶುವಿನಂತೆ, ಬಂಡಾಯದ ಹೆಬ್ಬಂಡೆಯಂತೆ, ವ್ಯವಸ್ಥೆಯ ಚಳಿ ಬಿಡಿಸುವ ಚಳವಳಿಕಾರನಂತೆ, ಬಹುಪಾಲು ರಾಜಕಾರಣಿಯಂತೆ, ಆಡಳಿತದ ಅಪಚಾರ ಖಂಡಿಸುವ ಕವಿಯಂತೆ – ವಿಭಿನ್ನವಾಗಿ ತಮ್ಮನ್ನು ತೆರೆದಿಟ್ಟರು. ಅಲ್ಲಲ್ಲಿ ಆತ್ಮ ಚರಿತ್ರೆಯ ತುಣುಕು ತೂರಿಸುತ್ತಾ, ಆತ್ಮರತಿಯನ್ನು ಇಣುಕಿಸುತ್ತಾ, ಹಿಂದಿನ ಸರ್ವಾಧ್ಯಕ್ಷರ ಭಾಷಣಗಳ ಚುಂಗುಹಿಡಿದು ವರ್ತಮಾನಕ್ಕೆ ಮುಖಾಮುಖೀ ಆಗಲೆತ್ನಿಸಿದರು.
“ಕನ್ನಡ ಪ್ರಜ್ಞೆಯೇ ಅಪ್ಪಟ ಜಾತ್ಯತೀತವಾದುದು’ ಎಂದು ಖಡಕ್ಕಾಗಿ ಹೇಳಿದ ಚಂಪಾ, ನಮ್ಮ ಸಂವಿಧಾನದಲ್ಲಿ ಅಂತರ್ಗ ತವಾದ ಸ್ವಾತಂತ್ರ್ಯ, ಸಮಾನತೆ, ಸಹಭಾವ, ಸೆಕ್ಯು ಲರಿಸಂ, ಸಾಮಾಜಿಕ ನ್ಯಾಯ ಮುಂತಾದವುಗಳಿಗೆ ಕಂಟಕ ಒದಗಿ ಬಂದಿದೆ ಎಂಬ ಆತಂಕ ವ್ಯಕ್ತಪಡಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಪ್ರೊಫೆಸರ್,ನಮ್ಮ ರಾಜ್ಯದ ಹಿತಾ ಸಕ್ತಿಗಳ ಸಂರಕ್ಷಣೆಗಾಗಿ ಸೆಕ್ಯು ಲರ್ ಪಕ್ಷಗಳ ಪರವಾಗಿ ಮತಚಲಾಯಿಸಬೇಕು ಎಂದು ಮನವಿ ಮಾಡಿದರು.
ಅಷ್ಟಕ್ಕೇ ನಿಲ್ಲದ ಅವರು, “ಒಂದು ರಾಷ್ಟ್ರೀಯ ಪಕ್ಷ ಕನ್ನಡದ ಪರ ಕೆಲಸ ಮಾಡುತ್ತಿದೆ. ಆದರೆ, ಇನ್ನೊಂದು ರಾಷ್ಟ್ರೀಯ ಪಕ್ಷವು ನಾಡಧ್ವಜ ವಿವಾದ, ಮೆಟ್ರೋದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಸೊಲ್ಲೆತ್ತದೆ, ಮೌನ ತಾಳಿದೆ. ಈ ಚುನಾವಣೆಯಲ್ಲಿ ಆ ಪಕ್ಷವನ್ನು ಜನ ದೂರವಿಡಬೇಕು’ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ಚಂಪಾ ಕರೆಕೊಟ್ಟರು.
ಸಂಸ್ಕೃತದ ಅವಸಾನಕ್ಕೆ ಬೆಟ್ಟು ಮಾಡುತ್ತಾ, ಹಿಂದಿಯ ಸವಾರಿಯನ್ನು ಖಂಡಿಸುತ್ತಾ ಹೋದ ಕನ್ನಡದ “ಇಂಗ್ಲಿಷ್ ಮೇಷ್ಟ್ರು’, ಆಂಗ್ಲ ಭಾಷೆಯ ವ್ಯಾಪಾರೀಕರಣ ಛೇಡಿಸುವುದನ್ನೂ ಬಿಡಲಿಲ್ಲ. ಕನ್ನಡವನ್ನು ಹೊಸಕಿ ಹಾಕುತ್ತಿರುವ ಕಾನ್ವೆಂಟ್ ಸಂಸ್ಕೃತಿಯ ಸೊಕ್ಕಿಗೂ ಚಾಟಿ ಬೀಸಿದರು. ಕನ್ನಡಕ್ಕೆ ಶ್ರದ್ಧಾಂಜಲಿ ಸಲ್ಲಿಸುವುದನ್ನೇ ಕಾಯುತ್ತಿರುವವರ ನಡುವೆ, ಅದನ್ನೆಲ್ಲ ಮೆಟ್ಟಿ ನಿಲ್ಲುತ್ತಿರುವ ಕನ್ನಡಿಗರ ಅಸ್ಮಿತೆಗೆ ಚಂಪಾ ಮೆಚ್ಚುಗೆಯಿತ್ತು.
“ಕನ್ನಡ ಸಂಸ್ಕೃತಿಗೆ ಸಂಸ್ಕೃತ, ಹಿಂದಿ, ಇಂಗ್ಲಿಷ್ ಕಡುವೈರಿಯಾಗಲು ಕೇಂದ್ರೀಕೃತ ವ್ಯವಸ್ಥೆಯೇ ಕಾರಣ. ಕೇಂದ್ರ ಸರಕಾರದ ನೀತಿ ಬಹುತ್ವದ ಬುನಾದಿಯನ್ನೇ ಅಲುಗಾಡಿಸುತ್ತಿದೆ. ಒಂದೇ ಭಾಷೆ – ಒಂದೇ ಧರ್ಮ- ಒಂದೇ ಸಿದ್ಧಾಂತ ಎಂಬ ಧಾಟಿಯಲ್ಲಿ ನಾವೆಲ್ಲ ಒಕ್ಕೊರಲಿನಿಂದ ಹಾಡುತ್ತಿದ್ದ ವಂದೇಮಾತರಂ ಗೀತೆಯನ್ನೇ ಹೈಜಾಕ್
ಮಾಡಲಾಗಿದೆ. ಭಾರತ ಮಾತೆ, ಬರೀ ಹಿಂದೂ ಮಾತೆ ಆಗುತ್ತಿರುವಳೇ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರಶ್ನೆ ಮಾಡುವುದೇ ರಾಷ್ಟ್ರದ್ರೋಹವಾಗಿ, ವೈಚಾರಿಕತೆ ಮೇಲೆ ಹಲ್ಲೆ ಎಸಗುವುದೇ ಸಂಸ್ಕೃತಿಯಾಗಿ, ದಟ್ಟ ಭಯ ಆವರಿಸಿದೆ’ ಎಂಬ ಅವರ ಧ್ವನಿಯಲ್ಲಿ ಆತಂಕವಿತ್ತು.
ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆ, ಮೈಸೂರು: ಮಾತೃಭಾಷೆಯ ಶಿಕ್ಷಣ ಹಾಗೂ ಕರ್ನಾಟಕ ಪ್ರತ್ಯೇಕ ನಾಡಧ್ವಜ ಹೊಂದಬೇಕೆಂಬ ವಿಚಾರಕ್ಕೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿ, ಮಾತೃಭಾಷೆಯ ಶಿಕ್ಷಣಕ್ಕೆ ನಮ್ಮ ಸರಕಾರ ಬದ್ಧವಾಗಿದೆ. ಈ ಬಗೆಗೆ ಇರುವ ಕಾನೂನು ತೊಡಕನ್ನು ನಿವಾರಿಸಲು ಸಂವಿಧಾನಕ್ಕೆ ತಿದ್ದುಪಡಿ ತರ ಬೇಕಿದೆ. ಈ ಸಂಬಂಧ ಕೇಂದ್ರ ಸರಕಾರಕ್ಕೆ ಎರಡು ಬಾರಿ ಪತ್ರ ಬರೆದಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಈ ವಿಚಾರ ಪ್ರಸ್ತಾವಿಸಿ ಸಂವಿಧಾನಕ್ಕೆ ತಿದ್ದುಪಡಿ ತರಲು ಪ್ರಯತ್ನಿಸುವುದಾಗಿ ಹೇಳಿದರು.
ಭಾರತದ ಒಕ್ಕೂಟ ತಣ್ತೀವನ್ನು ಒಪ್ಪಿಕೊಂಡು ಕನ್ನಡದ ಅನನ್ಯತೆಯನ್ನು ಎತ್ತಿ ಹಿಡಿಯುವುದು ನಮ್ಮ ಕರ್ತವ್ಯ
ಹಾಗೂ ಜವಾಬ್ದಾರಿ. ಆದುದರಿಂದಲೇ ನಾಡ ಗೀತೆ ಇರುವಂತೆ, ನಾಡಧ್ವಜವೂ ಇರಬೇಕು. ನಾಡ ಗೀತೆ-
ರಾಷ್ಟ್ರಗೀತೆ, ನಾಡಧ್ವಜ-ರಾಷ್ಟ್ರಧ್ವಜ ಇವೆರಡೂ ಪರಸ್ಪರ ಪೂರಕ, ಪರಸ್ಪರ ವಿರೋಧಿ ಅಲ್ಲ. ರಾಷ್ಟ್ರಕವಿ ಕುವೆಂಪು ಅವರು “ಜಯ ಭಾರತ ಜನನಿಯ ತನುಜಾತೆ; ಜಯಹೇ ಕರ್ನಾಟಕ ಮಾತೆ’ಎಂದು ಹಾಡಿದ್ದಾರೆ. ಈ ಆದರ್ಶಕ್ಕೆ ನಾವು ಬದ್ಧರಾಗಿದ್ದೇವೆ. ಇದನ್ನು ವಿರೋಧಿಸುವುದು ನಾಡು-ನುಡಿಗೆ ತೋರುವ ಅಗೌರವವಾಗುತ್ತದೆ ಎಂದರು.
ಕನ್ನಡದಿಂದ ರಾಜಕೀಯ ಮಾಡಲ್ಲ ಕನ್ನಡ ಎನ್ನುವುದು ನನಗೆ ರಾಜಕೀಯ ಅಲ್ಲ. ಅದು ನನ್ನ ಬದುಕು. ನಾನು ಹುಟ್ಟು ಕನ್ನಡ ಪ್ರೇಮಿ. ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ಸಾರ್ವತ್ರಿಕ ಜೀವನ ಪ್ರಾರಂಭಿಸಿದ್ದ ನಾನು ಅಲ್ಲಿಂದ ಇಲ್ಲಿಯ
ವರೆಗೆ ನೆಲ-ಜಲ-ನುಡಿ ಬಗ್ಗೆ ಎಂದೂ ರಾಜಿ ಮಾಡಿಕೊಂಡಿಲ್ಲ, ರಾಜಕೀಯ ವನ್ನೂ ಮಾಡಿಲ್ಲ ಎಂದು ಹೇಳಿದರು.
ಮಾನವ ಧರ್ಮ ಧರ್ಮ ಎಂಬುದು ಸಂಕುಚಿತ ಅರ್ಥಕ್ಕೆ ಸೀಮಿತಗೊಳ್ಳದೆ, ಧರ್ಮ- ಮಾನವಧರ್ಮ ಎಂದು ನಂಬಿದ ಪರಂಪರೆ ನಮ್ಮದು. ದೇವರು ಗುಡಿ ಯಲ್ಲಿ ಇಲ್ಲ, ಮನುಷ್ಯನ ಅಂತರಂಗದಲ್ಲಿದ್ದಾನೆ, ದೇಹವೇ ದೇಗುಲ ಎಂದು ವಚನಕಾರರು ಘೋಷಿಸಿದರು. ದೇಹವೇ ದೇವಾಲಯ ಎಂದಾಗ, ಎಲ್ಲ ಮನುಷ್ಯರು ಅವರ ದೇಹವೂ ದೇವನ ಆವಾಸ ಸ್ಥಾನವಾಗುತ್ತದೆ. ಅಲ್ಲಿ ಒಬ್ಬರನ್ನು ಮತ್ತೂಬ್ಬರು ಹಿಂಸಿಸಲು ಅವಕಾಶವಿಲ್ಲ ಎಂದು ಹೇಳಿದರು.
ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್.ಸಿ. ಮಹದೇವಪ್ಪ, ಕಸಾಪ ಅಧ್ಯಕ್ಷ ಡಾ| ಮನು ಬಳಿಗಾರ್, ಸಮ್ಮೇಳನಾಧ್ಯಕ್ಷ ಪ್ರೊ| ಚಂದ್ರಶೇಖರ ಪಾಟೀಲ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ| ಬರಗೂರು ರಾಮಚಂದ್ರಪ್ಪ ಸಹಿತ ಸಚಿವರು, ಶಾಸಕರು, ಚುನಾಯಿತ ಪ್ರತಿನಿಧಿಗಳು ಹಾಗೂ ಹಿರಿಯ ಸಾಹಿತಿಗಳು ಉಪಸ್ಥಿತರಿದ್ದರು.
*ಕೀರ್ತಿ ಕೋಲ್ಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ