ದೂರು ನೀಡಲು ಬಂದ ವಕೀಲನ ವಿರುದ್ಧವೇ ಪ್ರಕರಣ ದಾಖಲು
Team Udayavani, Jan 24, 2018, 12:55 PM IST
ಮೈಸೂರು: ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ವಕೀಲನ ಮೇಲೆ ಹಲ್ಲೆ ನಡೆಸುವ ಜತೆಗೆ ಅವರನ್ನು ಬಂಧಿಸಿ, ಅವರ ಮೇಲೆಯೇ ದೂರು ದಾಖಲಿಸಿರುವುದನ್ನು ಖಂಡಿಸಿ ಮೈಸೂರು ವಕೀಲರ ಸಂಘದ ನೇತೃತ್ವದಲ್ಲಿ ನೂರಾರು ವಕೀಲರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ನಜ‚ರ್ಬಾದ್ ಪೊಲೀಸ್ ಠಾಣೆ ಎದುರು ಜಮಾಯಿಸಿದ ವಕೀಲರು, ಠಾಣೆಗೆ ದೂರು ನೀಡಲು ತೆರಳಿದ್ದ ವಕೀಲನ ಮೇಲೆ ಹಲ್ಲೆ ನಡೆಸಿ, ಬಂಧಿಸಿರುವ ಪೊಲೀಸರ ವಿರುದ್ಧ ದೂರು ದಾಖಲಿಸಿ, ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸುವ ಮೂಲಕ ಪೊಲೀಸರ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು.
ಇದಕ್ಕೂ ಮುನ್ನಾ ಕಲಾಪ ಬಹಿಷ್ಕರಿಸಿದ ವಕೀಲರು ನ್ಯಾಯಾಲಯದ ಆವರಣದಿಂದ ನಜರ್ಬಾದ್ ಪೊಲೀಸ್ ಠಾಣೆವರೆಗೆ ಬೈಕ್ರ್ಯಾಲಿ ನಡೆಸಿದರು. ಪ್ರತಿಭಟನೆಯಲ್ಲಿ ಮೈಸೂರು ವಕೀಲರ ಸಂಘದ ಅಧ್ಯಕ್ಷ ಬಿ.ವಿ.ರಾಮಮೂರ್ತಿ, ಉಪಾಧ್ಯಕ್ಷ ಪ್ರಭು, ಕಾರ್ಯದರ್ಶಿ ಸುರೇಶ್ ಮತ್ತಿತರರು ಭಾಗವಹಿಸಿದ್ದರು.