Nagarhole ಕಾದಾಟದಲ್ಲಿ ಹೆಣ್ಣು ಹುಲಿ ಮರಿ ಮೃತ್ಯು
Team Udayavani, Jun 13, 2023, 7:10 AM IST
ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿರುವ ಹುಲಿಗಳ ಕಾದಾಟದಲ್ಲಿ ಹೆಣ್ಣು ಹುಲಿ ಮರಿಯೊಂದು ಮೃತಪಟ್ಟಿದೆ ಎಂದು ಹುಲಿ ಯೋಜನೆ ಕ್ಷೇತ್ರ ನಿರ್ಧೆಶಕ ಹರ್ಷಕುಮಾರ್ ಚಿಕ್ಕ ನರಗುಂದ ತಿಳಿಸಿದ್ದಾರೆ.
ಉದ್ಯಾನದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯ ಕಬಿಸಿ-ತರಿಕಿಹಳ್ಳ ಅರಣ್ಯ ಪ್ರದೇಶದಲ್ಲಿ ಭಾನುವಾರ ಸಂಜೆ 6.30ರ ಸಮಯದಲ್ಲಿ ಸಿಬಂದಿಗಳು ಎಂದಿನಂತೆ ಗಸ್ತು ನಡೆಸುತ್ತಿರುವಾಗ ಹುಲಿಯು ಸತ್ತು ಬಿದ್ದಿರುವುದು ಕಂಡುಬಂತು. ಮೇಲ್ನೋಟಕ್ಕೆ ಹುಲಿಯ ದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿರುವುದನ್ನು ಮೇಲಾಧಿಕಾರಿಗಳಿಗೆ ಗಮನಕ್ಕೆ ತರಲಾಗಿ ರಾತ್ರಿಯೇ ಎಸಿಎಫ್ ರಂಗಸ್ವಾಮಿ, ವಲಯ ಅರಣ್ಯಾಧಿಕಾರಿ ಕೆ.ಎಲ್.ಮಧು ಭೇಟಿ ಇತ್ತು ಪರಿಶೀಲಿಸಿ, ರಾತ್ರಿಯಾದ್ದರಿಂದ ಹುಲಿಯ ಮೃತದೇಹವನ್ನ ಸ್ಥಳದಲ್ಲಿ ಯತಾಸ್ಥಿತಿಯಲ್ಲಿ ಇರಿಸಿ, ಸಿಬಂದಿ ಕಾವಲು ಇರಿಸಲಾಗಿತ್ತು.
ಸೋಮವಾರದಂದು ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಹರ್ಷಕುಮಾರ್ ಚಿಕ್ಕ ನರಗುಂದ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕ ಎಂ.ಕನಿಕೋಡಿ ಹಾಗೂ ಎಂ.ಜೆ.ವೆಂಕಟೇಶ್ ಸಮಕ್ಷಮ ಪಶುವೈದ್ಯಾಧಿಕಾರಿಗಳಾದ ಕಂಚಮಳ್ಳಿ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಬಿ.ಬಿ.ಡಾ.ಪ್ರಸನ್ನ, ಮಾದಾಪುರ ಆಸ್ಪತ್ರೆಯ ಡಾ.ಎಂ.ಸಂದೀಪ್, ಮರಣೋಕ್ತರ ಪರೀಕ್ಷೆ ನಡೆಸಲಾಗಿ, ಅಂದಾಜು 15-18ತಿಂಗಳ ಪ್ರಾಯದ ಹೆಣ್ಣು ಹುಲಿ ಮರಿಯಾಗಿದ್ದು, ಹುಲಿಯು ಬೇರೊಂದು ಹುಲಿಯ ಜೊತೆ ಕಾದಾಡಿ ಎಡ ಮುಂಗಾಲಿನ ಮೂಳೆ ಮುರಿದಿದ್ದು, ಹಾಗೂ ಬಲ ಮುಂಗಾಲು ಹಾಗೂ ದೇಹದ ಇತರ ಭಾಗಗಳಲ್ಲಿ ಗಾಯವಾಗಿ ಜ್ವರದಿಂದ ಹಾಗೂ ಹಸಿವಿನಿಂದ ಮೃತಪಟ್ಟಿರುತ್ತದೆ ಎಂದು ದೃಢಪಡಿಸಿರುತ್ತಾರೆ. ಮೃತ ಹುಲಿಯ ಕಳೇಬರವನ್ನು ಸುಡಲಾಗಿರುತ್ತದೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.