ತಿ.ನರಸೀಪುರ ಪುರಸಭೆ ಬಹುತೇಕ ಕಾಂಗ್ರೆಸ್ಗೆ
Team Udayavani, Sep 4, 2018, 11:34 AM IST
ತಿ.ನರಸೀಪುರ: ತಿ.ನರಸೀಪುರ ಪುರಸಭೆಯ 23ವಾರ್ಡ್ಗೆ ನಡೆದ ಚುನಾವಣೆಯಲ್ಲಿ ವಕೀಲ ಪರಮೇಶ್ರ ಪತ್ನಿ ರೂಪಾಶ್ರೀ 8ನೇ ವಾರ್ಡ್ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾದರೆ, ಮತ್ತೂರ್ವ ವಕೀಲ ಮಲ್ಲೇಶ ನಾಯ್ಕರ ಪತ್ನಿ ಪಿಎಚ್ಡಿ ಪದವೀಧರೆ ಎಂ.ಶೋಭಾರಾಣಿ 18 ವಾರ್ಡ್ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾಗಿರುವುದು ವಿಶೇಷ.
ಕಾಂಗ್ರೆಸ್ನ ಹಿರಿಯ ಮುಖಂಡ ಎಂ.ಬಸವಣ್ಣ ಪಕ್ಷದಿಂದ ಟಿಕೆಟ್ ವಂಚಿತರಾಗಿ ತಮ್ಮ ಪತ್ನಿ ಪಾರ್ವತಮ್ಮರನ್ನು 21 ವಾರ್ಡ್ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಕಾಂಗ್ರೆಸ್ನಿಂದ ನಾಗರತ್ನಮ್ಮ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಪರಾಭವಗೊಳಿಸಿದ್ದಾರೆ.
ಪುರಸಭೆ ಅಧ್ಯಕ್ಷ ಸಿ.ಉಮೇಶ್ ಆಲಿಯಾಸ್ ಕನಕಪಾಪು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತರಾಗಿ ಪಕ್ಷೇತರಾಗಿ 22ನೇ ವಾರ್ಡ್ನಿಂದ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಾದಾಮಿಮಂಜು ವಿರುದ್ಧ ಸೋಲನ್ನು ಅನುಭವಿಸಿದ್ದಾರೆ.
ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಲು ನಿರಾಕರಣೆ ಮಾಡಿದ್ದರಿಂದ ಕಾಂಗ್ರೆಸ್ ಮುಖಂಡ ಎನ್.ಕೆ.ಫರೀದ್ ತಮ್ಮ ಪುತ್ರ ಅಹಮ್ಮದ್ ಸದ್ರನ್ನು 5ನೇ ವಾರ್ಡ್ನಿಂದ ಪಕ್ಷೇತರರಾಗಿ ಕಣಕ್ಕಿಳಿಸಿ ಕಾಂಗ್ರೆಸ್ ಅಭ್ಯಥಿಯನ್ನು ಮಣಿಸಿ ವಿಜೇತರಾಗುವ ಮೂಲಕ ಪಕ್ಷಕ್ಕೆ ಸೆಡ್ಡು ಹೊಡೆದಿದ್ದಾರೆ.
ವಾರ್ಡ್ನಂ 7ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಪಿ.ಪುಟ್ಟರಾಜು ಸಾಮಾನ್ಯ ಕ್ಷೇತ್ರವಾಗಿದ್ದ ಪರಿಶಿಷ್ಟ ಜಾತಿಯ ಜೆಡಿಎಸ್ ಅಭ್ಯರ್ಥಿ ತುಂಬಲ ಪ್ರಕಾಶ್ ಮಣಿಸುವ ಮೂಲಕ ವಿಜೇತರಾಗಿದ್ದಾರೆ.ಕಳೆದ ಬಾರಿ ಪುರಸಭೆಯಲ್ಲಿ 11 ಮಂದಿ ಸದಸ್ಯರ ಪೈಕಿ 5 ಸ್ಥಾನ ಕಾಂಗ್ರೆಸ್, ಜೆಡಿಎಸ್ 2, ಪಕ್ಷೇತರ 1, ಕೆಜೆಪಿ 1, ಬಿಜೆಪಿ 2 ಸ್ಥಾನ ಪಡೆದುಕೊಂಡಿದ್ದವು,
ಆದರೆ ಈ ಬಾರಿ ವರುಣಾದ ಆಲಗೂಡು ಗ್ರಾಮ ಪಂಚಾಯಿತಿ ಮತ್ತು ಬೈರಾಪುರ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಗೆ ವಿಲೀನಗೊಂಡು ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ 23 ವಾರ್ಡ್ಗಳಾಗಿ ವಿಂಗಡಣೆಗೊಂಡು ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಲೋಕಸಭಾ ಸದಸ್ಯ ಸಂಸದ ಆರ್.ಧ್ರುವನಾರಾಯಣ್, ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ , ಪಿಕಾರ್ಡ್ ಬ್ಯಾಂಕ್ ಕೆ.ವಜ್ರೆàಗೌಡ, ಮೈಮುಲ್ ರಾಜ್ಯ ನಿರ್ದೇಶಕ ಕೆ.ಸಿ.ಬಲರಾಂ ಅಬ್ಬರ ಪ್ರಚಾರ ನಡೆಸಿದ ಪರಿಣಾಮ ಈ ಬಾರಿ ಕಾಂಗ್ರೆಸ್ 10 ಸ್ಥಾನಗಳಿಸಿದೆ.
ಪಕ್ಷೇತರರಾಗಿ ಸ್ಪರ್ಧಿಸಿ ವಿಜೇತರಾದ ಪೈಕಿ 12ನೇ ವಾರ್ಡ್ನ ವಸಂತಮ್ಮ ಹಾಗೂ 1ನೇ ವಾರ್ಡ್ನ ರೂಪಾಶ್ರೀ ತಮ್ಮ ಬೆಂಬಲ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಬಹುತೇಕ ಪುರಸಭೆಯ ಅಧಿಕಾರಿವನ್ನು ಕಾಂಗ್ರೆಸ್ ಪಕ್ಷ ಹಿಡಿಯುವ ಸಾಧ್ಯತೆ ಹೆಚ್ಚಿದೆ. ಜೆಡಿಎಸ್ ಪರ ಕ್ಷೇತ್ರದ ಶಾಸಕ ಎಂ.ಅಶ್ವಿನ್ಕುಮಾರ್, ವರುಣಾ ಕ್ಷೇತ್ರದ ಮುಖಂಡ ಎಂ.ಎಂ.ಅಭಿಷೇಕ್ ಬಿರುಸಿನ ಮತ ಪ್ರಚಾರ ಮಾಡಿದರಾದರೂ ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಕೇವಲ ಮೂರು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಬಿಜೆಪಿ ಪರ ರಾಜ್ಯ ವಕ್ತಾರ ಭಾಗ್ಯಶ್ರೀಭಟ್, ಮುಖಂಡರಾದ ತೋಟದಪ್ಪ ಬಸವರಾಜು, ಎಸ್.ಶಂಕರ್, ಸೇರಿದಂತೆ ಹಲವು ಮುಖಂಡರು ಪ್ರಚಾರ ನಡೆಸಿದರಾದರೂ ಬಿಜೆಪಿ ಕೂಡ ಕೇವಲ 4 ಸ್ಥಾನಗಳಿಗಷ್ಟೇ ಸೀಮಿತವಾಗಿದೆ. ಉಳಿದಂತೆ ಹಲವು ವಾರ್ಡ್ಗಳಿಗೆ ಪಕ್ಷದಿಂದ ಟಿಕೆಟ್ ವಂಚಿತ ಅಭ್ಯರ್ಥಿಗಳು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.