ಇಂದು, ನಾಳೆ ಬಿಜೆಪಿ ಕಾರ್ಯಕಾರಿಣಿ
Team Udayavani, May 6, 2017, 12:44 PM IST
ಮೈಸೂರು: ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯ ಸೋಲು, ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪನಡುವಿನ ತಿಕ್ಕಾಟ ತಾರಕ್ಕೇರಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಮೈಸೂರಿನಲ್ಲಿ ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ನಡೆಯುತ್ತಿರುವುದು ಹಲವು ರೀತಿಯಲ್ಲಿ ಮಹತ್ವ ಪಡೆದಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಬಿಜೆಪಿ ರಾಜಾÂಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಠಿಸುತ್ತಿರುವ ಮಿಷನ್-150 ಮಂತ್ರ, ಆದರೆ ಯಾವುದೇ ಕಾರಣಕ್ಕೂ 2008ರಂತೆ ರೆಸಾರ್ಟ್ ಸಂಸ್ಕೃತಿಯ ಸರ್ಕಾರ ಬರುವುದು ಬೇಡ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿಕೆಯಿಂದ ಉಂಟಾಗಿರುವ ತಿಕ್ಕಾಟಕ್ಕೆ ಆರೆಸ್ಸೆಸ್ನಿಂದ ಪಕ್ಷ ಸಂಘಟನೆಗೆ ಹೋಗಿರುವ
ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೇ ಕಾರಣರು ಎಂದು ಯಡಿಯೂರಪ್ಪಅವರು ನೇರಾನೇರ ಆರೋಪ ಮಾಡಿದ ಬೆನ್ನಲ್ಲೇ ರಾಜ್ಯ ಉಸ್ತುವಾರಿ ಮುರಳೀಧರರಾವ್ ರಾಜ್ಯಕ್ಕೆ ಬಂದು ತೇಪೆ ಹಚ್ಚಿ ಹೋದ ನಂತರ ಶಿಸ್ತಿನ ಪಕ್ಷದೊಳಗಿನ ಬೇಗುದಿ ತಣ್ಣಗಾಯಿತೆ? ಇಲ್ಲವೇ ಎಂಬುದಕ್ಕೆ ಎರಡು ದಿನಗಳ ಕಾಲ ನಡೆಯಲಿರುವ ರಾಜ್ಯ ಕಾರ್ಯಕಾರಿಣಿಯಲ್ಲಿ ಉತ್ತರ ಸಿಗಲಿದೆ.
ಹಳೇ ಮೈಸೂರಿಗೆ ಲಗ್ಗೆ: ಒಕ್ಕಲಿಗರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ 1999ರ ಚುನಾವಣೆ ನಂತರ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ. 1999ರ ಚುನಾವಣೆಯಲ್ಲಿ 5 ಸ್ಥಾನ ಗೆದ್ದಿದ್ದ ಬಿಜೆಪಿ, 2008ರ ಚುನಾವಣೆಯಲ್ಲಿ ಯಡಿಯೂರಪ್ಪಅವರ ಪರವಾದ ಅಲೆಯ ನಡುವೆಯೂ ಗೆದ್ದಿದ್ದು ಮೈಸೂರು ನಗರದ ಕೃಷ್ಣರಾಜ ಮತ್ತು ಚಾಮರಾಜ ಕ್ಷೇತ್ರಗಳಲ್ಲಷ್ಟೆ. 2013ರ ಚುನಾವಣೆಯಲ್ಲಂತೂ ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ಮಾಡಿದ್ದು ಶೂನ್ಯ ಸಾಧನೆ.
ಹೀಗಾಗಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಲೇ ಬೇಕು ಎಂಬುದನ್ನು ಮನಗಂಡಿರುವ ಯಡಿಯೂರಪ್ಪಅವರು ಉಪಚುನಾವಣೆಯ ಸಂದರ್ಭದಲ್ಲಿ 20 ದಿನಗಳ ಕಾಲ ಇಲ್ಲಿ ವಾಸ್ತವ್ಯ ಹೂಡಿ ಮತದಾರರ ನಾಡಿಮಿಡಿತ ಅರಿಯುವ ಪ್ರಯತ್ನ ಮಾಡಿದ್ದಾರೆ. ಜತೆಗೆ ಉಪ ಚುನಾವಣೆಯಲ್ಲಿ ಸೋತರೂ ಈ ಭಾಗದ ಪ್ರಭಾವಿ ದಲಿತ ನಾಯಕರಾಗಿರುವ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರನ್ನು ರಾಜ್ಯಕಾರ್ಯಕಾರಿಣಿ ಬೆನ್ನಲ್ಲೇ ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ದಲಿತ ಮತಬ್ಯಾಂಕ್ಗೆ ಕೈ ಹಾಕುವ ತಂತ್ರವನ್ನೂ ಮಾಡಿದ್ದಾರೆ.
ಮುಂದಿನ 10 ತಿಂಗಳಲ್ಲಿ ಎದುರಾಗಲಿರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಾದ ಸವಾಲಿರುವುದರಿಂದ ಈ ಕಾರ್ಯಕಾರಿಣಿ ಭಾರಿ ಮಹತ್ವ ಪಡೆದಿದೆ. ಮೈಸೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ನಡೆಯುತ್ತಿರುವುದು ಇದೇ ಮೊದಲೇನಲ್ಲ ಜ.ನಾ.ಕೃಷ್ಣಮೂರ್ತಿ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೂ ಒಮ್ಮೆ ರಾಜ್ಯ ಕಾರ್ಯಕಾರಿಣಿ ನಡೆದಿದೆ. ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ನಂತರ ನಡೆಯುತ್ತಿರುವ ಪ್ರಥಮ ಕಾರ್ಯಕಾರಿಣಿ ಇದು.
ಸಿದ್ಧತೆ ಪೂರ್ಣ: ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಕಲಾಮಂದಿರದಲ್ಲಿ ಮೇ 6 ಹಾಗೂ 7ರಂದು ಎರಡು ದಿನಗಳ ಕಾಲ ನಡೆಯಲಿರುವ ರಾಜ್ಯ ಕಾರ್ಯಕಾರಿಣಿಗೆ ಸಿದ್ಧತೆ ಪೂರ್ಣಗೊಂಡಿದೆ. ರಾಜೇಂದ್ರ ಕಲಾಮಂದಿರದ ಒಳಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಎದುರುಗಡೆ ಪ್ರತಿನಿಧಿಗಳಿಗಾಗಿ 11 ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಕಲಾಮಂದಿರದ ಹೊರ ಆವರಣದಲ್ಲಿ ವೈದ್ಯಕೀಯ ಕೇಂದ್ರ, ಪ್ರವಾಸಿ ಕೇಂದ್ರ, ಸಾಹಿತ್ಯ ಮಾರಾಟ ಮಳಿಗೆ ತೆರೆಯಲಾಗಿದೆ.
650 ಮಂದಿ ಭಾಗಿ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪಅಧ್ಯಕ್ಷತೆಯಲ್ಲಿ ನಡೆಯಲಿರುವ ರಾಜ್ಯಕಾರ್ಯಕಾರಣಿಗೆ ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್ ಶನಿವಾರ ಚಾಲನೆ ನೀಡಲಿದ್ದಾರೆ. ಸಹ ಉಸ್ತುವಾರಿ ಡಿ. ಪುರಂದೇಶ್ವರಿ, ಕೇಂದ್ರ ಸಚಿವರಾದ ನಿರ್ಮಲ ಸೀತಾರಾಮನ್, ಅನಂತಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ಜಿಗಜಿಣಗಿ ಉಪಸ್ಥಿತರಿರುತ್ತಾರೆ. ಕಾರ್ಯಕಾರಿಣಿ ಸದಸ್ಯರಾದ ಲೋಕಸಭೆ ಹಾಗೂ ರಾಜ್ಯಸಭಾ ಸದಸ್ಯರು, ವಿಧಾಸಭೆ- ವಿಧಾನ ಪರಿಷತ್ ಸದಸ್ಯರು, ರಾಜ್ಯಘಟಕದ ಪದಾಧಿಕಾರಿಗಳು,ವಿಶೇಷ ಆಹ್ವಾನಿತರು ಸೇರಿ ಒಟ್ಟು 650 ಮಂದಿ ಭಾಗವಹಿಸಲಿದ್ದಾರೆ.
350 ಕೊಠಡಿ ವ್ಯವಸ್ಥೆ: ಎರಡು ದಿನಗಳ ಕಾಲ ನಡೆಯುವ ಕಾರ್ಯಕಾರಿಣಿಯಲ್ಲಿ ಭಾಗವಹಿಸುವ ಸದಸ್ಯರ ವಾಸ್ತವ್ಯಕ್ಕಾಗಿ ನಗರದ ತಾರಾ ಹೋಟೆಲ್ಗಳಾದ ಹೋಟೆಲ್ ರ್ಯಾಡಿಸನ್ ಬ್ಲೂ, ಆಲಿವ್ ಗಾರ್ಡನ್, ರುಚಿ ದಿ ಪ್ರಿನ್ಸ್, ಸದರನ್ ಸ್ಟಾರ್, ಕಿಂಗ್ಸ್ಕೋರ್ಟ್, ಪ್ರಸಿಡೆಂಟ್, ವೈಸ್ರಾಯ್ ಮೊದಲಾದ ಹೋಟೆಲ್ಗಳಲ್ಲಿ ಈಗಾಗಲೇ 350 ಕೊಠಡಿ ಕಾದಿರಿಸಲಾಗಿದೆ.
ಮೈಸೂರು ಶೈಲಿಯ ಊಟ: ಬಿ.ಎಸ್.ಯಡಿಯೂರಪ್ಪಶಿಷ್ಯ ಕಾ.ಪು.ಸಿದ್ದಲಿಂಗಸ್ವಾಮಿ ಅವರ ಆಹಾರ ಸಮಿತಿಯ ಜವಾಬ್ದಾರಿ ವಹಿಸಲಾಗಿದ್ದು, ದಕ್ಷಿಣ, ಉತ್ತರ ಹಾಗೂ ಕರಾವಳಿ ಕರ್ನಾಟಕ ಶೈಲಿಯ ಊಟದ ಬದಲಿಗೆ ಸಂಪೂರ್ಣ ಮೈಸೂರು ಶೈಲಿಯ ಊಟವನ್ನೇ ಉಣಬಡಿಸಲು ತಯಾರಿ ನಡೆದಿದೆ. ಬೆಳಗ್ಗೆ ಇಡ್ಲಿ, ದೋಸೆ, ಉಪ್ಪಿಟ್ಟು, ಸಿಹಿ ಪೊಂಗಲ್, ಮದ್ದೂರು ವಡೆ, ಮಧ್ಯಾಹ್ನ ಐದು ಬಗೆಯ ಪಲ್ಯ, ಮೈಸೂರು ಪಾಕ್, ಹೋಳಿಗೆ, ಮುದ್ದೆ, ಅನ್ನ ,ಸಾಂಬಾರ್, ರಸಂ, ಮೊಸರು, ರಾತ್ರಿ ವೇಳೆ ರೊಟ್ಟಿ, ಚಪಾತಿ ಸೇರಿ ಇನ್ನಿತರ ರುಚಿಯಾದ ಊಟ ಬಡಿಸಲು ಸಿದ್ಧತೆ ಭರದಿಂದ ಸಾಗಿದೆ.
ಸಿರಿಧಾನ್ಯ ಬಳಕೆ: ಮೈಸೂರಿನ ಸಾಂಪ್ರದಾಯಿಕ ಶೈಲಿ ಊಟದ ಜತೆಗೆ, ಸಿರಿಧಾನ್ಯಗಳನ್ನು ಬಳಸಿ ಅಡುಗೆ ಸಿದ್ಧಪಡಿಸುತ್ತಿರುವುದು ಮತ್ತೂಂದು ವಿಶೇಷ. ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಲಾಮಂದಿರದ ಹೊರಗೆ ಪ್ರತ್ಯೇಕ ಮಳಿಗೆಯನ್ನೂ ತೆರೆಯಲಾಗುತ್ತಿ¤ದೆ. ಊಟದಲ್ಲಿ ಸಿರಿಧಾನ್ಯಗಳಾದ ನವಣೆ, ಸಜ್ಜೆ ಪಾಯಸ ನೀಡುವ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿಧಿಗಳ ಸ್ವಾಗತ, ವಸತಿ, ಊಟೋಪಚಾರ ವ್ಯವಸ್ಥೆ ವಿಭಾಗ ಸೇರಿದಂತೆ ಇನ್ನಿತರ ವಿಭಾಗಗಳಿಗೆ ಪ್ರಬಂಧಕರನ್ನು ನಿಯೋಜಿಸಲಾಗಿದೆ. ಕಾರ್ಯಕಾರಿಣಿ ಮುಗಿದ ನಂತರ ಚಾಮುಂಡಿಬೆಟ್ಟ ಸೇರಿದಂತೆ ಮೈಸೂರಿನ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಅನುಕೂಲವಾಗುವಂತೆ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಲಾಗಿದೆ.
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ