ಗತವೈಭವ ಸೃಷ್ಟಿಸಿದ ವಿಂಟೇಜ್ ಕಾರು ರ್ಯಾಲಿ
Team Udayavani, Oct 1, 2018, 11:45 AM IST
ಮೈಸೂರು: ಯದುವಂಶದ ಅರಸರ ಆಳ್ವಿಕೆಗೆ ಸಾಕ್ಷಿಯಾಗಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಭಾನುವಾರ ನಡೆದ ಆಕರ್ಷಕ ವಿಂಟೇಜ್ ಕಾರುಗಳ ರ್ಯಾಲಿ ಹಾಗೂ ಪ್ರದರ್ಶನ ನಗರದ ಜನತೆಗೆ ಗತ ವೈಭವವನ್ನು ನೆನಪಿಸಿತು.
ನಾಡಹಬ್ಬ ದಸರೆ ಅಂಗವಾಗಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ವಿಂಟೇಜ್ ಕಾರು ಪ್ರದರ್ಶನ ಎಲ್ಲರ ಕಣ್ಮನ ಸೆಳೆಯಿತು. ಮೋತಿಲಾಲ್ ನೆಹರೂ ಹಾಗೂ ಹಲವು ರಾಜಮಹಾರಾಜರು ಬಳಸಿದ ಆಕರ್ಷಕ ಕಾರುಗಳು ನಗರದ ರಸ್ತೆಗಳಲ್ಲಿ ಸಂಚರಿಸಿ ಎಲ್ಲರ ಗಮನ ಸೆಳೆದವು.
ಪ್ರತಿನಿತ್ಯ ಒಂದಿಲ್ಲೊಂದು ಬಗೆಯ ಹೊಸ ಮಾದರಿಯ ಕಾರು ನೋಡುತ್ತಿದ್ದ ಜನತೆ, ಹಳೆಯ ವಿಂಟೇಜ್ ಕಾರುಗಳನ್ನು ಕಂಡು ಪುಳಕಿತರಾದರು. ನಗರದಲ್ಲಿ ವಿಂಟೇಜ್ ಕಾರ್ ರ್ಯಾಲಿಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ವಿಂಟೇಜ್ ಕಾರಿನಲ್ಲಿ ಕುಳಿತು ಲಲಿತಮಹಲ್ ಅರಮನೆ ಸುತ್ತ ಸಂಚರಿಸಿದರು.
ಕುತೂಹಲದಿಂದ ಕಾದರು: ಬೆಂಗಳೂರಿನ ವಿಧಾನಸೌಧದಿಂದ ಆರಂಭಗೊಂಡ ವಿಂಟೇಜ್ ಕಾರ್ ರ್ಯಾಲಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಿದರು. ಸತತ 5 ಗಂಟೆಗಳ ಪ್ರಯಣದ ನಂತರ 50 ವಿಂಟೇಜ್ ಕಾರುಗಳು ಸಂಜೆ 4 ಗಂಟೆಗೆ ಮೈಸೂರಿನ ಲಲಿತಮಹಲ್ ಪ್ಯಾಲೆಸ್ಗೆ ಆಗಮಿಸಿತು.
ಆದರೆ ಲಲಿತಮಹಲ್ ಪ್ಯಾಲೆಸ್ನಲ್ಲಿ ವಿಂಟೇಜ್ ಕಾರುಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರವೇಶಕ್ಕೆ ನಿರ್ಬಂಧಿಸಿದ್ದ ಹಿನ್ನೆಲೆಯಲ್ಲಿ ನೂರಾರು ಮಂದಿ ಹೊರಭಾಗದ ರಸ್ತೆಯಲ್ಲಿ ಹಳೆಯ ಕಾರುಗಳ ಅಂದ ಕಣ್ತುಂಬಿಕೊಳ್ಳಲು ಕುತೂಹಲದಿಂದ ಕಾದು ಕುಳಿತಿದ್ದರು.
ಬಳಿಕ ನಗರದ ಲಲಿತಮಹಲ್ ಪ್ಯಾಲೆಸ್ನಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಾರುಗಳು ವಿಶ್ವವಿಖ್ಯಾತ ಅರಮನೆ ಆವರಣಕ್ಕೆ ತೆರಳಿತು. ಈ ವೇಳೆ ರಸ್ತೆಯುದ್ದಕ್ಕೂ ನಿಂತಿದ್ದ ಸಾರ್ವಜನಿಕರು ವಿಂಟೇಜ್ ಕಾರುಗಳನ್ನು ಕಂಡು ಖುಷಿಪಟ್ಟರು.
ಅರಮನೆಯಲ್ಲಿ ಪ್ರದರ್ಶನ: ಲಲಿತಮಹಲ್ ಪ್ಯಾಲೆಸ್ನಿಂದ ಹೊರಟ ವಿಂಟೇಜ್ ಕಾರುಗಳನ್ನು ಅರಮನೆ ಆವರಣದಲ್ಲಿ ಸಾರ್ವಜನಿಕರ ಪ್ರದರ್ಶನಕ್ಕಿಡಲಾಗಿತ್ತು. ಸಂಜೆ ವೇಳೆ ಅರಮನೆ ವೀಕ್ಷಣೆಗೆಂದು ಆಗಮಿಸಿದ್ದ ಜನರು ಹಲವು ವರ್ಷಗಳ ಇತಿಹಾಸವಿರುವ ಹಳೆಯ ಕಾರುಗಳನ್ನು ಕಂಡು ಸಂಭ್ರಮಿಸಿದರು.
ಅಲ್ಲದೆ ಅವುಗಳ ಅಂದ-ಚೆಂದಕ್ಕೆ ಮನಸೋತ ಸಾರ್ವಜನಿಕರು, ಕಾರುಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡರು. ವಿಂಟೇಜ್ ಕಾರು ರ್ಯಾಲಿಯಲ್ಲಿ ಶ್ರೀಲಂಕಾದ 9 ಕಾರುಗಳು, ಇಂಗ್ಲೆಂಡ್ನ 1 ಕಾರು ಭಾಗವಹಿಸಿತ್ತು. ಅಲ್ಲದೆ ಗೋವಾ, ಲಕ್ನೋ, ಜೈಪುರದ ರಾಜಮನೆತನದವರು ವಿಂಟೇಜ್ ಕಾರುಗಳೊಂದಿಗೆ ಆಗಮಿಸುವ ಮೂಲಕ ಕಾರ್ ರ್ಯಾಲಿಗೆ ಮೆರಗು ನೀಡಿದರು.
ಮೋತಿಲಾಲ್ ನೆಹರೂ ಕಾರು: ವಿಂಟೇಜ್ ಕಾರ್ ರ್ಯಾಲಿಯಲ್ಲಿ ಒಟ್ಟು 50 ಕಾರುಗಳು ಭಾಗವಹಿಸಿದ್ದವು. ಈ ಪೈಕಿ ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರೂ ತಂದೆ ಮೋತಿಲಾಲ್ ನೆಹರೂ ಬಳಸುತ್ತಿದ್ದ 1928 ಮಾಡೆಲ್ನ “ಲಾಂಚೆಸ್ಟರ್ ಸ್ಟ್ರೀಟ್-8′ ಕಾರು ಎಲ್ಲರ ಗಮನ ಸೆಳೆಯಿತು. ಮೋತಿಲಾಲ್ ನೆಹರೂ ಈ ಕಾರನ್ನು ಮದ್ರಾಸ್ ಗವರ್ನರ್ ಜನರಲ್ಗೆ ಮಾರಾಟ ಮಾಡಿದರು.
ಗವರ್ನರ್ ಜನರಲ್ ಕೆಲವು ವರ್ಷಗಳ ಕಾಲ ಬಳಕೆ ಮಾಡಿ ಕೈಗಾರಿಕೋದ್ಯಮಿಯೊಬ್ಬರಿಗೆ ಮಾರಾಟ ಮಾಡಿದರು. ಕೈಗಾರಿಕೋದ್ಯಮಿ ಪ್ರಸ್ತುತ “ಲಾಂಚೆಸ್ಟರ್ ಸ್ಟ್ರೀಟ್-8’ನ ಮಾಲಿಕರಾಗಿರುವ ಡಾ. ರವಿಪ್ರಕಾಶ್ ಸ್ನೇಹಿತನಿಗೆ ಮಾರಾಟ ಮಾಡಿದ್ದು, ರವಿ ಪ್ರಕಾಶ್ ತಮ್ಮ ಸ್ನೇಹಿತನಿಂದ 1996ರಲ್ಲಿ ಈ ಕಾರು ಖರೀದಿಸಿದರು.
ಇಂದು ಗಜಪಡೆಯೊಂದಿಗೆ ವಿಂಟೇಜ್ ಕಾರು: ದಸರಾ ಜಂಬೂಸವಾರಿಗೆ ತಾಲೀಮು ನಡೆಸುತ್ತಿರುವ ಅಂಬಾರಿ ಆನೆ ಅರ್ಜುನ ನೇತೃತ್ವದ ಗಜಪಡೆಯೊಂದಿಗೆ ಇಂದು ವಿಂಟೇಜ್ ಕಾರ್ ರ್ಯಾಲಿ ನಡೆಯಲಿದೆ.
ವಿಂಟೇಜ್ ಕಾರ್ ರ್ಯಾಲಿ ಹಿನ್ನೆಲೆಯಲ್ಲಿ ನಗರಕ್ಕೆ ತರಲಾಗಿರುವ ಕೆಲವು ವಿಂಟೇಜ್ ಕಾರುಗಳನ್ನು ದಸರಾ ಆನೆಗಳ ತಂಡದ ಜತೆಗೆ ಅಂಬಾವಿಲಾಸ ಅರಮನೆಯಿಂದ ಬನ್ನಿಮಂಟಪದವರೆಗೆ ಮೆರವಣಿಗೆ ಮೂಲಕ ತೆರಳಲಿವೆ. ನಂತರ ಚಾಮುಂಡಿಬೆಟ್ಟಕ್ಕೆ ತೆರಳುವ ವಿಂಟೇಜ್ ಕಾರುಗಳು ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬೆಂಗಳೂರಿಗೆ ಹಿಂತಿರುಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ