ಶಾಲೆಗೆ ಬಂದ ಮಕ್ಕಳಿಗೆ ಪ್ರೀತಿಯ ಸ್ವಾಗತ
ಶಾಲಾ ಆವರಣದಲ್ಲಿ ತಳಿರು ತೋರಣ, ಬಣ್ಣದ ರಂಗೋಲಿ
Team Udayavani, Aug 24, 2021, 4:18 PM IST
ಮೈಸೂರು: ಸತತ ಆರು ತಿಂಗಳ ಬಳಿಕ ಶಾಲೆ ಆರಂಭವಾದ ಹಿನ್ನೆಲೆ ಶಾಲಾ ಆವರಣದಲ್ಲಿ ತಳಿರು ತೋರಣ, ಬಣ್ಣ ಬಣ್ಣದ ರಂಗೋಲಿ, ಶಿಕ್ಷಕರಿಂದ ಪ್ರೀತಿಯ ಸ್ವಾಗತ ಈ ಎಲ್ಲವು ಮಕ್ಕಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದ್ದವು.
ಕೋವಿಡ್ದಿಂದಾಗಿ ಹಲವು ತಿಂಗಳ ಬಳಿಕ ಸೋಮ ವಾರದಿಂದ 9ನೇ ತರಗತಿ ಮೇಲ್ಪಟ್ಟ ಭೌತಿಕ ತರಗತಿಗಳು ಕೋವಿಡ್ ಸುರಕ್ಷತ ಕ್ಷಮ ಗಳೊಂದಿಗೆ ಆರಂಭವಾದವು. ಬೆಳಗ್ಗೆಯೇ ಎಲ್ಲಾ ಪ್ರೌಢಶಾಲೆಗಳು ಮದುವಣಗಿತ್ತಿಯಂತೆ ತಳಿರು ತೋರಣ, ವಿಶೇಷ ರಂಗೋಲಿಯಿಂದ
ಸಿಂಗಾರಗೊಂಡು ಮಕ್ಕಳನ್ನು ಸ್ವಾಗತಿಸಿಕೊಳ್ಳಲು ಅಣಿಯಾಗಿದ್ದವು. ಶಾಲೆ ಪ್ರವೇಶಿಸಿದ ವಿದ್ಯಾರ್ಥಿಗಳಿಗೆ ಸಂಘ ಸಂಸ್ಥೆಗಳು, ಜನಪ್ರತಿನಿಧಿ ಗಳು ಹಾಗೂ ಶಿಕ್ಷಕರು ಪುಸ್ತಕ, ಹೂ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು.
ಬಳಿಕ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಪಾಲಿಸುವುದು, ಅನಾರೋಗ್ಯ ಲಕ್ಷಣಗಳಿದ್ದರೆ ತಿಳಿಸಬೇಕು ಎಂಬಿತ್ಯಾದಿ ಸಲಹೆ ನೀಡಿದ ಬಳಿಕ ಎಲ್ಲಾ ವಿದ್ಯಾರ್ಥಿಗಳಿಂದ ಪೋಷಕರ ಅನುಮತಿ ಪತ್ರವನ್ನು ಶಿಕ್ಷಕರು ಪಡೆದುಕೊಂಡರು.
ಶೇ.50 ಹಾಜರಾತಿ: ಆರು ತಿಂಗಳ ಬಳಿಕ ಆರಂಭವಾದ 9, 10ನೇ ತರಗತಿಗೆ ಶೇ.50 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ಮೂಲಕ ಭೌತಿಕ ತರಗತಿಯಲ್ಲಿ ಕುಳಿದು ಪಾಠ ಪ್ರವಚನ ಆಲಿಸಿದರು. ಈ ವೇಳೆ ಸಾಮಾಜಿಕಅಂತರ ಕಾಯ್ದುಕೊಳ್ಳುವ ಸಲುವಾಗಿ ಎರಡು ಅಂತರದಂತೆ ಡೆಸ್ಕ್ ಜೋಡಿಸಿ, ಕೊಠಡಿಯಲ್ಲಿ 15ರಿಂದ 20 ವಿದ್ಯಾರ್ಥಿಗಳುಕೂರುವ ವ್ಯವಸ್ಥೆಕಲ್ಪಿಸಲಾಗಿತ್ತು.
ಇದನ್ನೂ ಓದಿ:ಸಪ್ಟೆಂಬರ್ 1 ರಿಂದ ನೆರೆಯ ರಾಜ್ಯಗಳಿಗೆ ಕದಂಬ ಬಸ್ ಓಡಾಟ
ಹಸಿರು ಚಪ್ಪರ: ನಗರದ ಸೆಂಟ್ ಮೇರಿಸ್ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಲಾಯಿತು. ಶಾಲಾ ಪ್ರವೇಶ ದ್ವಾರದಲ್ಲಿ ಮಾವಿನ ಸೊಪ್ಪು, ಬಾಳೆ ಕಂದು ಕಟ್ಟಿ, ಬಣ್ಣ ಬಣ್ಣದ ರಂಗೋಲಿ ಬಿಡಿಸಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು. ಜೊತೆಗೆ ಮೈಸೂರಿನ ಮರಿಮಲ್ಲಪ್ಪ, ಮಹಾರಾಜ ಪ್ರೌಢಶಾಲೆ, ಸದ್ವಿದ್ಯಾ ಹೈಸ್ಕೂಲ್, ನಿರ್ಮಲಾ ಕಾನ್ವೆಂಟ್, ಸೈಂಟ್ ಮೇರಿಸ್ ಸೇರಿದಂತೆ ಹಲವು ಶಾಲೆಗಳಲ್ಲಿ ಶೇ. 60ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಹಾಜರಾದರು.
ಸಹಪಾಠಿಗಳೊಂದಿಗೆ ಪೂರಿ ಸವಿದರು: ಒಂದೂವರೆ ವರ್ಷದ ಬಳಿಕ ನಗರ ಬಸ್ ನಿಲ್ದಾಣ, ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳ ಓಡಾಟ ಕಂಡುಬಂದಿತು. ಇದರಿಂದ ರಸ್ತೆ ಬದಿಯ ತಂಡಿ, ತಿನಿಸು ಮಾರುವ ಸ್ಥಳಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸಹಪಾಠಿಗೊಳಂದಿಗೆ ಹರಟುತ್ತಾ ಗೋಲ್ಕೊಪ್ಪ, ಮಸಾಲ ಪೂರಿ, ಚುರುಮುರಿ ಸವಿದ ದೃಶ್ಯಗಳುಕಂಡು ಬಂದಿತು.
9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನಸಂಖ್ಯೆಯಲ್ಲಿ ಶಾಲೆಗೆ ಬಂದಿದ್ದಾರೆ. ಮೊದಲ ದಿನ ಯಾವುದೇ ತೊಂದರೆ ಇಲ್ಲದೇ ಮಧ್ಯಾಹ್ನದವರೆಗಿನ ತರಗತಿಗಳು ನಡೆದಿವೆ. ನಗರದಕೆಲವು ಶಾಲೆಗಳಿಗೆ ಭೇಟಿ ನೀಡಿದಾಗ ಹಬ್ಬದ ವಾತಾವರಣ ಕಂಡು ಬಂದಿತು. ಕೋವಿಡ್ ಮಾರ್ಗಸೂಚಿ ಅನುಸರಿಸಿ ತರಗತಿ ನಡೆಸಲಾಗುತ್ತಿದೆ. ಜೊತೆಗೆ ಎಲ್ಲಾ ಸುರಕ್ಷಾಕ್ರಮ ಕೈಗೊಳ್ಳಲಾಗಿದೆ.
-ರಾಮಚಂದ್ರರಾಜೇ ಅರಸ್, ಡಿಡಿಪಿಐ