ಸರಕಾರದ ಆದೇಶ ತಪ್ಪದೇ ಪಾಲಿಸಿ
Team Udayavani, Apr 24, 2020, 3:47 PM IST
ಚಿಂಚೋಳಿ: ಶಾಂತಿ ಸಭೆಯಲ್ಲಿ ಡಿವೈಎಸ್ಪಿ ಇ.ಎಸ್.ವೀರಭದ್ರಯ್ಯ ಮಾತನಾಡಿದರು
ಚಿಂಚೋಳಿ: ದೇಶದಲ್ಲಿ ಹಬ್ಬಿರುವ ಕೋವಿಡ್ ವೈರಸ್ ಹರಡುವಿಕೆಯನ್ನು ತಡೆಗಟ್ಟುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಹೊರಡಿಸಿರುವ ಆದೇಶಗಳನ್ನು ಸಾರ್ವಜನಿಕರು ತಪ್ಪದೇ ಕಡ್ಡಾಯವಾಗಿ ಪಾಲಿಸಬೇಕು. ಬಸವ ಜಯಂತಿ ಮತ್ತು ರಂಜಾನ್ ಹಬ್ಬವನ್ನು ಸರಳವಾಗಿ ಅಚರಿಸಬೇಕು ಎಂದು ಡಿವೈಎಸ್ಪಿ ಇ.ಎಸ್.ವೀರಭದ್ರಯ್ಯ ಸೂಚನೆ ನೀಡಿದರು.
ಗಡಿಕೇಶ್ವರ, ಸುಲೇಪೇಟ ಮತ್ತು ಚಿಂಚೋಳಿ ಪಟ್ಟಣದಲ್ಲಿ ಬಸವ ಜಯಂತಿ ಮತ್ತು ರಂಜಾನ್ ಪ್ರಯುಕ್ತ ಹಣ್ಣಿನ ವ್ಯಾಪಾರಿ, ಕಿರಾಣಿ ವರ್ತಕರು ಮತ್ತು ಬೇಕರಿ, ತರಕಾರಿ ವ್ಯಾಪಾರಿಗಳಿಗೆ ಏರ್ಪಡಿಸಿದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಬಸವಾಭಿಮಾನಿಗಳು ಮನೆಯಲ್ಲೇ ಬಸವಣ್ಣನ ಫೋಟೋ ಇಟ್ಟು ಭಕ್ತಿ ಅರ್ಪಿಸಬೇಕು. ಬಸವಣ್ಣನವರ ಮೂರ್ತಿಗೆ ಕೇವಲ ನಾಲ್ವರು ಸೇರಿ ಪೂಜೆ, ಪುನಸ್ಕಾರ ಮಾಡಬೇಕು. ಹೆಚ್ಚು ಜನ ಸೇರಬಾರದು. ರಂಜಾನ್ ಹಬ್ಬದ ಉಪವಾಸ ದಿನಗಳು ಪ್ರಾರಂಭ ಆಗುವುದರಿಂದ ಯಾರು ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬಾರದು. ಮನೆಗಳಲ್ಲಿಯೇ ಪ್ರಾರ್ಥಿಸಬೇಕು. ವರ್ತಕರು ಬೇಕಾಬಿಟ್ಟಿಯಾಗಿ ದರಗಳಿಂದ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಅಂತಹವರ ಪರವಾನಗಿ ರದ್ದುಪಡಿಸಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದರು.
ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ಸಿಪಿಐ ಎಚ್.ಎಂ. ಇಂಗಳೇಶ್ವರ, ಮುಖ್ಯಾಧಿಕಾರಿ ಅಭಯಕುಮಾರ ಕೋವಿಡ್ ವೈರಸ್ ಹರಡುವಿಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಜಿಪಂ ಸದಸ್ಯ ಗೌತಮ್ ಪಾಟೀಲ, ಸುಭಾಶ ಸೀಳಿನ, ಮಹಾರುದ್ರಪ್ಪ ದೇಸಾಯಿ, ಬಸವರಾಜ ಸಜ್ಜನಶೆಟ್ಟಿ, ಅಜಿತ್ ಪಾಟಿಲ, ಸಂತೋಷ ಗಡಂತಿ,ನಿರಾಶೆ ಬ್ರದರ್ಸ್, ಮೋಮಿನ ಪಾಷಾ, ಶ್ರೀಕಾಂತ ಸುಂಕದ, ರಮೇಶ ಬೇಕರಿ ಇನ್ನಿತರಿದ್ದರು.