ಕಾಂಗ್ರೆಸ್ ಈಗ ಮೂರು ಬಾಗಿಲ ಮನೆ: ಈಶ್ವರಪ್ಪ
Team Udayavani, Dec 15, 2017, 7:20 AM IST
ಮಾನ್ವಿ: ಕಾಂಗ್ರೆಸ್ ಈಗ ಮೂರು ಬಾಗಿಲು ಇರುವ ಮನೆಯಂತಾಗಿದೆ. ಶ್ಯಾಮನೂರು ಶಿವಶಂಕರಪ್ಪ, ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಮೂವರು ಒಂದೊಂದು ದಿಕ್ಕಿಗೆ ಪಕ್ಷವನ್ನು ಎಳೆಯುತ್ತಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.
ನಗರದಲ್ಲಿ ಗುರುವಾರ ನಡೆದ ನವ ಕರ್ನಾಟಕ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರ ನಾಟಕೀಯ ರಾಜಕಾರಣವನ್ನು ಜನರು ಒಪ್ಪುವುದಿಲ್ಲ. ನರೇಂದ್ರ ಮೋದಿಯವರಿಗೆ ತಮ್ಮನ್ನು ಕಂಡರೆ ಭಯ ಎಂದು ಹೇಳಿಕೊಂಡು ಜಂಬ ಕೊಚ್ಚಿಕೊಳ್ಳುತ್ತಿರುವ ಸಿದ್ದರಾಮಯ್ಯ, ಇಲಿ ಇದ್ದಂತೆ. ಪ್ರಧಾನಿ ಮೋದಿ ಹುಲಿ ಇದ್ದಂತೆ.
ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಬಿಂಬಿಸುತ್ತಿರುವ ಕಾಂಗ್ರೆಸ್ ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿದೆ. ರಾಜ್ಯದಲ್ಲಿ ಹಿಂದೂಗಳ ಕಗ್ಗೊಲೆ ನಡೆಯುತ್ತಿದೆ. ಒಗ್ಗಟ್ಟಾಗಿದ್ದ ವೀರಶೈವ-ಲಿಂಗಾಯತರನ್ನು ಸಿದ್ದರಾಮಯ್ಯ ಇಬ್ಭಾಗ ಮಾಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಅಧಿ ಕಾರಕ್ಕೆ ಬರುವ ಆಸೆಯಿಂದಾಗಿ ಜನರ ಹಿತಾಸಕ್ತಿ ಮರೆಯುತ್ತಿದ್ದಾರೆ ಎಂದರು.