Ram Mandir ಕಟ್ಟಿ 40% ಕಮಿಷನ್ ಆಡಳಿತ ನಡೆಸಿದರೆ ರಾಮರಾಜ್ಯವಾಗುತ್ತಾ?: ಶರಣಪ್ರಕಾಶ ಪಾಟೀಲ್
Team Udayavani, Jan 26, 2024, 11:59 AM IST
ರಾಯಚೂರು: ಅಧಿಕಾರ ಸಿಕ್ಕಾಗ ಶೇ.40 ಕಮಿಷನ್ ಪಡೆದು ಆಡಳಿತ ನಡೆಸಿ ಈಗ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಿಸಿದರೆ ರಾಮ ರಾಜ್ಯವಾಗುತ್ತದೆಯೇ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಟಾಂಗ್ ನೀಡಿದರು.
ನಗರದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಬಿಜೆಪಿಯವರು ಉತ್ತಮ ಆಡಳಿತ ನೀಡಿದರೆ ರಾಮರಾಜ್ಯವಾಗುತ್ತದೆ. ಮಂದಿರ ನಿರ್ಮಾಣ ಮಾಡುವುದರಿಂದ ಅಲ್ಲ. ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟರೆ, ಸಾಮಾನ್ಯ ಜನರ ಹಿತದೃಷ್ಟಿಯಿಂದ ಅಧಿಕಾರ ನಡೆಸಿದರೆ ರಾಮರಾಜ್ಯವಾಗುತ್ತದೆ ಎಂದು ತಿಳಿಸಿದರು.
ಬಿಜೆಪಿಯಿಂದ ಬಂದಿದ್ದ ಜಗದೀಶ ಶೆಟ್ಟರ್ ಮತ್ತೆ ಬಿಜೆಪಿ ಸೇರಿದ್ದಾರೆ. ಅವರನ್ನು ನಾವು ಗೌರವದಿಂದಲೇ ನಡೆಸಿಕೊಂಡಿದ್ದೇವೆ. ಸೋತವರಿಗೆ ಎಂಎಲ್ ಸಿ ಮಾಡಿದ ಉದಾಹರಣೆ ಇಲ್ಲ. ಆದರೆ, ಶೆಟ್ಟರ್ ಅವರನ್ನು ಮಾಡಿದೆವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಯಾವ ಪಕ್ಷವನ್ನು ಬೇಕಾದರು ಸೇರಬಹುದು. ಬಿಜೆಪಿಯವರು ಹತಾಶರಾಗಿದ್ದಾರೆ. ಜನರ ಬಳಿಗೆ ಹೋಗಲು ಮುಖ ಇಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರನ್ನು ಸೆಳೆದು ಚುನಾವಣೆ ನಡೆಸಲು ಮುಂದಾಗಿದ್ದಾರೆ. ಲಕ್ಷ್ಮಣ ಸವದಿ ಪಕ್ಷ ಸೇರುವ ವಿಚಾರ ಬಿಜೆಪಿಯವರ ಊಹಾಪೋಹ ಎಂದರು.