Raichur; ಹಣ ಬಿಡುಗಡೆಗೆ ಕೇಂದ್ರದಿಂದ ಸಮಸ್ಯೆ: ಸಚಿವ ರಹೀಂ ಖಾನ್
Team Udayavani, Feb 5, 2024, 3:37 PM IST
ರಾಯಚೂರು: ಕರ್ನಾಟಕದಿಂದ ನಾಲ್ಕು ಲಕ್ಷ ಕೋಟಿ ಕೇಂದ್ರಕ್ಕೆ ತಗೊಂಡು ಹೋಗುತ್ತಾರೆ. ಅಲ್ಲಿಂದ ದುಡ್ಡು ಕೊಡಲು ಮಾತ್ರ ಸಮಸ್ಯೆ ಮಾಡುತ್ತಾರೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹಿಮ್ ಖಾನ್ ದೂರಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಬರ ಪರಿಸ್ಥಿತಿ ಘೋಷಣೆಯಾಗಿದೆ. ಕಳೆದ ಆರು ತಿಂಗಳಿನಿಂದ ಕೇಂದ್ರ ಸರ್ಕಾರದ ಜತೆ ನಿರಂತರವಾಗಿ ಸಂಪರ್ಕ ಮಾಡಲಾಗುತ್ತಿದೆ. ಆದರೂ ಏನು ಬಿಡುಗಡೆ ಮಾಡಿಲ್ಲ. ಎಲ್ಲ ಸಚಿವರು ದೆಹಲಿಗೆ ಹೋಗಿ ಬಂದರೂ ಏನು ಪ್ರಯೋಜನವಾಗಿಲ್ಲ. ಹೀಗಾಗಿ ಹೋರಾಟದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.
ಈಗ ಲೋಕಸಭೆ ಚುನಾವಣೆ ಎದುರಾಗಿದೆ. ಹೀಗಾಗಿ ಬಿಜೆಪಿಯವರಿಗೆ ಏನಾದರೂ ವಿಚಾರ ಬೇಕಾಗಿದೆ. ಬಿಜೆಪಿಯವರು ಏನು ಕೆಲಸ ಮಾಡಿಲ್ಲ. 10 ವರ್ಷದಿಂದ ಯಾವುದು ಅಚ್ಛೆ ದಿನ್ ಬಂದಿದೆ ಎಂದು ಅವರೇ ಹೇಳಬೇಕು. ಯಾರ ವಿಕಾಸವನ್ನು ಮಾಡಿಲ್ಲ. ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದು ಮಾಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.