ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಿ
ಕುಷ್ಠರೋಗ ತಡೆಗೆ ಪ್ರತಿಜ್ಞಾವಿಧಿ ಬೋಧನೆ ಸ್ಪರ್ಶ ಜ್ಞಾನವಿಲ್ಲದ ಮಚ್ಛೆ ಇದ್ದರೆ ಚಿಕಿತ್ಸೆ ಪಡೆಯಿರಿ
Team Udayavani, Jan 31, 2020, 12:24 PM IST
ಸಿಂದನೂರು: ಕುಷ್ಠರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಸರಕಾರ ಅನೇಕ ಯೋಜನೆ, ಕಾರ್ಯಕ್ರಮ ರೂಪಿಸಿದೆ. ಪ್ರತಿಯೊಬ್ಬರು ಕುಷ್ಠರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ನಾಗರಾಜ ಬಿ. ಪಾಟೀಲ ಹೇಳಿದರು.
ನಗರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ರಭಾರಿ ತಹಶೀಲ್ದಾರ್ ಅಂಬಾದಾಸ್ ಅಧ್ಯಕ್ಷತೆಯಲ್ಲಿ ನಡೆದ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರೋಗ್ಯ ಇಲಾಖೆಯಿಂದ ಎಲ್ಲ ಶಾಲೆಗಳಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮ ನಡೆಸಲಾಗುತ್ತಿದೆ. ಶಾಲೆಯ ಮುಖ್ಯಗುರುಗಳು ಪ್ರಾರ್ಥನೆ ವೇಳೆ ಮಕ್ಕಳಿಂದ ಕುಷ್ಠರೋಗದ ಬಗ್ಗೆ ಘೋಷಣೆ ಹೇಳಿಸಬೇಕು. ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಬೇಕು. ಕುಷ್ಠರೋಗ ಲಕ್ಷಣ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಮಹಾತ್ಮ ಗಾಂಧೀಜಿಯವರು ಕುಷ್ಠರೋಗ ಮುಕ್ತ ಭಾರತ ನಿರ್ಮಾಣ ಕನಸು ಕಂಡಿದ್ದರು. ಅವರ ಕನಸು ನನಸಾಗಿಸಬೇಕು ಶ್ರಮಿಸಬೇಕು ಎಂದರು.
ಯಾವುದೇ ವ್ಯಕ್ತಿ ದೇಹದ ಮೇಲೆ ತಿಳಿಬಳಿ ಅಥವಾ ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ ಕಂಡುಬಂದಲ್ಲಿ ಹತ್ತಿರದ ಆರೋಗ್ಯ ಸಹಾಯಕರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು. ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಬಹುದು ಎಂದರು.
ಪ್ರಭಾರಿ ತಹಶೀಲ್ದಾರ್ ಅಂಬಾದಾಸ್, ಆರೋಗ್ಯ ಸಿಬ್ಬಂ ದಿ ಜಿ. ರಂಗನಾಥ, ಜಿಲ್ಲಾ ಸಂಯೋಜಕ ವೀರೇಶ ಗವಿಮಠ, ಡಾ|ಸಂತೋಷ ಪಾಟೀಲ, ಹಿರಿಯ ಆರೋಗ್ಯ ಸಹಾಯಕ ಸಂಗನಗೌಡ ಪಾಟೀಲ, ಆಶಾ ಮೇಲ್ವಿಚಾರಕಿ ರೇಣುಕಮ್ಮ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ತ್ರಿವೇಣಿ, ಸಿ.ಎಂ. ಮಲ್ಲಿಕಾರ್ಜುನ, ಸುರೇಶ ವಿರೂಪಾಪುರ ಇತರರು ಇದ್ದರು.