ಪಕ್ಕದಲ್ಲಿದೆ ಕನ್ನಡ ಕಸ್ತೂರಿ: ಕೈನಲ್ಲಿ ಇಂಗ್ಲಿಷ್ ತುತ್ತೂರಿ!
ಸರ್ಕಾರಿ ಶಾಲೆಗಳ ಇಂಗ್ಲಿಷ್ ಮೀಡಿಯಂಗೆ ಡಿಮ್ಯಾಂಡ್
Team Udayavani, Jun 10, 2019, 1:16 PM IST
•ಸಿದ್ಧಯ್ಯಸ್ವಾಮಿ ಕುಕುನೂರು
ರಾಯಚೂರು: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿದ ಸರ್ಕಾರದ ನಿರ್ಣಯಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ನಿರೀಕ್ಷೆ ಮೀರಿ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಸರ್ಕಾರ ನಿಗದಿತ ಸೀಟು ನೀಡಿದ್ದರಿಂದ ಯಾರಿಗೆ ಪ್ರವೇಶ ನೀಡಬೇಕು ಎಂಬುದೇ ಸಮಸ್ಯೆಯಾಗಿ ಪರಿಣಮಿಸಿದೆ.
ಪ್ರಯೋಗಾತ್ಮಕವಾಗಿ ಜಿಲ್ಲೆಯ 33 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಸಕ್ತ ವರ್ಷದಿಂದ ಸರ್ಕಾರ ಇಂಗ್ಲಿಷ್ ಮೀಡಿಯಂ ಶಾಲೆ ಆರಂಭಿಸಿದರೆ, 9 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಯುಕೆಜಿ ಕೂಡ ಆರಂಭವಾಗಿದೆ. ಪ್ರತಿ ತರಗತಿಗೆ 30 ಸೀಟುಗಳನ್ನು ಮಾತ್ರ ಕಾಯ್ದಿರಿಸಲಾಗಿದೆ. ಅದಕ್ಕಾಗಿಯೇ ಪ್ರತ್ಯೇಕ ತರಗತಿ ಕೋಣೆ ನಿರ್ಮಿಸಿದ್ದು, 45 ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ಆರಂಭದಲ್ಲಿ ಅಷ್ಟೇನು ಸ್ಪಂದನೆ ಸಿಗದ ಕಾರಣ ಶಿಕ್ಷಕರು ಕೂಡ ನಿರುಮ್ಮಳರಾಗಿದ್ದರು. ಆದರೆ, ಈಗ ಒಂದೊಂದು ಶಾಲೆಯಲ್ಲಿ ನೂರಾರು ಅರ್ಜಿಗಳನ್ನು ಪಡೆದಿದ್ದು, ಪಾಲಕರು ನಮಗೇ ಸೀಟು ಕೊಡಿ ಎಂದು ಪಟ್ಟು ಹಿಡಿಯುತ್ತಿದ್ದಾರೆ. ಇದು ಶಾಲಾಡಳಿತ ಮಂಡಳಿಗೆ ತಲೆ ನೋವಾಗಿ ಪರಿಣಮಿಸಿದೆ.
ಹೆಚ್ಚುವರಿ ಮಕ್ಕಳಿಗೆ ಪ್ರವೇಶ ನೀಡಲು ಸರ್ಕಾರದ ಆದೇಶವಿಲ್ಲ. ಹೀಗಾಗಿ ಶಾಲೆ ಮುಖ್ಯಶಿಕ್ಷಕರು ಲಾಟರಿ ಮೂಲಕ ಆಯ್ಕೆಗೆ ಮುಂದಾಗಿದ್ದಾರೆ. ಅರ್ಜಿ ಸಲ್ಲಿಸಿದ ಎಲ್ಲ ಪಾಲಕರ ಸಭೆ ನಡೆಸಿ ಅವರ ಸಮಕ್ಷಮದಲ್ಲಿ 30 ಮಕ್ಕಳ ಹೆಸರನ್ನು ಲಾಟರಿಯಲ್ಲಿ ಆಯ್ಕೆ ಮಾಡಲಾಗುತ್ತಿದೆ. ಯಾವ ಮಕ್ಕಳ ಹೆಸರು ಚೀಟಿಯಲ್ಲಿ ಬರುವುದೋ ಆ ಮಗುವಿಗೆ ಪ್ರವೇಶ ನೀಡಲಾಗುತ್ತಿದೆ.
ಪ್ರಭಾವಿಗಳ ಒತ್ತಡ: ಇನ್ನು ತಮ್ಮ ಮಗುವನ್ನು ಇಂಗ್ಲಿಷ್ ಮೀಡಿಯಂಗೆ ಸೇರಿಸಬೇಕು ಎಂಬ ಕಾರಣಕ್ಕೆ ಪಾಲಕರು ಶಾಲೆ ಮುಖ್ಯ ಶಿಕ್ಷಕರಿಗೆ ಸ್ಥಳೀಯ ಪ್ರಭಾವಿ ನಾಯಕರಿಂದ ಒತ್ತಡ ಹೇರುತ್ತಿದ್ದಾರೆ. ಗ್ರಾಪಂ ಅಧ್ಯಕ್ಷರು, ಜಿಪಂ ಸದಸ್ಯರು, ಶಾಸಕರ ಆಪ್ತರ ಮೂಲಕ ಕರೆ ಮಾಡಿಸುತ್ತಿದ್ದಾರೆ. ನಮ್ಮಲ್ಲಿ ಹೆಚ್ಚು ಸೀಟುಗಳಿಲ್ಲ ಎಂದರೂ ಸರ್ಕಾರಿ ಶಾಲೆಗೆ ಎಷ್ಟು ಮಕ್ಕಳು ಬಂದರೂ ಸೇರಿಸಿಕೊಳ್ಳಬೇಕು ಎಂದು ದಬಾಯಿಸುತ್ತಿದ್ದಾರೆ ಎಂದು ಶಿಕ್ಷಕರು ಅಲವತ್ತುಕೊಳ್ಳುತ್ತಿದ್ದಾರೆ.
ಕೂಲಿ ಕಾರ್ಮಿಕರೇ ಹೆಚ್ಚು: ಇಂಗ್ಲಿಷ್ ಮೀಡಿಯಂ ಮಕ್ಕಳನ್ನು ಸೇರಿಸಲು ಆಸಕ್ತಿ ತೋರಿದವರಲ್ಲಿ ಹೆಚ್ಚಾಗಿ ರೈತರು, ಕೃಷಿ ಕೂಲಿ ಕಾರ್ಮಿಕರೇ ಇದ್ದಾರೆ. ಕನ್ನಡ ಮಾಧ್ಯಮದಲ್ಲೂ ಓದಿಸಬಹುದು ಎಂದರೂ ಇಲ್ಲ ನಮ್ಮ ಮಗುವಿಗೆ ಇಲ್ಲೇ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಇದರಿಂದ ಪೇಚಿಗೆ ಸಿಲುಕಿದ ಸಿಬ್ಬಂದಿ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಿ ಮಕ್ಕಳನ್ನು ಆಯ್ಕೆ ಮಾಡಿದ್ದಾರೆ. 4.5 ವರ್ಷ ತುಂಬಿದ್ದರೆ ಎಲ್ಕೆಜಿಗೆ, 5.10 ವರ್ಷವಾಗಿದ್ದರೆ ಮಾತ್ರ ಒಂದನೇ ತರಗತಿಗೆ ಪ್ರವೇಶ ನೀಡಲಾಗಿದೆ. ಇದರಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅರ್ಜಿ ಕೈ ಬಿಡಲಾಗುತ್ತಿದೆ.
ಖಾಸಗಿ ಶಾಲೆಗಳಿಗೆ ಕುತ್ತು: ಇಂಗ್ಲಿಷ್ ಮೀಡಿಯಂ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಕೇಂದ್ರಗಳಾಗಿದ್ದ ಕೆಲ ಶಿಕ್ಷಣ ಸಂಸ್ಥೆಗಳಿಗೆ ಇದರಿಂದ ಪೆಟ್ಟು ಬೀಳುವ ಸಾಧ್ಯತೆಗಳಿವೆ. ಗ್ರಾಮೀಣ ಭಾಗದಲ್ಲಿ ಎರಡ್ಮೂರು ಹಳ್ಳಿಗಳಿಗೆ ಒಂದರಂತೆ ಖಾಸಗಿ ಶಾಲೆಗಳು ತಲೆ ಎತ್ತಿದ್ದವು. ಇಂಗ್ಲಿಷ್ ಮೀಡಿಯಂ ಹೆಸರಿನಲ್ಲಿ ಪಾಲಕರಿಂದ ಹಣ ವಸೂಲಿ ಮಾಡುತ್ತಿದ್ದವು. ಒಂದು ವೇಳೆ ಸರ್ಕಾರದ ಈ ಯೋಜನೆ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಯಾಗಿದ್ದೇ ಆದಲ್ಲಿ ಖಾಸಗಿ ಶಾಲೆಗಳಿಗೆ ಕಂಟಕ ಎದುರಾಗುವುದು ನಿಶ್ಚಿತ.
ಆರಂಭದಲ್ಲಿ ಪಾಲಕರು ಐದಾರು ಅರ್ಜಿ ಮಾತ್ರ ಪಡೆದಿದ್ದರು. ಆದರೆ, ಜೂ.5ರೊಳಗಾಗಿ ನೂರಾರು ಜನ ಬಂದರು. ಎಲ್ಲ ಮಕ್ಕಳಿಗೂ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದರೂ ಕೇಳಿರಲಿಲ್ಲ. ಅಗತ್ಯಕ್ಕಿಂತ ಹೆಚ್ಚು ಜನ ಹಾಜರಾದರು. ಹೀಗಾಗಿ ವಿಧಿ ಇಲ್ಲದೆ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.
• ಐ.ಎಸ್. ರಾಜು,
ಪ್ರಾಚಾರ್ಯರು ಕರ್ನಾಟಕ ಪಬ್ಲಿಕ್ ಸ್ಕೂಲ್ ಮಟಮಾರಿ
ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದ ಆರಂಭಿಸಿದ ಆಂಗ್ಲ ಮಾಧ್ಯಮ ತರಗತಿಗಳಿಗೆ ಸರ್ಕಾರ ವಿದ್ಯಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಿಸಿತ್ತು. ಅದನ್ನು ಹೆಚ್ಚಿಸುವ ಕುರಿತು ಇಲಾಖೆ ಮಟ್ಟದಲ್ಲಿ ಮೇಲಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಆದರೆ, ನಮಗೆ ಇನ್ನೂ ಯಾವುದೇ ಅಧಿಕೃತ ಆದೇಶ ಕೈ ಸೇರಿಲ್ಲ. ಹೀಗಾಗಿ ಹೆಚ್ಚುವರಿ ಅರ್ಜಿ ಸಲ್ಲಿಕೆಯಾದಲ್ಲಿ ನಾವು ಲಾಟರಿ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಿದ್ದೇವೆ.
•ಬಿ.ಕೆ.ನಂದನೂರು, ಡಿಡಿಪಿಐ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು