ಎಲೆಂದರಲ್ಲಿ ವಿಷಯುಕ್ತ ತಾಜ್ಯ ವಿಲೇವಾರಿ
Team Udayavani, Dec 23, 2021, 1:12 PM IST
ಕನಕಪುರ: ಕೈಗಾರಿಕೆಗಳಲ್ಲಿ ಉತ್ಪತ್ತಿಯಾಗುವ ವಿಷಯುಕ್ತ ತ್ಯಾಜ್ಯವನ್ನು ನಿಯಮ ಬಾಹಿರವಾಗಿ ಸಾರ್ವಜನಿಕ ಸ್ಥಳಗಳಲ್ಲಿ ವಿಲೇವಾರಿ ಮಾಡಿರುವುದು ರಸ್ತೆ ಜಕ್ಕಸಂದ್ರ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಬೃಹದಾ ಕಾರ ವಾಗಿ ಬೆಳೆದಂತೆಲ್ಲಾ ಸುತ್ತಮುತ್ತಲ ಗ್ರಾಮಗಳ ಜನರಿಗೆ ಅಷ್ಟೆ ಆತಂಕವೂ ಎದುರಾಗುತ್ತಿದೆ.
ಏಷ್ಯಖಂಡ ದಲ್ಲೇ ಎರಡನೇ ಅತಿದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆ ಪಡೆದಿರುವ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೆಲವು ಕೈಗಾರಿಕೆಗಳು ವಿಷಯುಕ್ತ ತ್ಯಾಜ್ಯ ವನ್ನು ನಿಯಮ ಬಾಹಿರವಾಗಿ ಕದ್ದುಮುಚ್ಚಿ ಎಲ್ಲೆಂದರಲ್ಲಿ ವಿಲೇ ವಾರಿ ಮಾಡುತ್ತಿದ್ದಾರೆ. ಇದರಿಂದ ಹಾರೋಹಳ್ಳಿ ಸುತ್ತಮುತ್ತಲ ವಾತಾವರಣ ಹದಗೆಟ್ಟಿದ್ದು ಕೈಗಾರಿಕೆಗಳ ಸ್ಥಾಪನೆ ವರವೋ? ಶಾಪವೋ? ಎಂಬ ಅನುಮಾನ ಸ್ಥಳೀಯ ಜನರನ್ನು ಕಾಡುತ್ತಿದೆ.
ವಾತಾವರಣ ಮಲಿನ: ತಾಲೂಕಿನ ಮರಳವಾಡಿಯ ಚೀಲೂರು ಗ್ರಾಪಂ ವ್ಯಾಪ್ತಿಯ ರಸ್ತೆ ಜಕ್ಕಸಂದ್ರ ಬಳಿಯ ಕತಾ ಫಾರಂ ಹೌಸ್ ಬಳಿ ಕಿಡಿಗೇಡಿಗಳು ವೈದ್ಯಕೀಯ ತ್ಯಾಜ್ಯ ಹಾಗೂ ರಾಸಾಯನಿಕಯುಕ್ತ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ. ಇದರಿಂದ ಸುತ್ತ ಮುತ್ತಲು ಗಬ್ಬುವಾಸನೆ ಬೀರುತ್ತಿದ್ದು ವಾತಾವರಣ ಕಲುಷಿತವಾಗುತ್ತಿದೆ.
ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಖಾಲಿ ಜಾಗಗಳಲ್ಲಿ ಔಷಧಿಗಳಲ್ಲಿ ಬಳಸುವ ತ್ಯಾಜ್ಯ ತಂದು ಸುರಿದಿರುವ ಅನೇಕ ಉದಾಹರಣೆಗಳಿವೆ. ಇಂತಹ ಕೃತ್ಯಗಳಿಗೆ ಸಂಬಂಧಪಟ್ಟ ಪರಿಸರ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕುವುದರಲ್ಲಿ ವಿಫಲವಾಗಿದ್ದಾರೆ ಎಂಬುದು ಸ್ಥಳೀಯರ ದೂರು.
ಕಾರ್ಖಾನೆಗಳ ಕರ್ಮಕಾಂಡ: ಯಾವುದೇ ಕಾರ್ಖಾನೆ ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂಬ ನಿಯಮ ಇದೆ. ಕೈಗಾರಿಕೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕೆಲವು ಏಜೆನ್ಸಿಗಳು ಕಾರ್ಯ ನಿರ್ವಹಿಸುತ್ತಿವೆ. ಹಾರೋಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಕೆಲವು ಕೈಗಾರಿಕೆ ಗಳು ತ್ಯಾಜ್ಯವನ್ನು ವೈಜ್ಞಾನಿಕ ವಿಲೇವಾರಿ ಮಾಡುವಂತೆ ಖಾಸಗಿ ಏಜೆನ್ಸಿಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ.
ಇನ್ನು ಕೆಲವು ಕೈಗಾರಿಗಳು ಹಣ ಉಳಿಸಲು ಯಾವುದೇ ಒಪ್ಪಂದ ಮಾಡಿಕೊಳ್ಳದೆ ಕದ್ದುಮುಚ್ಚಿ ರಾತ್ರೋರಾತ್ರಿ ಎಲ್ಲೆಂದರಲ್ಲಿ ವಿಷಯುಕ್ತ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಒಂದೆಡೆಯಾದರೆ ಮತ್ತೂಂದೆಡೆ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವುದಾಗಿ ಕೈಗಾರಿಕೆ ಗಳಿಂದ ಹಣ ಪಡೆದ ಕೆಲವು ಖಾಸಗಿ ಏಜೆನ್ಸಿಗಳು ವೈಜ್ಞಾ ನಿಕ ವಿಲೇವಾರಿಗೆ ತಗಲುವ ವೆಚ್ಚವನ್ನು ಉಳಿಸಿಕೊಳ್ಳಲು ಸಾರ್ವಜನಿಕ ಸ್ಥಳಗಳಲ್ಲಿ ವಿಷಯುಕ್ತ ತ್ಯಾಜ್ಯವನ್ನು ಸುರಿದು ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಆಕ್ರೋಶ ಸ್ಥಳೀಯರದ್ದು.
ಮೇಲುಸ್ತುವಾರಿ ಯಾರಿಗೆ? ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆಯುವ ನಿಯಮ ಬಾಹಿರ ಕೃತ್ಯಗಳ ಮೇಲೆ ಹದ್ದಿನ ಕಣ್ಣಿಡಲು ಕೈಗಾರಿಕಾ ಇಲಾಖೆಯು ವಾಚರ್ಗಳನ್ನು ನೇಮಕ ಮಾಡಿದೆಯಂತೆ.ಆದರೆ ಈವರೆಗೂ ಇಂತಹ ಕೃತ್ಯಗಳನ್ನು ಪತ್ತೆ ಹಚ್ಚಿ ಸಂಬಂಧ ಪಟ್ಟ ಅಧಿಕಾರಿಗಳ ಗಮ ನಕ್ಕೆ ತಂದು ಕಡಿವಾಣ ಹಾಕುವ ಉದಾಹರಣೆಗಳಿಲ್ಲ. ವಾಚರ್ಗ ಳಾಗಿ ಎಷ್ಟು ಮತ್ತು ಯಾರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬು ದರ ಮಾಹಿತಿ ಜನರಿಗಿಲ್ಲ. ವಾಚರ್ಗಳು ಹಣದಾಸೆಗೆ ಕೈಗಾರಿಕೆಗಳ ಜೊತೆ ಶಾಮಿಲಾಗಿರ ಬಹುದು ಎಂಬ ಶಂಕೆ ಜನರಲ್ಲಿದೆ.
ಮಲಿನಗೊಂಡ ಅಂತರ್ಜಲ: ಹಾರೋಹಳ್ಳಿಯಲ್ಲಿ ಕೈಗಾರಿಕೆಗಳು ತಲೆ ಎತ್ತಿದ ನಂತರ ಕೈಗಾರಿಕಾ ಪ್ರದೇಶದ ಸುತ್ತಮುತ್ತಲ ಜಕ್ಕಸಂದ್ರ, ಚೀಲೂರು, ಕಾಳೇಗೌಡನ ದೊಡ್ಡಿ, ಹೆಬ್ಬಿದಿರುಮೆಟ್ಟಿಲು.ದೇವರ ಕಗ್ಗಲಹಳ್ಳಿ, ಬನ್ನಿಕುಪ್ಪೆ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಕೆರೆಗಳಿಗೆ ವಿಷಯುಕ್ತ ತ್ಯಾಜ್ಯಸೇರಿ ಅಂತರ್ಜಲ ಮಲಿನಗೊಂಡಿದೆ.
ಕೊಳವೆ ಬಾವಿಗಳ ನೀರು ಕುಡಿಯ ಲು ಯೋಗ್ಯ ವಲ್ಲ ಎಂದು ವಿದೇಶಿ ಖಾಸಗಿ ಸಂಸ್ಥೆ ಯೊಂದು ವರದಿ ಬಹಿರಂಗಪಡಿಸಿದೆ. ಇದೇ ನೀರನ್ನು ಬಳಸುವ ಜನರು ಆನೇಕ ಕಾಯಿಲೆಗಳಿಗೆ ತುತ್ತಾ ಗುತ್ತಿದ್ದಾರೆ. ಅಲ್ಲದೆ ಸುತ್ತ ಮುತ್ತಲ ರೈತರ ಕೃಷಿ ಬೆಳೆಗಳ ಇಳುವರಿ ಕುಂಠಿತಗೊಂಡು ಕೆರೆ ಕಟ್ಟೆಗಳಲಿದ್ದ ಜಲಚರಗಳು ಪ್ರಾಣಬಿಟ್ಟಿವೆ.
ಕೆರೆ ನೀರು ಕುಡಿದ ಪ್ರಾಣಿ ಪಕ್ಷಿಗಳು ಹಸು, ಕುರಿ, ಮೇಕೆ, ಸಾಕು ಪ್ರಾಣಿಗಳು ಆನಾ ರೋಗ್ಯಕ್ಕೂ ತುತ್ತಾಗಿವೆ. ಇದರಲ್ಲಿ ಕೆಲವು ಮೃತಪಟ್ಟಿರುವ ಉದಾಹರಣೆಗಳು ಇವೆ. ಆನೇಕ ರೈತರು ನಷ್ಟಕ್ಕೀಡಾಗಿದ್ದಾರೆ.
ಇಷ್ಟೆಲ್ಲ ಅನಾಹುತ ಸಂಭವಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಿಯಮ ಉಲ್ಲಂ ಸಿ ವಿಷಯುಕ್ತ ತ್ಯಾಜ್ಯ ಸಾರ್ವಜನಿಕ ವಾಗಿ ವಿಲೇವಾರಿ ಮಾಡಿ ಮೊಂಡುತನ ಪ್ರದರ್ಶನ ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಪರವಾಗಿ ರದ್ದು ಮಾಡಿ ಬಿಸಿ ಮುಟ್ಟಿಸುವ ಕೆಲಸಕ್ಕೆ ಮಾತ್ರ ಮುಂದಾಗದಿ ರುವುದು ಮಾತ್ರ ವಿಪರ್ಯಾಸ.
ಮಾಲಿನ್ಯ ನಿಯಂತ್ರಣ ಮಂಡಳಿ ಪಾರದರ್ಶಕವಾಗಿರಬೇಕು
ಜಲಕಾಯ್ದೆ ಸೆಕ್ಷನ್ 6ರ ಪ್ರಕಾರ ಮಾಲಿನ್ಯ ಮಂಡಳಿ ಅಧ್ಯಕ್ಷರಾಗುವವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮಂಡಳಿಯೊಂದಿಗೆ ಸಂಬಂಧ ಹೊಂದಿರಬಾರದು ಎಂದು ಹೇಳಲಾಗಿದೆ. ಜೊತೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗುವವರಿಗೂ ಮಾಲಿನ್ಯ ಉಂಟು ಮಾಡುವ ಕಂಪನಿಗಳಿಗೂ ಸಂಬಂಧವಿರಬಾರದೆಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೇ ಇತ್ತೀಚಿಗೆ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ನೇಮಕವಾಗಿರುವವರು ಮಾಲಿನ್ಯವುಂಟು ಮಾಡುವ ಹಲವು ಕಂಪನಿಗಳ ಸಲಹೆಗಾರರಾಗಿದ್ದರು. ಹಾಗೂ ಸ್ವತಃ ಹಲವು ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ನೇಮಕಕ್ಕೂ ಮುನ್ನಾ 2 ತಿಂಗಳ ಹಿಂದಷ್ಟೇ ರಾಜೀನಾಮೆ ಸಲ್ಲಿಸಿದ್ದರು. ನೇಮಕಾತಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿತ್ತು.
ಕಾನೂನು ಕ್ರಮಕ್ಕೆ ಆಗ್ರಹ
ಕೈಗಾರಿಕೆಗಳಲ್ಲಿ ಉತ್ಪತ್ತಿಯಾಗುವ ವಿಷಯುಕ್ತ ತ್ಯಾಜ್ಯವನ್ನು ಕೆಲವು ಕೈಗಾರಿಕೆಗಳು ನಿಯಮ ಬಾಹಿರವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕದ್ದುಮುಚ್ಚಿ ವಿಲೇವಾರಿ ಮಾಡಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಚೀಲೂರು ಗ್ರಾಪಂ ವ್ಯಾಪ್ತಿಯ ರಸ್ತೆ ಜಕ್ಕಸಂದ್ರ ಬಳಿ ಇರುವ ಕತಾ ಫಾರಂಹೌಸ್ ಬಳಿ ಕಿಡಿಗೇಡಿಗಳು ರಾಸಾಯನಿಕಯುಕ್ತ ತ್ಯಾಜ್ಯಗಳನ್ನು ಸುರಿದು ಹೋಗಿದ್ದು ಸುತ್ತ ಮುತ್ತಲಿನ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಚೀಲೂರು ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ