ಪ್ಲಾಸ್ಟಿಕ್ ನಿಷೇಧಿಸಿದ್ದರೂ ಬಳಕೆ ನಿಂತಿಲ್ಲ
Team Udayavani, Sep 17, 2022, 2:45 PM IST
ಕುದೂರು: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಇನ್ನೂ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಂತಿಲ್ಲ. ಹೌದು, ಕುದೂರು ವ್ಯಾಪ್ತಿಯಲ್ಲಿ ಪ್ರತಿಯೊಂದು ಅಂಗಡಿಗಳಲ್ಲೂ ಪ್ಲಾಸ್ಟಿಕ್ ಲೋಟ, ಬ್ಯಾಗ್, ಊಟದ ತಟ್ಟೆಗಳು, ಪ್ಲಾಸ್ಟಿಕ್ ಕವರ್ಗಳು ಮತ್ತು ಎಲ್ಲಾ ರೀತಿಯ ಕವರ್ಗಳ ಬಳಕೆ ಮತ್ತು ಮಾರಾಟ ಎಗ್ಗಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ. ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ಆದೇಶಕ್ಕೂ ಬೆಲೆ ಇಲ್ಲದಂತಾಗಿದೆ.
ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಸರ್ಕಾರಗಳು ಕಾರ್ಯಾ ಚರಣೆ ನಡೆಸಿ, ಅರಿವು ಮೂಡಿಸುತ್ತಿದ್ದರೂ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ರಾಮನಗರ ಜಿಲ್ಲೆ ಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಆದರೆ, ಅಧಿಕಾರಿಗಳು ಕೇವಲ ಕಾಟಾಚಾರಕ್ಕಾಗಿ ರಾಮನಗರ, ಚನ್ನಪಟ್ಟಣದಲ್ಲಿ ಮಾತ್ರ ದಾಳಿ ನಡೆಸಿ, ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಆದರೆ, ಮಾಗಡಿ, ಕುದೂರು ಸುತ್ತಮುತ್ತ ರಾಜಾರೋಷವಾಗಿ ಪ್ಲಾಸ್ಟಿಕ್ ಕವರ್ ಗಳನ್ನು ಬಳಸುತ್ತಿದ್ದಾರೆ. ಈ ಭಾಗದವರು ಅಧಿಕಾರಿ ಗಳಿಗೆ ಮಂತ್ಲಿ ಕೊಟ್ಟು ಬುಕ್ ಮಾಡಿಕೊಂಡಿದ್ದಾರೆಯೂ ಏನೋ ಗೊತ್ತಿಲ್ಲ. ಆದರೆ, ಇದುವರೆವಿಗೂ ಅಧಿಕಾರಿ ಗಳು ಇಲ್ಲಿಗೆ ಬಂದು ಒಂದು ಬಾರಿಯೂ ದಾಳಿ ಮಾಡಿದ ಉದಾಹರಣೆಯಿಲ್ಲ. ಅಧಿಕಾರಿಗಳು ಮಾಗಡಿ ತಾಲೂಕಿನಲ್ಲಿ ಪ್ಲಾಸ್ಟಿಕ್ ಪಡಿಸಿಕೊಳ್ಳಲು ವಿಫಲರಾಗಿದ್ದಾರೆ.
ಪರಿಸರಕ್ಕೆ ಪ್ಲಾಸ್ಟಿಕ್ ಅಪಾಯ: ಜಿಲ್ಲೆಯಲ್ಲಿ ಪರಿಸರ ಹಾಗೂ ಜೀವಿಗಳ ಪ್ರಾಣಕ್ಕೆ ಅಪಾಯವಿದೆ. ಹೀಗಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ಹೊರಡಿಸಿರುವ ಆದೇಶ ಕೇವಲ ನೋಟಿಸ್ಗೆ ಸೀಮಿತವಾಗಿದಿಯೇ? ಪತ್ರಿಕೆ ಗಳಲ್ಲಿ ಸುದ್ದಿ ಬಂದ ಮೇಲೆ ಅಧಿಕಾರಿಗಳು ಕಾಟಾ ಚಾರಕ್ಕೆ ಒಂದೆರಡು ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಅದು ಬಿಟ್ಟರೆ ಮತ್ತೆ ಈ ಕಡೆ ತಿರುಗಿಯೂ ನೋಡುವುದಿಲ್ಲ. ಬೇರೆ ಜಿಲ್ಲೆಗಳಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅಧಿಕಾರಿಗಳು ತಿಳುವಳಿಕೆ ನೀಡಿ, ಪ್ಲಾಸ್ಟಿಕ್ ಬಳಕೆ ಬೇಡ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಇಲ್ಲಿ ಇದುವರೆವಿಗೂ ಯಾವ ಜಾಗೃತಿಯೂ ನಡೆದಿಲ್ಲ. ಇಲ್ಲಿರುವ ಅಧಿಕಾರಿಗಳೆಲ್ಲ ಜಿಡ್ಡು ಹಿಡಿದ್ದಾರೆ ಎಂಬ ಆರೋಪ ಜನರಿಂದ ಕೇಳಿ ಬರುತ್ತಿದೆ.
ಒಮ್ಮೆಯಾದರೂ ಇತ್ತ ಕಡೆ ಬಂದು ರಾಜಾರೋಷವಾಗಿ ಕವರ್ ಮಾಡುವವರನ್ನು ಹಿಡಿದು ದಂಡ ಹಾಕಿದ್ದಾರೆಯೇ? ಎಲ್ಲೂ ಕುಳಿತುಕೊಂಡು ಒಂದೆರಡು ಕಡೆ ದಾಳಿ ಮಾಡಿದರೆ, ಮುಗಿಯಿತು. ಇನ್ನು ಯಾರಾದರೂ ಮಾರಾಟ ಮಾಡಿಕೊಳ್ಳಲ್ಲಿ, ನಮಗೇನು ಆಗಬೇಕು ಎಂದು ಅಧಿಕಾರಿಗಳು ಸುಮ್ಮನಿದ್ದಾರೆ.? ವಾರದಲ್ಲಿ ಮೂರು ದಿನ ವಾಹನಗಳಲ್ಲಿ ಲೋಡ್ ಗಟ್ಟಲೆ ತುಂಬಿಕೊಂಡು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದರೂ, ನಮಗೂ ಅದಕ್ಕೂ ಯಾವುದೇ ಸಂಬಂದವಿಲ್ಲವೇನೂ ಎಂಬಂತೆ ಕಂಡರೂ ಕಾಣದಂತೆ ಅಧಿಕಾರಿಗಳು ಕುಳಿತ್ತಿದ್ದಾರೆ. ಸರ್ಕಾರದ ಆದೇಶದಂತೆ ಮೈಕ್ರಾನ್ ಗಿಂತ ತೆಳುವಾದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಭಿತಿಪತ್ರ, ತೋರಣ, ಫ್ಲೆಕ್ಸ್, ತಟ್ಟೆ, ಚಮಚ, ಊಟದ ಟೇಬಲ್ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಥರ್ಮಾಕೋಲ್ ನಿಂದ ತಾರಾದ ವಸ್ತುಗಳ ಬಳಕೆ ನಿಷೇಧಿಸಿದೆ.
ನಿಷೇಧವಿದ್ದರೂ ಮಾರಾಟ: ಜಿಲ್ಲಾಡಳಿತ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ ಹಾಗೂ ಮಾರಾಟ ಬಳಕೆ ನಿಷೇಧಿಸಿ 2019ರ ಅಕ್ಟೋಬರ್ 2ರಂದು ಆದೇಶ ಹೊರಡಿಸಿದೆ. ಆದರೆ, ರಾಮನಗರ ಜಿಲ್ಲೆಯಲ್ಲಿ ಇದುವರೆವಿಗೂ ಅನುಷ್ಠಾನಗೊಂಡಿಲ್ಲ ಎಂದು ಅಂಕಿ-ಅಂಶಗಳು ಸಾರುತ್ತಿವೆ. ಜಿಲ್ಲೆ ಹಾಗೂ ಗ್ರಾಮೀಣ ಭಾಗದಲ್ಲಿ ಇವತ್ತಿಗೂ ವಿವಿಧ ಸಮಾರಂಭಗಳಿಗೆ ಅಂಗಡಿಗಳಲ್ಲಿ ರಾಜಾರೋಷವಾಗಿ ಗ್ರಾಹಕರಿಗೆ ವಸ್ತುಗಳನ್ನು ಪ್ಲಾಸ್ಟಿಕ್ ಕ್ಯಾರಿ ಬ್ಯಾಗಿನಲ್ಲಿಯೇ ನೀಡಲಾಗುತ್ತಿದೆ. ಕಾಯ್ದೆ ಜಾರಿ ಬಳಿಕ ಆರಂಭದಲ್ಲಿ ಜಿಲ್ಲೆಯಲ್ಲಿ ವ್ಯಾಪಾಕ ಪ್ರಮಾಣದಲ್ಲಿ ದಾಳಿ ನಡೆಸಿ, ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆಯಲಾಯಿತು. ಪೇಪರ್ ಬ್ಯಾಗ್ಗಳು ಜಿಲ್ಲೆಯ ಹಲವಾರು ಕಡೆ ಕಂಡು ಬಂದವು. ಆದರೆ, ಅಧಿಕಾರಿಗಳು ಆರಂಭದಲ್ಲಿ ತೋರಿಸಿದ್ದ ಉತ್ಸಾಹ ಅನಂತರದಲ್ಲಿ ತೊರಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ.
ಒಟ್ಟಾರೆಯಾಗಿ ಪ್ಲಾಸ್ಟಿಕ್ ಬಳಕೆಯಿಂದ ಮಾನವನ ದೇಹ, ಪರಿಸರ, ಪ್ರಾಣಿ, ಪಕ್ಷಿಗಳ ಜೀವಕ್ಕೆ ಹಾನಿಯುಂಟು ಮಾಡುವುದರಲ್ಲಿ ನಾವು ಪ್ರಮುಖ ಪಾತ್ರ ವಹಿಸಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಪರ್ಯಾಯವಾಗಿ ಸಿಗುವ ವಸ್ತುಗಳನ್ನು ಬಳಸಿ, ಮಾನವನ, ಪ್ರಾಣಿ, ಪಕ್ಷಿಗಳ ಆರೋಗ್ಯ ಹಾಗೂ ಪರಿಸರವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಪರಿಣಾಮಕಾರಿ ಅನುಷ್ಠಾನಗೊಳಿಸಿಲ್ಲ : ಜಿಲ್ಲೆಯಲ್ಲಿ ಯಾವುದೇ ನಗರ ಸ್ಥಳೀಯ ಸಂಸ್ಥೆ ಗಳು ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಿಲ್ಲ. ಈ ಕಾಯ್ದೆ ಅನುಷ್ಠಾನಗೊಳಿಸಲು ಐದಾರು ಇಲಾಖೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು. ಇದರಲ್ಲಿ ಸ್ಥಳೀಯ ಸಂಸ್ಥೆ ಪಾತ್ರ ಮಹತ್ವದಾಗಿದೆ. ಈ ಕುರಿತು ಸರಿಯಾಗಿ ಸಭೆ ನಡೆಯುತ್ತಿಲ್ಲ. ಹೀಗಾಗಿ ನಿಷೇಧ ಎನ್ನುವುದು ಬರೀ ಕಡತಕ್ಕೆ ಸೀಮಿತವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಮನೆಯಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಕವರ್ಗಳಲ್ಲಿ ತುಂಬಿ ಎಲ್ಲೆಂದರಲ್ಲಿ ಎಸೆಯುವ ಪರಿಣಾಮ, ಆ ಚೀಲ ಗಳಲ್ಲಿ ಇರುವ ಆಹಾರವನ್ನು ತಿನ್ನಲು ಬಯಸುವ ಪ್ರಾಣಿ, ಪಕ್ಷಿಗಳು ಆಹಾರವನ್ನು ಪ್ಲಾಸ್ಟಿಕ್ ಸಮೇತ ನುಂಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿವೆ.
ಪ್ಲಾಸ್ಟಿಕ್ ಬಳಕೆಯನ್ನು ಸರ್ಕಾರ ನಿಷೇಧ ಮಾಡಲಾಗಿದೆ. ಆದರೆ, ಸಾಮಾನ್ಯರು ಬಳಸುತ್ತಿದ್ದಾರೆ. ಪ್ರತಿಯೊಂದು ಅಂಗಡಿಗಳಲ್ಲೂ ಕವರ್ ಬಳಸುತ್ತಿದ್ದಾರೆ. ಇದುವರಿಗೂ ಜಿಲ್ಲೆಯಿಂದ ಬಂದು ಅಂಗಡಿ ಮೇಲೆ ದಾಳಿ ಮಾಡಿದ ಉದಾ ಹರಣೆಯಿಲ್ಲ. ಇನ್ನಾದರೂ ಜಿಲ್ಲಾಧಿಕಾರಿ ಯವರು ಮನಸ್ಸು ಮಾಡಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸುತ್ತಾರಾ ಕಾದು ನೋಡೋಣ. – ಪದ್ಮನಾಬ್, ಕುದೂರು ಹೋಬಳಿ ಅಧ್ಯಕ್ಷ, ಕಸಾಪ
ಪ್ಲಾಸ್ಟಿಕ್ ನಿಷೇಧಿಸುವಂತೆ ಅಧಿಕಾರಿ ಗಳು ಹೇಳುತ್ತಾರೆ. ಆದರೆ, ಬಟ್ಟೆ ಚೀಲಕ್ಕೆ 5 ರೂ. ಕೈಯಿಂದ ನೀಡಬೇಕು. ಮಾರುಕಟ್ಟೆಗೆ ಬರುವವರು ಬರೀ ಕೈಯಲ್ಲಿಯೇ ಬರುತ್ತಾರೆ. ಕವರ್ ನೀಡದೆ ಹೋದರೆ ವಸ್ತುಗಳನ್ನು ಖರೀದಿಸದೆ, ಹಾಗೆಯೇ ಬೇರೆ ಅಂಗಡಿಗಳಿಗೆ ತೆರಳುತ್ತಾರೆ. -ಪ್ರಕಾಶ್, ವ್ಯಾಪಾರಿ
ಈಗಾಗಲೆ ಹಿಂದೆ ಸಭೆಯಲ್ಲಿ ಚರ್ಚಿಸಿ, ಕುದೂರು ವ್ಯಾಪ್ತಿಯ ಎಲ್ಲ ಅಂಗಡಿ ಗಳಿಗೂ 1 ತಿಂಗಳು ಕಾಲಾವಕಾಶ ನೀಡಿ, ಕ್ಯಾರಿ ಬ್ಯಾಗ್ ಮತ್ತು ಕವರ್ಗಳನ್ನು ವಶ ಪಡಿಸಿಕೊಂಡಿದ್ದೇವು. ಮತ್ತೆ ವರ್ತಕರು ಕವರ್ ಮಾರಾಟ ಮಾಡುತ್ತಿದ್ದಾರೆ. ಅಂಗಡಿ ಮೇಲೆ ದಾಳಿ ಮಾಡಿ, ಪ್ಲಾಸ್ಟಿಕ್ ವಶಪಡಿಸಿ ಕೊಂಡು ದಂಡ ವಿಧಿಸಲಾಗುವುದು. – ಲೋಕೇಶ್, ಪಿಡಿಒ, ಕುದೂರು
– ಕೆ.ಎಸ್.ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ